Kannada News

ಬಿಜೆಪಿ ಬೆಳವಣಿಗೆಯಲ್ಲಿ ಮಾಧ್ಯಮದ ಪಾತ್ರ ಪ್ರಮುಖ: ರಾಜ್ಯ ವಕ್ತಾರ ಎಂ.ಜಿ. ಮಹೇಶ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯದ ಬಿಜೆಪಿಯಲ್ಲಿ ಎಲ್ಲ ವಿಭಾಗಗಳಲ್ಲಿ ಮಾಧ್ಯಮ ಅತ್ಯಂತ ಪ್ರಬಲವಾಗಿದ್ದು ಬಿಜೆಪಿ ಬೆಳವಣಿಗೆಯಲ್ಲಿ ಮಾಧ್ಯಮದ ಪ್ರಮುಖ ಪಾತ್ರ ವಹಿಸಿದೆ ಎಂದು ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಎಂ.ಜಿ. ಮಹೇಶ ಹೇಳಿದರು.

ನಗರದ ಗ್ರಾಮಾಂತರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಜಿಲ್ಲೆಯ ಬಿಜೆಪಿ ಮಾಧ್ಯಮ ಸದಸ್ಯರ ಸಂಘಟನಾ ಸಭೆಯಲ್ಲಿ ಮಾತನಾಡಿ, ಪ್ರಪಂಚದಲ್ಲಿ ಬಿಜೆಪಿ ಅತ್ಯಂತ ದೊಡ್ಡದಾದ ಬಲಿಷ್ಠ ರಾಜಕೀಯ ಪಕ್ಷವಾಗಿದ್ದು ಇಂದು 19 ರಾಜ್ಯಗಳಲ್ಲಿ ಹಾಗೂ ಕೇಂದ್ರದಲ್ಲಿ ಸುಸ್ಥಿರ ಸರ್ಕಾರ ನೀಡಿದ ಹೆಗ್ಗಳಿಕೆ ಬಿಜೆಪಿಯದ್ದಾಗಿದ್ದರೂ ಬಾವಿಗೆ ಜಲವೇ ಸಾಕ್ಷಿ ಎಂಬಂತೆ ಬಿಜೆಪಿ ಕಾರ್ಯ ಪದ್ಧತಿಗೆ ಜನರೇ ಸಾಕ್ಷಿಯಾಗಿದ್ದಾರೆ.  ಬಿಜೆಪಿಗೆ ಅಭೂತಪೂರ್ವ ಬೆಂಬಲ ನೀಡುತ್ತಿರುವ ಮತದಾರರಿಗೆ ಸರ್ಕಾರದ ಸಾಧನೆಗಳು,  ಯೋಜನೆಗಳು ಹಾಗೂ  ಸದ್ವಿಚಾರಗಳನ್ನು ಬಿತ್ತರಿಸುವ ಕಾರ್ಯ ಎಲ್ಲ ಮಾಧ್ಯಮಗಳ ಸಹಕಾರದಿಂದ ಅವ್ಯಾಹತವಾಗಿ ನಡೆಯುತ್ತಿರುವುದು ಸಂತಸದ ವಿಷಯವಾಗಿದೆ ಎಂದರು.

ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಬದ್ಧವಾಗಿದ್ದು ಯಾವುದೇ ಅಹಿತಕರ ಘಟನೆಗಳಿಗೆ ರಾಜ್ಯದಲ್ಲಿ ಅವಕಾಶವಿಲ್ಲ. ಬರುವ ದಿನಗಳಲ್ಲಿ ರಾಜ್ಯದ ಅನೇಕ ಮುಖ್ಯ ಕಚೇರಿಗಳು ಸುವರ್ಣವಿಧಾನಸೌಧಕ್ಕೆ ಬರಲಿದ್ದು ಈ ಭಾಗದ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಈ ಬಗ್ಗೆ ಯಾವುದೇ ಗೊಂದಲಗಳಿಗೆ ಯಾರೂ ಅವಕಾಶ ನೀಡಬಾರದು ಎಂದರು. ಪಕ್ಷದ ಮಾಧ್ಯಮ ಸದಸ್ಯರು ಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಕಾರ್ಯ ಚಟುವಟಿಕೆಯಿಂದ ಮುನ್ನುಗ್ಗಿ ಕಾರ್ಯಮಾಡಬೇಕೆಂದರು.

