
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಇಬ್ಬರು ಯುವ ಪತ್ರಕರ್ತರು ಶುಕ್ರವಾರ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ಒಬ್ಬರು ವಿಜಯ ಕರ್ನಾಟಕದ ಡಿಸೈನರ್, ಮತ್ತೊಬ್ಬರು ಕನ್ನಡಪ್ರಭ ಉಪಸಂಪಾದಕರು. ಇಬ್ಬರಿಗೂ ವಯಸ್ಸು 29.
ವಿಜಯ ಕರ್ನಾಟಕ ಡಿಸೈನರ್ ಸೂರ್ಯಕುಮಾರ್ (29) ಶುಕ್ರವಾರ ಬೆಳಿಗ್ಗೆ ಹೃದಯಾಘಾತಕ್ಕೊಳಗಾಗಿ ನಿಧನರಾದರು.
ಪತ್ನಿ, ತಂದೆ, ತಾಯಿ ಮತ್ತು ಸಹೋದರಿಯರು ಹಾಗೂ ಅಪಾರ ಸ್ನೇಹಿತರನ್ನು ಅವರು ಅಗಲಿದ್ದಾರೆ. ಈ ಹಿಂದೆ ವಿಜಯವಾಣಿ ಮತ್ತು ಸಿನಿಮಾ ಮಾಸಿಕಗಳಿಗೆ ಡಿಸೈನರ್ ಆಗಿ ಸಹ ಕಾರ್ಯನಿರ್ವಹಿಸಿದ್ದರು.
ಸೂರ್ಯ ಕುಮಾರ್ ಮಂಡ್ಯ ಜಿಲ್ಲೆಯ ಬಸರಾಳ ಹತ್ತಿರದ ಗಿಡ್ಡೇಗೌಡನ ಕೊಪ್ಪಲಿನ ಮೂಲದವರು.
ಕನ್ನಡ ಪ್ರಭ ಪತ್ರಿಕೆ ಉಪಸಂಪಾದಕ ಹರೀಶ್ ಹುಲಿಕಟ್ಟೆ (29) ಸಹ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಅವರ ಪತ್ನಿ, ತಂದೆ, ತಾಯಿ, ಬಂಧು ಬಳಗವನ್ನು ಅಗಲಿದ್ದಾರೆ.
ಇಬ್ಬರು ಪತ್ರಕರ್ತರ ಸಾವಿಗೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಕಂಬನಿ ಮಿಡಿದಿದ್ದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದೆ.
ಇಬ್ಬರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ಪ್ರಾರ್ಥಿಸಿದ್ದಾರೆ.