
ಪ್ರಗತಿವಾಹಿನಿ ಸುದ್ದಿ: ಕರ್ತವ್ಯ ನಿರತ ವೈದ್ಯನ ಮೇಲೆ ಭೀಕರ ಹಲ್ಲೆ ನಡೆಸಿರುವ ಘಟನೆ ಬೀದರ್ನ ಬ್ರಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.
ಬೀದರ್ನ ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಂದಿದ್ದ ಯುವಕರ ಗುಂಪೊಂದು ವೈದ್ಯ ತುಕಾರಾಮ್ ಅವರ ಮೇಲೆ ತಡರಾತ್ರಿ ಹಲ್ಲೆ ನಡೆಸಿದೆ. ಬೈಕ್ನಿಂದ ಬಿದ್ದು ಅಲ್ಪ ಗಾಯಗಳೊಂದಿಗೆ ಬಂದಿದ್ದ ಯುವಕರು, ಮೆಡಿಕೋ-ಲೀಗಲ್ ಕೇಸ್ (MLC) ದಾಖಲಿಸದಂತೆ ಒತ್ತಾಯಿಸಿದ್ದರು. ಆದರೆ ಆಸ್ಪತ್ರೆಯ ಲ್ಯಾಬ್ ಸಿಬ್ಬಂದಿ ಎಂಎಲ್ಸಿ ಮಾಡಲಾಗಿದೆ ಎಂದು ತಪ್ಪು ಮಾಹಿತಿ ನೀಡಿದ್ದರಿಂದ ಆಕ್ರೋಶಗೊಂಡ ಯುವಕರು, ತಾವು ಎಂಎಲ್ಸಿ ಮಾಡಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದರೂ ಕೇಳದೆ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ಗಂಭೀರವಾಗಿ ಹಲ್ಲೆಗೊಳಗಾದ ವೈದ್ಯ ತುಕಾರಾಂ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರ ಮೇಲಿನ ಹಲ್ಲೆ ಖಂಡಿಸಿ ವೈದ್ಯಕೀಯ ವಿದ್ಯಾರ್ಥಿಗಳು, ಆಸ್ಪತ್ರೆ ಸಿಬ್ಬಂದಿಗಳು ಬ್ರಿಮ್ಸ್ ಆಸ್ಪತ್ರೆ ಬಳಿ ಪ್ರತಿಭಟನೆ ನಡೆಸಿದ್ದಾರೆ. ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವವರೆಗೂ ಸೇವೆ ನೀಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.




