
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ -ಇತ್ತೀಚೆಗೆ ನಗರದ ಕ್ಯಾಂಪದಲ್ಲಿರುವ ಮೆಸೋನಿಕ್ ಹಾಲ್ ಮೈದಾನದಲ್ಲಿ ಲಯನ್ಸ ಪ್ರಾದೇಶಿಕ ಸಮ್ಮೇಳನವನ್ನು ಲಯನ್ಸ ಪ್ರಾದೇಶಿಕ ವಿಭಾಗ ೬ ರ ಅಧ್ಯಕ್ಷೆ ಶ್ರೀಮತಿ ಭಾರತಿ ವಡವಿಯವರು ಹಮ್ಮಿಕೊಂಡಿದ್ದರು.
ಈ ಸಮ್ಮೇಳನದಲ್ಲಿ ಬೆಳಗಾವಿಯ ೪ ಲಯನ್ಸ ಕ್ಲಬ್ ನ ಸದಸ್ಯರು ಹಾಗೂ ಉಗಾರ ಖುರ್ದ, ಗೋಕಾಕ ಹಾಗೂ ಖಾನಾಪುರದ ಕ್ಲಬ್ ಗಳು ಭಾಗವಹಿಸಿದ್ದವು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಳಗಾವಿಯ ಸೆಂಟ್ರಾಕೇರ್ ವ್ಯವಸ್ಥಪಕ ನಿರ್ದೇಶಕರಾದ ಲಯನ್ ಡಾ. ನೀತಾ ದೇಶಪಾಂಡೆಯವರು ‘ಸ್ಥೂಲತೆ ಮತ್ತು ಮಧುಮೇಹ’ ವಿಷಯ ಕುರಿತಂತೆ ಮಾತನಾಡುತ್ತ ನಾವು ದಿನನಿತ್ಯ ಸಮಯಕ್ಕೆ ಸರಿಯಾದ ಊಟ, ನಿದ್ರೆ ಹೀಗೆ ಶಿಸ್ತುಬದ್ದ ಜೀವನ ನಡೆಸುವುದರಿಂದ ಮಧುಮೇಹ ಕಾಯಿಲೆಯಿಂದ ದೂರವಿರಬಹುದೆಂದು ಹೇಳಿದರು.
ಮುಖ್ಯ ಮಾತುಗಾರರಾಗಿ ಲಯನ್ಸನ ಮಾಜಿ ಗವರ್ನಗಳಾದ ಲಯನ್ ಶ್ರೀನಿವಾಸ ಶಿವಣಗಿ ಮಾತನಾಡುತ್ತ ಲಯನ್ಸ ಸಮಾಜಮುಖಿ ಹಲವಾರು ಕಾರ್ಯಗಳನ್ನು ಹಮ್ಮಿಕೊಳ್ಳತ್ತ ಬಂದಿದ್ದು ತನ್ನ ಕಾರ್ಯದಿಂದ ಸಮಾಜದಲ್ಲಿ ಜನರ ಪ್ರೀತಿಗೆ ಪಾತ್ರವಾಗಿದೆ ಎಂದು ಹೇಳಿದರು.
ಅತಿಥಿಗಳಾಗಿ ಆಗಮಿಸಿದ್ದ ಶ್ರೀಮತಿ ಮೋನಿಕಾ ಸಾವಂತ ಅವರು ‘ಮಹಿಳೆ ಮತ್ತು ಇಂದಿನ ಸಮಾಜ’ ವಿಷಯ ಕುರಿತಂತೆ ಮಾತನಾಡಿದರು.
ವಿಶೇಷ ಸೇವೆಯನ್ನು ಸಲ್ಲಿಸಿದ ಮಹನೀಯರನ್ನು ಗುರುತಿಸಿ ಲಯನ್ ಶ್ರೀಮತಿ ಭಾರತಿ ವಡವಿಯರು ಸನ್ಮಾನಿಸಿ ಗೌರವಿಸಿದರು.
ಶ್ರೀಮತಿ ದೀಪಾ ಪದಕಿ ಮತ್ತು ತಂಡದವರಿಂದ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು…’ ನಿಂದ ಕಾರ್ಯಕ್ರಮ ಪ್ರಾರಂಭವಾಯಿತು. ಪುಷ್ಪಲತಾ ನೃತ್ಯಾಲಯದ ವಿದ್ಯಾರ್ಥಿನಿಯರಿಂದ ‘ಭಾರತ ಜನನೀಯ ತನುಜಾತೆ…’ ಹಾಡಿಗೆ ನೃತ್ಯ ಮಾಡಿದರು.
ಪ್ರಶಾಂತ ಸಾವಂತ, ವಿಕಾಸ ಕಲ್ಯಾಣಿ, ಪ್ರಭಾಕರ ಶಹಾಪುರಕರ, ದಯಾ ಶಹಪುರಕರ, ಗೀತಾ ಕಿತ್ತೂರ, ವಿನಯ ಹಿರೇಮಠ, ಹಾಲಬಾವಿ, ಸತೀಶ ಪಾಟೀಲ, ಉದಯ ವಡೆಯರ ಮುಂತಾದವರು ಉಪಸ್ಥಿತರಿದ್ದರು.
ಭಾರತಿ ವಡವಿ ಸ್ವಾಗತಿಸಿದರು. ಶ್ರೀಮತಿ ಶಕುಂತಲಾ ಬಾಳೆಕುಂದ್ರಿ ಮತ್ತು ಡಾ. ಬಸವರಾಜ ಹಮ್ಮಣ್ಣವರ ಕಾರ್ಯಕ್ರಮ ನಿರೂಪಿಸಿದರು. ರವಿ ಕಾಕತಿ ವಂದಿಸಿದರು.