ರಾಜ್ಯ ಬಿಜೆಪಿ ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ ಮಾತನಾಡಿ, ಪ್ರತಿ ಜಿಲ್ಲೆಗೆ ಮಾಧ್ಯಮ ಸಂಚಾಲಕರು ಸಹಸಂಚಾಲಕರಿದ್ದು ಮಂಡಲ ಸ್ತರಕ್ಕೆ ಮಾಧ್ಯಮ ಸದಸ್ಯ ಹಾಗೂ ಸಹ ಸದಸ್ಯರನ್ನು ನೇಮಕ ಮಾಡಿರುವುದು ಬಿಜೆಪಿಗೆ ಸಂಬಂಧಿಸಿದ ವಿಷಯವನ್ನು ಮಾಧ್ಯಮಗಳಿಗೆ ನೀಡುವುದು  ಇತ್ಯಾದಿ ಕಾರ್ಯಗಳಾಗಬೇಕು. ಪಕ್ಷದ ಮುಖ್ಯವಾಹಿನಿಯ ಪ್ರತಿರೂಪವಾಗಿ ಜಿಲ್ಲಾ ವಕ್ತಾರರು ಇರುವುದರಿಂದ ಅವರ ಪ್ರತಿ ಹೇಳಿಕೆಗಳು ಪಕ್ಷದ ನಿಲುವಾಗಿರುವಾಗಿರುವುದರಿಂದ ಹೇಳಿಕೆ ನೀಡುವಾಗ ಬಹಳ ಎಚ್ಚರದಿಂದ ಹಾಗೂ ವಿಷಯದ ಆಳವನ್ನರಿತು ನೀಡುವಂತಾಗಬೇಕೆಂದರು. ಬಿಜೆಪಿ ಜಾರಿಗೆ ತರುವ ಯೋಜನೆಗಳು ಹಾಗೂ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಮ್ಮ ಗಮನವಿರಬೇಕೆಂದು ಸಲಹೆ ನೀಡಿದರು.

ಬೆಳಗಾವಿ ವಿಭಾಗದ ಮಾಧ್ಯಮ ಪ್ರಭಾರಿ ಹಾಗೂ ರಾಜ್ಯ ಮಾಧ್ಯಮ ಸದಸ್ಯ ಸಿದ್ದು ಮೊಗಲಿಶೆಟ್ಟರ ಮಾತನಾಡಿ, ರಾಜ್ಯದಲ್ಲಿ ಅತ್ಯಂತ ಸಕ್ರಿಯವಾದ ತಂಡ ಬೆಳಗಾವಿ ಜಿಲ್ಲೆಯಲ್ಲಿದ್ದು ಅನೇಕ ಚುನಾವಣಾ ಗೆಲುವಿನಲ್ಲಿ ಬಿಜೆಪಿ ಮಾಧ್ಯಮ ವಿಭಾಗ ಪ್ರಮುಖ ಪಾತ್ರವಹಿಸಿದೆ. ಜನಸಾಮಾನ್ಯರಿಗೆ ಬಿಜೆಪಿ ಸರ್ಕಾರದ ಅನೇಕ ಯೊಜನೆಯ ವಿಷಯ ಮುಟ್ಟಿಸುವ ಮೂಲಕ ಜನಪರ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.

ಬೆಳಗಾವಿ ಗ್ರಾಮಾಂತರ ಜಿಲ್ಲಾ ಮಾಧ್ಯಮ ಸಂಚಾಲಕ ಎಫ್.ಎಸ್.ಸಿದ್ದನಗೌಡರ ಜಿಲ್ಲೆಯ ವರದಿ ನೀಡುವದರೊಂದಿಗೆ ಪ್ರಾಸ್ತಾವಿಕ ಮಾತನಾಡಿದರು. ಮಹಾನಗರ ಜಿಲ್ಲೆಯ ಸಂಚಾಲಕ ಶರದ್ ಪಾಟೀಲ ಮಾತನಾಡಿದರು.
ಜಿಲ್ಲಾ ವಕ್ತಾರರಾದ ಸಂಜಯ ಕಂಚಿ, ಪ್ರಭು ಹೂಗಾರ ಪ್ರಧಾನ ಕಾರ್ಯದರ್ಶಿಗಳಾದ ಸುಭಾಷ ಪಾಟೀಲ, ಸಂದೀಪ್ ದೇಶಪಾಂಡೆ, ಜಿಲ್ಲಾ ಮಾಧ್ಯಮ ಪ್ರಭಾರಿ ಮಲ್ಲಿಕಾರ್ಜುನ ಮಾದಮ್ಮನವರ ವೇದಿಕೆಯಲ್ಲಿದ್ದರು.

ಶಶಿ ಬಾಡಕರ ಸ್ವಾಗತಿಸಿದರು. ಪ್ರವೀಣ ಕೊಪ್ಪದ ವಂದಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ಮಂಡಲಗಳಿಂದ ಮಾಧ್ಯಮ ‌ಸದಸ್ಯರು ಜಿಲ್ಲಾ ಮೋರ್ಚಾಗಳ ಅಧ್ಯಕ್ಷರಾದ ಯಲ್ಲೇಶ್ ಕೋಲಕಾರ, ಉಮೇಶ ಪೂರಿ  ಮತ್ತತಿರರು ಇದ್ದರು.

