Belagavi NewsBelgaum NewsKannada NewsKarnataka News

*ಬಿಜೆಪಿಯಿಂದ ನಕಲಿ ಜನಾಕ್ರೋಶ ಯಾತ್ರೆ: ಸಿ.ಎಂ ಭರವಸೆ*

ಪ್ರಗತಿವಾಹಿನಿ ಸುದ್ದಿ: ಬೆಲೆ ಏರಿಕೆಯ ಸರದಾರ ಪ್ರಧಾನಿ ಮೋದಿ ಅವರು ಸುಳ್ಳಿನ ಸರದಾರರೂ ಆಗಿದ್ದಾರೆ. ಮೋದಿ ಅವರು ಭಾಷಣದಲ್ಲಿ ಕೊಟ್ಟ ಭರವಸೆಯಲ್ಲಿ ಒಂದೇ ಒಂದು ಜಾರಿ ಆಗಿರುವ ಉದಾಹರಣೆ ಇದೆಯೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸವಾಲು ಹಾಕಿದರು. 

ಹಾವೇರಿ ಜಿಲ್ಲೆಯಲ್ಲಿ 650 ಕೋಟಿ ಮೌಲ್ಯದ ಅಭಿವೃದ್ಧಿ ಕಾರ್ಯಗಳನ್ನು ಜನಾರ್ಪಣೆಗೊಳಿಸಿ,  ನೂತನ ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. 

Home add -Advt

ಹಾವೇರಿ ಜಿಲ್ಲೆ ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಅಧ್ಯಾತ್ಮಿಕವಾಗಿ ಶ್ರೇಷ್ಠತೆ ಪಡೆದಿರುವ ಜಿಲ್ಲೆ. ಈ ಜಿಲ್ಲೆಯ ಆರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹಾವೇರಿಯಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲತ್ತೆ ಎಂದು ಸಿ.ಎಂ ಚುನಾವಣೆಗಳ ಭರವಸೆ ವ್ಯಕ್ತಪಡಿಸಿದರು. 

ನೀವು ಕಾಂಗ್ರೆಸ್ ಪಕ್ಷಕ್ಕೆ, ಈ ಸರ್ಕಾರಕ್ಕೆ ಕೊಟ್ಟ ಮತಗಳಿಗೆ ನಾವು ಘನತೆಯಿಂದ ಗೌರವಿಸಿದ್ದೇವೆ. ಚುನಾವಣೆಗೆ ಮೊದಲು ಕೊಟ್ಟ ಮಾತಿನಂತೆ ಐದಕ್ಕೆ ಐದೂ ಗ್ಯಾರಂಟಿಗಳನ್ನೂ ಜಾರಿಗೊಳಿಸಿ ನಿಮ್ಮ ಮತಗಳ ತೂಕ ಹೆಚ್ಚಿಸಿದ್ದೇವೆ ಎಂದರು. 

ಗ್ಯಾರಂಟಿಗಳಿಂದ ಖಜಾನೆ ಖಾಲಿ ಆಗಿದೆ ಎಂದು ಬಿಜೆಪಿ, ಜೆಡಿಎಸ್ ಮಾಡುತ್ತಿರುವ ಹಸಿ ಹಸಿ ಸುಳ್ಳು ನಂಬಬೇಡಿ. ಕಳೆದ ವರ್ಷದ ಬಜೆಟ್ ಗಾತ್ರಕ್ಕಿಂತ ಈ ಬಾರಿಯ ಬಜೆಟ್ ಗಾತ್ರ 38 ಸಾವಿರ ಕೋಟಿ ಹೆಚ್ಚಾಗಿದೆ. ಮಾತ್ರವಲ್ಲ ಈ ಬಾರಿ ಬಂಡವಾಳ ವೆಚ್ಚ 83 ಸಾವಿರ ಕೋಟಿ ತೆಗೆದಿರಿಸಿದ್ದೀವಿ. ಕಳೆದ ವರ್ಷಕ್ಕಿಂತ 31 ಸಾವಿರ ಕೋಟಿ ಬಂಡವಾಳ ವೆಚ್ಚ ಹೆಚ್ಚಾಗಿದೆ. ಇದಲ್ಲದೆ ಹೆಚ್ಚುವರಿಯಾಗಿ 50 ಸಾವಿರ ಕೋಟಿ ರೂಪಾಯಿಗಳನ್ನು ಗ್ಯಾರಂಟಿಗಳಿಗೆ ತೆಗೆದಿಟ್ಟಿದ್ದೇವೆ. ಒಟ್ಟು ಒಂದು ಲಕ್ಷದ 33 ಸಾವಿರ ಕೋಟಿ ರೂಪಾಯಿಯನ್ನು ಅಭಿವೃದ್ಧಿ ಕಾರ್ಯಗಳಿಗೆ ತೆಗೆದಿಟ್ಟಿದ್ದೀವಿ. ಇದುವೆಲ್ಲವೂ ಬಿಜೆಪಿಯ ಹಸಿ ಸುಳ್ಳುಗಳ ಸಂಪ್ರದಾಯಕ್ಕೆ ಉದಾಹರಣೆ ಎಂದು ವಿವರಿಸಿದರು.

