Kannada NewsKarnataka NewsLatestPolitics

*ಆಸ್ತಿ ತೆರಿಗೆ ನಿಯಮ ತಿದ್ದುಪಡಿ: ಡಿಸಿಎಂ ಮಾಹಿತಿ*

ಪ್ರಗತಿವಾಹಿನಿ ಸುದ್ದಿ:2024-25ನೇ ಸಾಲಿನ ಬಿಬಿಎಂಪಿ ಆಯವ್ಯಯಕ್ಕೆ ಸಂಬಂಧಿಸಿದಂತೆ ಸಚಿವರು, ಶಾಸಕರು, ಸಂಸದರು, ವಿಧಾನ ಪರಿಷತ್ ಹಾಗೂ ರಾಜ್ಯ ಸಭಾ ಸದಸ್ಯರುಗಳ ಜೊತೆ ಡಿಸಿಎಂ ಡಿ.ಕೆ.ಶಿವಕುಮಾರ್ ಪೂರ್ವಭಾವಿ ಸಭೆ ನಡೆಸಿದರು.

ಬೆಂಗಳೂರಿನ ಯೋಜನೆಗಳಿಗೆ ಸಂಬಂಧಿಸಿದಂತೆ ಬಜೆಟ್ ಮಂಡಣೆ ಮಾಡಬೇಕಿದೆ. ಬೆಂಗಳೂರಿನ ಕೆಲವು ಭಾಗ ಮಾತ್ರ ಯೋಜಿತವಾಗಿ ನಿರ್ಮಾಣವಾಗಿವೆ. ಉಳಿದಂತೆ ಯಾವ ಪ್ರದೇಶವೂ ಯೋಜಿತವಾಗಿ ಬೆಳೆದಿಲ್ಲ. ಹೀಗಾಗಿ ಬೆಂಗಳೂರಿಗೆ ಹೊಸ ರೂಪ ನೀಡಲು ನಾವು ಮುಂದಾಗಿದ್ದೇವೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ರವರು ತಿಳಿಸಿದರು.

ಬಿಬಿಎಂಪಿ 2024-25ನೇ ಸಾಲಿನ ಆಯವ್ಯಯದ ಸಿದ್ದತೆಗೆ ಸಲಹೆ ಮತ್ತು ಸೂಚನೆಗಳನ್ನು ಪಡೆಯುವ, ಕುಡಿಯುವ ನೀರಿನ ಸಲುವಾಗಿ ಇಂದು ವಿಕಾಸಸೌಧದ ಕೊಠಡಿ ಸಂಖ್ಯೆ 419ರಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ರವರು ಸಚಿವರು, ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಹಾಗೂ ರಾಜ್ಯ ಸಭಾ ಸದಸ್ಯರ ಜೊತೆ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಸಂಚಾರ ದಟ್ಟಣೆ, ಕುಡಿಯುವ ನೀರು, ಘನತ್ಯಾಜ್ಯ ವಿಲೇವಾರಿ ವಿಚಾರವಾಗಿ ನಗರದಲ್ಲಿ ಸಮಸ್ಯೆ ಉದ್ಭವಿಸಿದೆ. 2013ರಿಂದ ಕುಡಿಯುವ ನೀರಿನ ದರ ಹೆಚ್ಚಳವಾಗಿಲ್ಲ. ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಲ್ಲಿ ಸರಿಯಾದ ಪ್ರಮಾಣದಲ್ಲಿ ತೆರಿಗೆ ಪಾವತಿಯಾಗುತ್ತಿಲ್ಲ. ನಾನು ಸಣ್ಣ ಸಮೀಕ್ಷೆ ಮಾಡಿದಾಗ ಶೇ. 50ಕ್ಕಿಂತ ಹೆಚ್ಚು ಮಂದಿ ಸರಿಯಾಗಿ ತೆರಿಗೆ ಪಾವತಿ ಮಾಡುತ್ತಿಲ್ಲ. ಹೀಗಾಗಿ ಬೆಂಗಳೂರಿನಲ್ಲಿರುವ ಆಸ್ತಿಗಳ ದಾಖಲೆಗಳನ್ನು ಸ್ಕ್ಯಾನ್ ಮಾಡಿಸಲಾಗುತ್ತಿದೆ.

