Belagavi NewsBelgaum NewsElection NewsKannada NewsKarnataka NewsPolitics

ಜಾತಿ ಗಣತಿಗೆ ಕಾಂಗ್ರೆಸ್ ಪಕ್ಷ ಬದ್ಧ- ಮುಖ್ಯಮಂತ್ರಿ  ಸಿದ್ದರಾಮಯ್ಯ

*ಚಿಕ್ಕೋಡಿ-ಬೆಳಗಾವಿ ಎರಡೂ ಕ್ಷೇತ್ರಗಳಲ್ಲೂ ನಮ್ಮ ಕಾಂಗ್ರೆಸ್ ಅಭ್ಯರ್ಥಿಗಳನ್ನು ಲಕ್ಷ ಮತಗಳ ಲೀಡ್ ನಿಂದ ಗೆಲ್ಲಿಸಿ: ಸಿ.ಎಂ‌. ಸಿದ್ದರಾಮಯ್ಯ ಕರೆ* 

ಪ್ರಗತಿವಾಹಿನಿ ಸುದ್ದಿ, *ಚಿಕ್ಕೋಡಿ : ಮೇ -04* ದೇಶದ 140 ಕೋಟಿ ಜನರಲ್ಲಿ ಸೌಲಭ್ಯ ವಂಚಿತರಿಗೆ ಸಾಮಾಜಿಕ ನ್ಯಾಯ ದೊರಕಿಸಲು ಜಾತಿ ಗಣತಿ ಮಾಡಲು ಕಾಂಗ್ರೆಸ್ ಪಕ್ಷ  ಬದ್ಧವಾಗಿದೆ ಎಂದು  ಮುಖ್ಯಮಂತ್ರಿ  ಸಿದ್ದರಾಮಯ್ಯ ತಿಳಿಸಿದರು.

 ಅವರು ಇಂದು  ಲೋಕಸಭಾ ಚುನಾವಣೆಯ ನಿಮಿತ್ತ ಚಿಕ್ಕೋಡಿ ನಗರದಲ್ಲಿ ಆಯೋಜಿಸಲಾಗಿದ್ದ ಪ್ರಜಾಧ್ವನಿ -02 ಲೋಕಸಭಾ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಪಕ್ಷದ ಅಭ್ಯರ್ಥಿಯಾದ  ಪ್ರಿಯಾಂಕಾ ಜಾರಕಿಹೊಳಿ ರವರ ಪರವಾಗಿ ಮತದಾರರಲ್ಲಿ ಮತ ಯಾಚನೆ ಮಾಡಿ  ಮಾತನಾಡಿದರು.

ದೇಶದ ಎಲ್ಲಾ ಬಡವರಿಗೆ 25 ಲಕ್ಷ ರೂಪಾಯಿಗಳ ಆರೋಗ್ಯ ವಿಮೆ ಮಾಡಿಸಲಾಗುವುದು. ಇವೆಲ್ಲಾ ಬೇಕು ಎನ್ನುವುದಾದರೆ ಕಾಂಗ್ರೆಸ್ ಗೆ ಮತ ನೀಡಿ, ಪ್ರಿಯಾಂಕಾ ಜಾರಕಿಹೊಳಿಯವರನ್ನು ಗೆಲ್ಲಿಸಬೇಕು ಎಂದು ಮುಖ್ಯಮಂತ್ರಿಗಳು ಕರೆ ನೀಡಿದರು.

*ಕೇಂದ್ರ ಸರ್ಕಾರದ ಮಲತಾಯಿ ಧೋರಣೆ*

ಕೇಂದ್ರದಿಂದ ರಾಜ್ಯಕ್ಕೆ 

ಕಳೆದ ಬಾರಿ 25 ಜನ ಸಂಸದರನ್ನು ಬಿಜೆಪಿಯಿಂದ ಆಯ್ಕೆ ಮಾಡಿ ಕಳಿಸಲಾಯಿತು. ನಮಗಾದ ಅನ್ಯಾಯದ ಬಗ್ಗೆ ಯಾರೂ ಬಾಯಿ ಬಿಡಲಿಲ್ಲ. ಕರ್ನಾಟಕಕ್ಕೆ ತೆರಿಗೆ ಹಂಚಿಕೆಯಲ್ಲಿ ಅನ್ಯಾಯವಾಯಿತು, ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಕೊಡಲಿಲ್ಲ. ರಾಜ್ಯದಲ್ಲಿ ಭೀಕರ ಬರಗಾಲ ಬಂದರೂ ಪರಿಹಾರ ನೀಡಲಿಲ್ಲ. 35000 ಕೋಟಿ ರೂ.ಗಳ ನಷ್ಟವಾಯಿತು. 18171 ಕೋಟಿ ರೂಪಾಯಿಗಳ ಪರಿಹಾರ ಕೇಳಿದರೂ 7 ತಿಂಗಳ ಕಾಲ ನಮಗೆ ಕೊಡಲಿಲ್ಲ. ರಾಜ್ಯಕ್ಕೆ ಅನ್ಯಾಯವಾಗಿದ್ದರಿಂದ ಸುಪ್ರೀಂ ಕೋರ್ಟ್ಗೆ ಅನಿವಾರ್ಯವಾಗಿ ಹೋಗಬೇಕಾಯಿತು. ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ ಮೇಲೆ ನಮಗೆ 3454 ಕೋಟಿ ರೂಪಾಯಿಯ ಅಲ್ಪ ಪರಿಹಾರ ದೊರಕಿದೆ. ಬಾಕಿ ಪರಿಹಾರಕ್ಕೆ ಇನ್ಮೆಷ್ಟು ದಿನ‌ ಕಾಯಬೇಕೋ ಗೊತ್ತಿಲ್ಲ ಎಂದರು.