ಆರ್.ಅಶೋಕ, ವಿಜಯೇಂದ್ರ ಈಗ ನಮ್ಮ ಸರ್ಕಾರದ ವಿರುದ್ಧ ನಕಲಿ ಜನಾಕ್ರೋಶ ಸಭೆ ನಡೆಸುತ್ತಿದ್ದಾರೆ. ಇವರಿಗೆ ಮಾನ ಮರ್ಯಾದೆ ಇದ್ದಿದ್ದರೆ ಕೇಂದ್ರ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ವಿರುದ್ಧ ಪ್ರತಿಭಟನೆ ಮಾಡಬೇಕಿತ್ತು ಎಂದು ಟೀಕಿಸಿದರು. 

ಅಚ್ಛೇದಿನ್ ಆಯೆಗಾ ಅಂದ್ರಲ್ಲಾ ಮೋದಿ, ಎಲ್ರೀ ಬಂತು ಈ ಅಚ್ಛೆ ದಿನ್. ದುರ್ಬೀನು ಹಾಕಿ ಹುಡುಕಿದರೂ ಕಾಣಿಸುತ್ತಿಲ್ಲ ಎಂದರು.

ಡಾಲರ್ ಬೆಲೆ 59 ರೂನಿಂದ 85 ರೂಪಾಯಿಗೆ ಏರಿಕೆ ಆಗಿದೆ. ಅಡಗೆ ಅನಿಲ 400 ರೂಪಾಯಿಂದ 879 ರೂ ಆಗಿದೆ. ಪೆಟ್ರೋಲ್, ಡೀಸೆಲ್, ರಸಗೊಬ್ಬರ, ಔಷಧ, ಚಿನ್ನ, ಅಕ್ಕಿ, ಬೇಳೆ, ಎಣ್ಣೆ, ಕಾಳು ಸೇರಿ ಎಲ್ಲದರ ಬೆಲೆಯನ್ನೂ ಮೋದಿ ಆಕಾಶಕ್ಕೆ ಏರಿಸಿದ್ದಾರಲ್ಲಾ ಇದೇನಾ ಅಚ್ಚೆ ದಿನ್ ? ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡ್ತೀವಿ ಎಂದು ಮೋದಿ ಭರವಸೆ ಕೊಟ್ಟಿದ್ದರು. ಈ 11 ವರ್ಷದಲ್ಲಿ 22 ಕೋಟಿ ಉದ್ಯೋಗ ಸೃಷ್ಟಿ ಆಗಬೇಕಿತ್ತು. ಆಗಲಿಲ್ಲ. ಅದಕ್ಕೇ ಹೇಳೋದು ಸುಳ್ಳು ಬಿಜೆಪಿಯ ಮನೆ ದೇವರು ಎಂದರು. 

ಆದ್ದರಿಂದ ಜನರ ಆಕ್ರೋಶ ಇರುವುದು ಬಿಜೆಪಿ ಮೇಲೆ, ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಎನ್ನುವುದನ್ನು ಆರ್.ಅಶೋಕ್, ವಿಜಯೇಂದ್ರ ಅರ್ಥ ಮಾಡಿಕೊಳ್ಳಲಿ ಎಂದರು. 

ಶಾಸಕ ಮಾನೆಯವರು ಕ್ಷೇತ್ರಕ್ಕೆ  ಮಾಡಿರುವ ಕೆಲಸ ಕಾಣುತ್ತಿದೆ. ಈ ಊರಿನ ಅಳಿಯ ಬೊಮ್ಮಾಯಿಯವರೇ ಕ್ಷೇತ್ರಕ್ಕೆ ಏನು ಮಾಡಿದ್ದೀರಿ ಜನರಿಗೆ ಉತ್ತರಿಸಿ ಎಂದು ಸವಾಲು ಹಾಕಿದ ಮುಖ್ಯಮಂತ್ರಿಗಳು, ಮುಂದೆ ಶಾಸಕ ಮಾನೆಯವರಿಗೆ ರಾಜಕೀಯವಾಗಿ ಉತ್ತಮ ಭವಿಷ್ಯ ಇದೆ ಎಂದು ಘೋಷಿಸಿದರು.

Related Articles

Back to top button