ಸುದ್ದಿಗೋಷ್ಠಿಯಲ್ಲಿ ವಿವಾದ ಸೃಷ್ಟಿಸಿ ಕಾರ್ಯಕ್ರಮದಲ್ಲಿ ಉಲ್ಟಾ ಹೊಡೆದ ವಕ್ತಾರ ! :

ಬೆಳಗಾವಿಯಲ್ಲಿ ಶನಿವಾರ ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿ ಸುವರ್ಣ ವಿಧಾನಸೌಧಕ್ಕೆ ಸರಕಾರಿ ಕಚೇರಿಗಳನ್ನು ಸ್ಥಳಾಂತರಿಸುವುದರಿಂದ ಅಭಿವೃದ್ಧಿಯಾಗುತ್ತದೆ ಎಂಬ ಭಾವನೆ ತಪ್ಪು ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿ ಕನ್ನಡ ಪರ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾದ ರಾಜ್ಯ ಬಿಜೆಪಿ ವಕ್ತಾರ ಎಂ.ಜಿ. ಮಹೇಶ ಗ್ರಾಮಾಂತರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ  ಬಿಜೆಪಿ ಮಾಧ್ಯಮ ಸದಸ್ಯರ ಸಂಘಟನಾ ಸಭೆಯಲ್ಲಿ ಮಾತು ಹೊರಳಿಸಿ ಉಲ್ಟಾ ಹೊಡೆದರು.

ಸುವರ್ಣ ವಿಧಾನಸೌಧಕ್ಕೆ ಕಚೇರಿ ಸ್ಥಳಾಂತರದ ವಿಷಯ ಅವರು ಪತ್ರಿಕಾ ಗೋಷ್ಠಿ ನಡೆಸಿದ ಕೆಲವೇ ಗಂಟೆಗಳಲ್ಲಿ ವಿವಾದವಾಗಿ ಪರಿಣಮಿಸಿತ್ತು. ಹಲವು ಕನ್ನಡ ಪರ ಸಂಘಟನೆಗಳ ಮುಖಂಡರು ಮಹೇಶ ಅವರ ಮಾತನ್ನು ಕಟುವಾಗಿ ಖಂಡಿಸಿದ್ದರಲ್ಲದೆ, ಕನ್ನಡಿಗರ ಕ್ಷಮೆ ಕೇಳುವಂತೆ ಒತ್ತಾಯಿಸಿದ್ದರು.  ಇದೇ ಕಾರಣಕ್ಕೆ ಬಿಜೆಪಿಯಿಂದ ಮಹೇಶ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆಗಳೂ ರೂಪುಗೊಂಡವು.

ಆದರೆ ಸಂಜೆ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಬದ್ಧವಾಗಿದ್ದು ಯಾವುದೇ ಅಹಿತಕರ ಘಟನೆಗಳಿಗೆ ರಾಜ್ಯದಲ್ಲಿ ಅವಕಾಶವಿಲ್ಲ. ಬರುವ ದಿನಗಳಲ್ಲಿ ರಾಜ್ಯದ ಅನೇಕ ಮುಖ್ಯ ಕಚೇರಿಗಳು ಸುವರ್ಣವಿಧಾನಸೌಧಕ್ಕೆ ಬರಲಿದ್ದು ಈ ಭಾಗದ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಈ ಬಗ್ಗೆ ಯಾವುದೇ ಗೊಂದಲಗಳಿಗೆ ಯಾರೂ ಅವಕಾಶ ನೀಡಬಾರದು ಎಂದು ಹೇಳುವ ಮೂಲಕ ಮಾತಿನಿಂದ ಹೊತ್ತಿದ ಬೆಂಕಿಗೆ ನೀರು ಸುರಿಯುವ ಪ್ರಯತ್ನ ನಡೆಸಿದರು.

ಒಟ್ಟಿನಲ್ಲಿ ಬೆಳಗಾವಿ ಭೇಟಿ ಮಹೇಶ ಅವರಿಗೆ  ಮಾತಿನ ಬತ್ತಳಿಕೆಯ ಮಿತವಾದ ಬಳಕೆಯ ಪಾಠ ಕಲಿಸಿದೆ.

ಆ ರಾತ್ರಿ ನಡೆದ ಘಟನೆ….ಮತ್ತೊಂದು ಶಾಕಿಂಗ್ ಸುದ್ದಿ ಹೇಳಿದ ನಟಿ ಕುಬ್ರಾ ಸೇಠ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button