ಶಶಿಕಲಾ ಜೊಲ್ಲೆ ನಿಮ್ಮ ಪ್ರತಿನಿಧಿಯಾಗಿ ನಿಮಗಾದ ಅನ್ಯಾಯದ ಬಗ್ಗೆ ಬಾಯಿ ಬಿಟ್ಟಿಲ್ಲ. ಅಂದ ಮೇಲೆ ಅವರನ್ನು ಯಾಕೆ ಗೆಲ್ಲಿಸಬೇಕು ಎಂದು ಪ್ರಶ್ನಿಸಿದರು. ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರುವವರನ್ನು ಸಂಸತ್ತಿಗೆ ಕಳುಹಿಸಬಾರದು ಎಂದರು.

*ಬಸವಾದಿ ಶರಣರ ತತ್ವದಲ್ಲಿ ಕಾಂಗ್ರೆಸ್ ಗೆ ನಂಬಿಕೆ ಇದೆ*

ಬಡವರ ಕೊಳ್ಳುವ ಶಕ್ತಿ ಹೆಚ್ಚಿಸಲು ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ ಹಾಗೂ ಯುವನಿಧಿ  ಯೋಜನೆಗಳನ್ನು ಅಧಿಕಾರಕ್ಕೆ ಬಂದ ಎಂಟು ತಿಂಗಳಲ್ಲಿ ಜಾರಿಮಾಡಿ ನುಡಿದಂತೆ ನಡೆದಿದ್ದೇವೆ. ಬಸವಾದಿ ಶರಣರ ತತ್ವಗಳಲ್ಲಿ ನಂಬಿಕೆ ಇರಿಸಿಕೊಂಡಿದ್ದೇವೆ.

ಬಸವರಾಜ ಬೊಮ್ಮಾಯಿ ಅಥವಾ ಯಡಿಯೂರಪ್ಪ ಅವರಾಗಲಿ ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಲಿಲ್ಲ. ಅದನ್ನು ಮಾಡಿದ್ದು ಸಿದ್ದರಾಮಯ್ಯ ಸರ್ಕಾರ ಎಂದರು. 

ಬಸವಾದಿ ಶರಣರು ಜಾತಿ ರಹಿತ , ವರ್ಗ ರಹಿತ ಸಮಾಜ , ಸಮ ಸಮಾಜ ನಿರ್ಮಾಣವಾಗಬೇಕೆಂದು ಸಾರಿದರು. ಇದರಲ್ಲಿ ಕಾಂಗ್ರೆಸ್ ಗೆ ನಂಬಿಕೆ ಇದೆ. 

*ಅಂಬೇಡ್ಕರ್ ಅವರ ಆಶಯಗಳ ದಾರಿಯಲ್ಲಿ ಕಾಂಗ್ರೆಸ್*

ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದಲ್ಲಿಯೂ ಎಲ್ಲರಿಗೂ ಸಮಾನ ಅವಕಾಶ, ಹಕ್ಕುಗಳು, ಈ ದೇಶದ ಸಂಪತ್ತು ಹಂಚಿಕೆಯಾಗಬೇಕು ಎಂದು ಹೇಳಿದ್ದಾರೆ. ಅವಕಾಶ ವಂಚಿತರಿಗೆ ಸಾಮಾಜಿಕ , ಆರ್ಥಿಕ  ಅವಕಾಶ ದೊರೆತಾಗ ಮಾತ್ರ ರಾಜಕೀಯ ಸ್ವಾತಂತ್ರ್ಯ ಸಾರ್ಥಕವಾಗುತ್ತದೆ ಎಂದರು.