2020ರಲ್ಲಿ ಆಸ್ತಿ ತೆರಿಗೆ ಮಸೂದೆ ತಿದ್ದುಪಡಿ ಮಾಡಿದಾಗ ದಂಡದ ಪ್ರಮಾಣ ಹೆಚ್ಚಾಗಿದೆ. ಈ ಬಗ್ಗೆ ಯಾರೊಬ್ಬರೂ ಗಮನ ಹರಿಸಿಲ್ಲ. ಇದನ್ನು ಪಾವತಿಸುವುದು ಜನರಿಗೆ ಅಸಾಧ್ಯ. ಹೀಗಾಗಿ ಕಾನೂನಿನಲ್ಲಿ ಮತ್ತೆ ತಿದ್ದುಪಡಿ ಮಾಡಲು ತೀರ್ಮಾನಿಸಲಾಗಿದೆ. ಎಲ್ಲಾ ಸಮಸ್ಯೆಗಳನ್ನು ಒಂದೊಂದಾಗಿ ಬಗೆಹರಿಸಲು ಪ್ರಯತ್ನಿಸುತ್ತಿದ್ದೇವೆ. ಎಲ್ಲವನ್ನು ಒಂದೇ ಬಾರಿಗೆ ಬಗೆಹರಿಸಲು ಆಗುವುದಿಲ್ಲ. ಬಿಡಿಎ, ಜಲಮಂಡಳಿ, ಬೆಸ್ಕಾಂ ಎಲ್ಲವೂ ಒಟ್ಟಾಗಿ ಕೆಲಸ ಮಾಡಬೇಕಿದೆ.

ಇನ್ನು ಕುಡಿಯುವ ನೀರಿನ ವಿಚಾರವಾಗಿ ಸುಪ್ರೀಂ ಕೋರ್ಟ್ ಆದೇಶದಂತೆ 6 ಟಿಎಂಸಿ ನೀರನ್ನು ಬೆಂಗಳೂರಿಗೆ ಬಳಸಲು ಸರ್ಕಾರಿ ಆದೇಶ (GO) ಹೊರಡಿಸಲಾಗಿದೆ. ಆಮೂಲಕ ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡಲಾಗಿದೆ.

ಈ ಮಧ್ಯೆ ಅನಧಿಕೃತ ಫ್ಲೆಕ್ಸ್ ಗಳನ್ನು ನಿಷೇಧಿಸಲಾಗಿದ್ದು, ಪಾಲಿಕೆ ಅಧಿಕಾರಿಗಳು ನನ್ನ ಮೇಲೂ ದಂಡ ವಿಧಿಸಿದ್ದಾರೆ. ಯಾವುದೇ ಪಕ್ಷ, ನಾಯಕರು ಅನಧಿಕೃತ ಫ್ಲೆಕ್ಸ್ ಹಾಕಿದರೂ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇಲ್ಲದಿದ್ದರೆ ಫ್ಲೆಕ್ಸ್ ಹಾವಳಿ ನಿಯಂತ್ರಣ ಕಷ್ಟ.

ಬೆಂಗಳೂರಿನಲ್ಲಿ ಪಾಲಿಕೆ ಸದಸ್ಯರಾಗಿ, ಶಾಸಕರಾಗಿ, ಮಂತ್ರಿಗಳಾಗಿ ಆಡಳಿತ ನಡೆಸಿರುವ ನಿಮ್ಮಿಂದ ಈ ವಿಚಾರವಾಗಿ ಸಲಹೆ ಕೇಳಲು ಸಭೆ ಕರೆಯಲಾಗಿದೆ. ನಿಮ್ಮ ಸಲಹೆ ಸ್ವೀಕರಿಸಲು ಸಿದ್ಧರಿದ್ದೇವೆ. ಈ ಹಿಂದೆ ಯೋಜನಾ ಆಯೋಗದಲ್ಲಿ ಹಣವನ್ನು ಮೀಸಲಿಟ್ಟಿದ್ದರು. ಆದರೆ ಅದು ಬಂದಿಲ್ಲ. ಬೆಂಗಳೂರಿಗೆ ಆದ್ಯತೆ ನೀಡಲು ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಲು ಸಮಯಾವಕಾಶ ಕೋರಿದ್ದೇನೆ. ಈ ಮಧ್ಯೆ ಕೇಂದ್ರ ಸಚಿವರುಗಳನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ.

ನೀವು ಸಭೆಯಲ್ಲಿ ಮೌಖಿಕವಾಗಿಯಾದರೂ ಸಲಹೆ ನೀಡಬಹುದು, ಲಿಖಿತ ರೂಪದಲ್ಲಿಯಾದರೂ ನೀಡಬಹುದು. ನಿಮ್ಮ ಸಲಹೆ ಸ್ವೀಕರಿಸಲು ನಾವು ಸಿದ್ಧವಿದ್ದೇವೆ.

ಸಭೆಯಲ್ಲಿ ಬಂದಂತಹ ಪ್ರಮುಖ ಸಲಹೆಗಳು:

  • ಬ್ರಾಂಡ್ ಬೆಂಗಳೂರು ಅಡಿ ಯೋಜನೆಗಳನ್ನು ಅನುಷ್ಠಾನಗೊಳಿಸುವುದು.
  • ಆಸ್ತಿ ತೆರಿಗೆ ವಿಚಾರದಲ್ಲಿ ಸರಿಯಾದ ಕ್ರಮಗಳನ್ನು ಜಾರಿಗೆ ತಂದು ಹೆಚ್ಚು ತೆರಿಗೆ ಸಂಗ್ರಹ ಮಾಡವುದು.
  • ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲಾ ಇಲಾಖೆಗಳ ಸಮನ್ವಯತೆಗೆ ತರುವುದು.
  • ಪಾದಚಾರಿ ಒತ್ತುವರಿಗಳನ್ನು ತೆರವುಗಳಿಸಿ, ಅಭಿವೃದ್ಧಿಪಡಿಸುವ ಮೂಲಕ ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದು.
  • ನಗರದ ರಸ್ತೆಗಳ ಬದಿಯಲ್ಲಿ ಅನಾಥ ವಾಹನಗಳು ರಸ್ತೆ ಬದಿಯಲ್ಲೇ ನಿಂತಿವೆ, ಅದಕ್ಕೆ ಜಾಗಗಳನ್ನು ಗುರುತಿಸಿ ವಾಹನಗಳನ್ನು ತೆರವುಗೊಳಿಸುವುದು.
  • ಅಕ್ರಮ-ಸಕ್ರಮ ನ್ಯಾಯಾಲಯದಲ್ಲಿ ಇತ್ಯರ್ಥಪಡಿಸಿಕೊಂಡು ಸಮಸ್ಯೆ ಬಗೆಹರಿಸುವುದು.
  • ಆಟದ ಮೈದಾನ, ಕೆರೆ, ಉದ್ಯಾನಗಳಿಗಳಲ್ಲಿ ಬದ್ರತಾ ಸಿಬ್ಬಂದಿ ನಿಯೋಜನೆ ಮಾಡುವುದು ಹಾಗೂ ಸರಿಯಾಗಿ ನಿರ್ವಹಣೆ ಮಾಡುವುದು.
  • ಕಲ್ಯಾಣ ಕಾರ್ಯಕ್ರಮದಡಿ ಬಡವರ್ಗದ ಜನರಿಗೆ ಅನುಕೂಲ ಮಾಡುವುದು.
  • ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದು.
  • ಕಸದ ಸಮಸ್ಯೆ ಬಗೆಹರಿಸುವುದು
  • ವಿಧಾನಸಭಾ ಕ್ಷೇತ್ರದ ವಿಸ್ತೀರ್ಣ/ಜನಸಂಖ್ಯೆಗೆ ಅನುಗುಣವಾಗಿ ಅನುದಾನ ನೀಡಲು ಕ್ರಮ
  • ಸಂಚಾರ ದಟ್ಟಣೆ ನಿಯಂತ್ರಿಸುವುದು.
  • ನಗರದಲ್ಲಿ ಮೇಲುಸೇತುವೆ ಮತ್ತು ಮೆಟ್ರೋದ ಡಬ್ಬಲ್ ಡೆಕ್ಕರ್ ವ್ಯವಸ್ಥೆ ಮಾಡಲು ಕ್ರಮ ಕೈಗೊಂಡು, ಅದಕ್ಕೆ ಅನುದಾನ ಮೀಸಲಿಡಬೇಕು
  • ಬೃಹತ್ ನೀರುಗಾಲುವೆ ಸಮಸ್ಯೆ ಬಗೆಹರಿಸುವುದು
  • ಬೀದಿ ದೀಪಗಳ ಅಳವಡಿಕೆ ಹಾಗೂ ನಿರ್ವಹಣೆ ಮಾಡುವುದು
  • ರಸ್ತೆ ಅಭಿವೃದ್ಧಿಗೆ ಸೂಕ್ರ ಕ್ರಮ ತೆಗೆದುಕೊಳ್ಳುವುದು

ಸಭೆಯಲ್ಲಿ ಸಚಿವರಾದ ಕೆ ಜೆ ಜಾರ್ಜ್, ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ಜಮೀರ್ ಅಹ್ಮದ್ ಖಾನ್, ಸಂಸದ ಡಿ ಕೆ ಸುರೇಶ್, ಶಾಸಕರಾದ ಎಸ್ ಟಿ ಸೋಮಶೇಖರ್, ಕೃಷ್ಣಪ್ಪ, ಎಸ್ ಸುರೇಶ್ ಕುಮಾರ್, ರವಿ ಸುಬ್ರಮಣ್ಯ, ಮುನಿರಾಜು, ಉದಯ್ ಗರುಡಾಚಾರ್, ಶ್ರೀನಿವಾಸ್, ಶಿವಣ್ಣ, ಎಂಎಲ್ಸಿಗಳಾದ ಶರವಣ, ಯು ಬಿ ವೆಂಕಟೇಶ್, ಸುಧಾಮದಾಸ್, ಅ. ದೇವೇಗೌಡ, ರಾಜ್ಯಸಭೆ ಸದಸ್ಯರಾದ ಜಿ ಸಿ ಚಂದ್ರಶೇಖರ್, ಡಾ. ಎಲ್ ಹನುಮಂತಯ್ಯ, ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಬಿಬಿಎಂಪಿ ವಿಶೇಷ ಆಯುಕ್ತರು ಸೇರಿದಂತೆ ಇತರೆ ಇಲಾಖೆಗಳ ಹಿರಿಯ ಅಧಿಕಾರಿಗಳು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Related Articles

Back to top button