
ಪ್ರಗತಿವಾಹಿನಿ ಸುದ್ದಿ, ಕೊಲ್ಲೂರು: ಬಿಜೆಪಿಯ ಹಿಂದುತ್ವದ ತಂತ್ರ ಈ ಬಾರಿಯ ಚುನಾವಣೆಯಲ್ಲಿ ಫಲ ನೀಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಈ ಬಾರಿಯ ಚುನಾವಣೆ ಭಾವನೆ ಹಾಗೂ ಬದುಕಿನ ನಡುವಣ ಚುನಾವಣೆ. ಬಿಜೆಪಿ ಭಾವನೆಗಳ ಮೇಲೆ ಚುನಾವಣೆ ಮಾಡಿದರೆ, ನಾವು ಬದುಕಿನ ಮೇಲೆ ಚುನಾವಣೆ ಮಾಡುತ್ತೇವೆ. ಅವರು ಭ್ರಷ್ಟಾಚಾರ ನಿರ್ಮೂಲನೆಗೆ ನಾವು ಪಣ ತೊಟ್ಟಿದ್ದೇವೆ” ಎಂದರು.
“ಅನೇಕ ನಾಯಕರು ಕಾಂಗ್ರೆಸ್ ಸೇರಿದ್ದಾರೆ. ಜನರ ಈ ವಿಶ್ವಾಸ ಉಳಿಸಿಕೊಂಡು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತಂದು ಜನರ ಸೇವೆ ಮಾಡಬೇಕು. ರಾಹುಲ್ ಗಾಂಧಿ ಅವರು ಈ ಭಾಗದಲ್ಲಿ ಪ್ರಚಾರ ಮಾಡಲಿದ್ದಾರೆ. ಕರಾವಳಿ ಭಾಗದಲ್ಲಿ ನಮ್ಮ ಪಕ್ಷಕ್ಕೆ ಉತ್ತಮ ವಾತಾವರಣವಿದ್ದು ಕನಿಷ್ಠ 10 ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸವಿದೆ” ಎಂದು ಅವರು ಹೇಳಿದರು.
“ಕಾಂಗ್ರೆಸ್ ಪಕ್ಷದ ವಿರುದ್ಧ ಬಂಡಾಯ ಸ್ಪರ್ಧಿಗಳ ವಿಚಾರವಾಗಿ ಕೇಳಿದ ಪ್ರಶ್ನೆಗೆ, ”ಬಹುತೇಕ ಎಲ್ಲ ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯುತ್ತಾರೆ. ಕೆಲವರಿಗೆ ಪಕ್ಷೇತರರಾಗಿ ಸ್ಪರ್ಧಿಸುವ ಚಟ ಇದ್ದು, ಮೊದಲಿನಿಂದಲೂ ಹಾಗೆ ಮಾಡಿದ್ದಾರೆ. ಅಂಥವರು ಹೋಗಬಹುದು, ಉಳಿದವರು ಅರ್ಜಿ ಹಿಂಪಡೆಯಲಿದ್ದಾರೆ. ನಿನ್ನೆ ಉಡುಪಿಯ ಅಭ್ಯರ್ಥಿಯೊಂದಿಗೆ ಮಾತನಾಡಿದ್ದೇನೆ, ಅವರು ಹಾಗೂ ಚಿಕ್ಕಪೇಟೆಯ ಮಾಜಿ ಮೇಯರ್ ಅವರು ಅರ್ಜಿ ಹಿಂಪಡೆಯಲಿದ್ದಾರೆ” ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರ ಲಿಂಗಾಯತ ಸಮುದಾಯ ಕುರಿತ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘”ಸಿದ್ದರಾಮಯ್ಯ ಅವರು ಲಿಂಗಾಯತ ಮುಖ್ಯಮಂತ್ರಿ ಕಾಲದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಹೇಳಿದ್ದಾರೆ ಹೊರತು, ಇಡೀ ಸಮುದಾಯ ಉದ್ದೇಶಿಸಿ ಹೇಳಿಲ್ಲ. ರಾಜ್ಯದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಬಿಜೆಪಿ ನಾಯಕರಾದ ಯತ್ನಾಳ್, ವಿಶ್ವನಾಥ್, ಗೂಳಿಹಟ್ಟಿ ಶೇಖರ್, ಕೆಂಪಣ್ಣ ಅವರೇ ಹೇಳಿದ್ದಾರೆ. ಈ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಿರುವುದನ್ನು ಯಾರೂ ಮುಚ್ಚಿ ಹಾಕಲು ಸಾಧ್ಯವಿಲ್ಲ. ರಾಜ್ಯದಲ್ಲಿ 40% ಕಮಿಷನ್, ಪಿ ಎಸ್ ಐ ಸೇರಿದಂತೆ ನೇಮಕಾತಿ ಹಗರಣ, ವಿವಿ ಉಪಕುಲಪತಿ ನೇಮಕಕ್ಕೆ ಹಣ ಪಡೆದಿರುವುದು ನಮ್ಮ ಕಾಲದಲ್ಲಿ ಆಗಿದೆಯಾ? ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿದೆ. ಸಿದ್ದರಾಮಯ್ಯ ಸರ್ಕಾರದ ವಿಚಾರ ಮಾತನಾಡಿದ್ದು, ಸಮುದಾಯದ ವಿಚಾರ ಮಾತನಾಡಿಲ್ಲ’ ಎಂದು ಸಿದ್ದು ಪರ ಬ್ಯಾಟಿಂಗ್ ಮಾಡಿದರು.
”ಬಿಜೆಪಿ ಆಣೆಕಟ್ಟು ಒಡೆದಿದೆ. ಕೇವಲ ಲಿಂಗಾಯತ ಸಮುದಾಯ ಮಾತ್ರವಲ್ಲ, ಎಲ್ಲಾ ಸಮುದಾಯದ ನಾಯಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ಉತ್ತಮ ಆಡಳಿತ ನೀಡಲಾಗುವುದು” ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.