*25 ಗ್ಯಾರಂಟಿ ಘೋಷಣೆ*

ಎಐಸಿಸಿ ಕೂಡ 25 ಗ್ಯಾರಂಟಿ ಘೋಷಣೆ ಮಾಡಿದೆ. ಪ್ರಮುಖವಾಗಿ 5 ಗ್ಯಾರಂಟಿ ಪತ್ರಕ್ಕೆ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆಯವರು ಸಹಿ ಮಾಡಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಒಂದು ವರ್ಷಕ್ಕೆ ಒಂದು ಲಕ್ಷ ರೂಪಾಯಿ, ನಿರುದ್ಯೋಗಿ ಯುವಕರಿಗೆ  1 ಲಕ್ಷ ರೂಪಾಯಿ, ರೈತರ ಸಾಲ ಸಂಪೂರ್ಣ ಮನ್ನಾ ಮಾಡಲಾಗುವುದು. ಸ್ವಾಮಿನಾಥನ್ ವರದಿ ಶಿಫಾರಸ್ಸುಗಳನ್ನು ಜಾರಿ ಮಾಡಲಾಗುವುದು. ಎಂ.ಎಸ್. ಪಿ ಗೆ ಕಾನೂನು ತಂದು ಕಾನೂನಿನ ಚೌಕಟ್ಟಿಗೆ ತರುವ ಪ್ರಯತ್ನ ಮಾಡಲಾಗುವುದು ಎಂದರು.

*ಬೆಳಗಾವಿಯ ಎರಡು ಲೋಕಸಭಾ ಕ್ಷೇತ್ರಗಳನ್ನು ಒಂದು ಲಕ್ಷ ಲೀಡ್ ನಲ್ಲಿ  ಗೆಲ್ಲಿಸಿ*

ಸ್ಥಳೀಯ ಮುಖಂಡರು, ಶಾಸಕರು ಶಿಫಾರಸ್ಸಿನ ಮೇರೆಗೆ ಪ್ರಿಯಾಂಕ ಜಾರಕಿಹೊಳಿ ಹಾಗೂ ಮೃಣಾಳ್ ಹೆಬ್ಬಾಳ್ಕರ್ ಅವರನ್ನು ಅಭ್ಯರ್ಥಿಯನ್ನಾಗಿಸಿದೆ. ಅವರನ್ನು ಗೆಲ್ಲಿಸಿಕೊಂಡು ಬರುವುದು ನಿಮ್ಮ ಜವಾಬ್ದಾರಿ. ಬೆಳಗಾವಿಯ ಎರಡು ಲೋಕಸಭಾ ಕ್ಷೇತ್ರಗಳಲ್ಲೂ ಒಂದು ಲಕ್ಷ ಮತಗಳ ಲೀಡ್ ನಲ್ಲಿ  ಗೆಲ್ಲಿಸಬೇಕು. ಇವರಿಬ್ಬರೂ ನಿಮ್ಮನ್ನು ಸಂಸತ್ತಿನಲ್ಲಿಯೂ ಸಮರ್ಥವಾಗಿ ಪ್ರತಿನಿಧಿಸುತ್ತಾರೆ ಆದ್ದರಿಂದ ಅವರನ್ನು ಗೆಲ್ಲಿಸಿ ಎಂದು ಕರೆ ನೀಡಿದರು.

*ಮೋದಿ ಅಚ್ಛೇ ದಿನ್ ಬರಲಿಲ್ಲ*

ಹತ್ತು ವರ್ಷಗಳಾದರೂ ಈವರೆಗೆ ಯಾರ ಖಾತೆಗೂ 15 ರೂ. ಕೂಡ ಬಂದಿಲ್ಲ. ವರ್ಷಕ್ಕೆ  2 ಕೋಟಿ ಉದ್ಯೋಗ ಸೃಷ್ಟಿ  ಮಾಡುತ್ತೇವೆ ಎಂದವರು, ನಿರುದ್ಯೋಗಿ ಯುವಕರು ಕೆಲಸ ಕೊಡಿ ಎಂದರೆ ಪಕೋಡ ಮಾರಿ ಎಂದು ಅತ್ಯಂತ  ಬೇಜವಾಬ್ದಾರಿ ಉತ್ತರ ನೀಡಿದರು. ಇವರು ಈ ದೇಶದ ಪ್ರಧಾನಿಯಾಗಲು ಯೋಗ್ಯರೇ  ಇಲ್ಲವೋ ಎಂದು ವಿಚಾರ ಮಾಡಬೇಕು ಎಂದರು. 

2022 ರೊಳಗೆ ರೈತರ ಆದಾಯವನ್ನು ಎರಡು ಪಟ್ಟು ಮಾಡುವುದಾಗಿ ಹೇಳಿದರು, ಆದರೆ ರೈತರ ಖರ್ಚು ಮೂರು ಪಟ್ಟು ಹೆಚ್ಚಾಯಿತೇ ಹೊರತು ಹೆಚ್ಚಾಗಲಿಲ್ಲ. ಅಗತ್ಯ ವಸ್ತುಗಳ ಬೆಲೆ ಹೆಚ್ಚಾಯಿತು. ಅಚ್ಚೇ ದಿನ್ ಬರಲಿಲ್ಲ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button