*ಬೆಳಗಾವಿಯಲ್ಲಿ ಭೀಕರ ಕೊಲೆ: ತಮ್ಮನನ್ನು ಕೊಚ್ಚಿ ಕೊಂದ ಅಣ್ಣ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಮೀನು ಮಾರಾಟ ಮಾಡುವ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಉಂಟಾದ ಜಗಳ ವಿಕೋಪಕ್ಕೆ ತಿರುಗಿ, ಅಣ್ಣನೇ ಸ್ವಂತ ತಮ್ಮನನ್ನು ಕಲ್ಲಿನಿಂದ ಜಜ್ಜಿ ಕುತ್ತಿಗೆ ಹಿಸುಕಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದಲ್ಲಿ ಸಂಭವಿಸಿದೆ ಎಂದು ಬೆಳಗಾವಿ ಎಸ್ ಪಿ ಕೆ ರಾಮರಾಜನ ಅವರು ತಿಳಿಸಿದರು.
ತಮ್ಮ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಮೃತನನ್ನು ರಾಜು ಸಿದ್ದಪ್ಪ ರುದ್ರಪ್ಪಗೋಳ (45) ಎಂದು ಗುರುತಿಸಲಾಗಿದ್ದು, ಆತನ ಅಣ್ಣ ಸಂಜು ರುದ್ರಪ್ಪಗೋಳ (49) ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಘೋಡಗೇರಿ ಗ್ರಾಮದಲ್ಲಿರುವ ಮೂರು ಎಕರೆ ಜಮೀನು ಮಾರಾಟ ಮಾಡುವ ವಿಷಯದಲ್ಲಿ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿತ್ತು ಎಂದು ವಿವರಿಸಿದರು.
ಕೊಲೆಯಾದ ರಾಜು ಹಾಗೂ ಆರೋಪಿ ಸಂಜು ಗೋಕಾಕ ತಾಲೂಕಿನ ಅಂಕಲಗಿ ಗ್ರಾಮದ ಪಾಳುಬಿದ್ದ ಕಟ್ಟಡವೊಂದರಲ್ಲಿ ವಾಸವಿದ್ದರು. ಕೂಲಿ ಕೆಲಸ ಮಾಡಿಕೊಂಡಿದ್ದ ಇವರಿಬ್ಬರು, ಪ್ರತಿದಿನ ರಾತ್ರಿ ಅಂಕಲಗಿ ಮಠದಲ್ಲಿ ಊಟ ಮುಗಿಸಿ ಅದೇ ಹಳೇ ಕಟ್ಟಡದಲ್ಲಿ ರಾತ್ರಿ ಕಳೆಯುತ್ತಿದ್ದರು ಎಂದರು
ಘಟನೆಗೆ ಸಂಬಂಧಿಸಿದಂತೆ ಆರಂಭದಲ್ಲಿ ಎರಡೂ ಕುಟುಂಬಗಳಿಂದ ಯಾವುದೇ ದೂರು ದಾಖಲಾಗಿರಲಿಲ್ಲ. ಸದ್ಯ ಪ್ರಕರಣದ ತನಿಖೆ ಕೈಗೆತ್ತಿಕೊಳ್ಳಲಾಗಿದೆ ಎಂದು ಬೆಳಗಾವಿ ಎಸ್ ಪಿ ಕೆ. ರಾಮರಾಜನ್ ಅವರು ಸುದ್ದಿಗೋಷ್ಠಿಯಲ್ಲಿ ವಿವರಿಸಿದ್ದಾರೆ.




