
ಪ್ರಗತಿವಾಹಿನಿ ಸುದ್ದಿ: ಪತಿ ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ಅನುಮಾನವಿದ್ದ ಪತ್ನಿಯೊಬ್ಬಳು ಗಾಢ ನಿದ್ದೆಯಲ್ಲಿದ್ದ ಪತಿಯ ಮೇಲೆ ಹಲ್ಲೆ ನಡೆಸಿ, ಆತನ ಖಾಸಗಿ ಅಂಗವನ್ನೇ ಕತ್ತರಿಸಿರುವ ಘೋರ ಘಟನೆ ನಡೆದಿದೆ.
ಛತ್ತೀಸ್ಗಢದ ಬಿಲಾಸ್ಪುರದಲ್ಲಿ ಈ ಘಟನೆ ನಡೆದಿದೆ. ರಾಜೇಶ್ ಕೌಶಿಕ್ ಎಂಬಾತನೇ ಪತ್ನಿಯಿಂದ ಹಲ್ಲೆಗೊಳಗಾದ ಪತಿ. ವೃತ್ತಿಯಲ್ಲಿ ಮೇಸ್ತ್ರಿ ಕೆಲಸ ಮಾಡುತ್ತಿದ್ದ ರಾಜೇಶ್ ಹಾಗೂ ದ್ರೌಪದಿ ಬಾಯೊ ದಂಪತಿಗೆ ಓರ್ವ ಮಗ ಕೂಡ ಇದ್ದಾನೆ. ಆದರೆ ಇತ್ತೀಚೆಗೆ ಪತಿ ವರ್ತನೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿದ್ದವು. ಬೇರೊಂದು ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಂಬ ಆರೋಪವಿತ್ತು. ಇದೇ ಕಾರಣಕ್ಕೆ ಪತಿ-ಪತ್ನಿ ನಡುವೆ ಪದೇ ಪದೇ ಜಗಳವಾಗುತ್ತಿತ್ತು.
ಸದ್ಯ ತೀವ್ರ ರಕ್ತಸ್ರಾವ ಹಾಗೂ ಗಂಭೀರ ಸ್ಥಿತಿಯಲ್ಲಿರುವ ಅವರನ್ನು ಸ್ಥಳೀಯ ಸರ್ಕಾರಿ ಸಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ನಡೆದ ರಾತ್ರಿ ಕೂಡ ಇಬ್ಬರೂ ಒಟ್ಟಿಗೆ ಊಟ ಮಾಡಿ ಮಲಗಿದ್ದರು. ಆದರೆ, ತಡರಾತ್ರಿ ಪತಿ ರಾಜೇಶ್ ಗಾಢ ನಿದ್ದೆಯಲ್ಲಿದ್ದಾಗ, ದ್ರೌಪದಿ ಕತ್ತಿಯಿಂದ ಆತನ ಖಾಸಗಿ ಭಾಗಗಳನ್ನು ಕತ್ತರಿಸಿದ್ದಾಳೆ.
ಗಂಭೀರವಾಗಿ ಹಲ್ಲೆಗೊಳಗಾಗಿರುವ ರಾಜೇಶ್ ತೀವ್ರ ರಕ್ತಸ್ರಾವದ ನಡುವೆಯೂ ಕಿರುಚುತ್ತಾ ಕೋಣೆಯಿಂದ ಹೊರಗೆ ಓಡಿಬಂದಿದ್ದಾರೆ. ತಂದೆಯ ಕಿರುಚಾಟ ಕೇಳಿ ಎಚ್ಚರಗೊಂಡ ಅಪ್ರಾಪ್ತ ಮಗ ತಕ್ಷಣವೇ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾನೆ. ನಂತರ ಕುಟುಂಬಸ್ಥರು ರಾಜೇಶ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿ ಮಹಿಳೆ ದ್ರೌಪದಿ ಬಾಯಿಯನ್ನು ವಶಕ್ಕೆ ಪಡೆದಿದ್ದಾರೆ. ಪ್ರಾಥಮಿಕ ವಿಚಾರಣೆಯ ವೇಳೆ ಅನೈತಿಕ ಸಂಬಂಧದ ಅನುಮಾನ ಮತ್ತು ಕೌಟುಂಬಿಕ ಕಲಹದಿಂದಾಗಿ ಈ ಕೃತ್ಯವೆಸಗಿದ್ದಾಗಿ ಮಹಿಳೆ ಬಾಯ್ಬಿಟ್ಟಿದ್ದಾಳೆ.

