Kannada NewsKarnataka News

ಮೊದಲ ಬಾರಿಗೆ ರಮೇಶ ಜಾರಕಿಹೊಳಿಗೆ ಕಠಿಣ ಶಬ್ದದಿಂದ ತಿರುಗೇಟು ನೀಡಿದ ಚನ್ನರಾಜ ಹಟ್ಟಿಹೊಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮಂಗಳವಾರ ಮಧ್ಯರಾತ್ರಿ 12.30ಕ್ಕೆ ಕರೆ ಮಾಡಿ ತಮಗೆ ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎನ್ನುವ ಮಾಜಿ ಸಚಿವ ರಮೇಶ ಜಾರಕಿಹೊಳಿ ಆರೋಪಕ್ಕೆ ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ತೀವ್ರ ಸಿಡಿಮಿಡಿ ಗೊಂಡಿದ್ದಾರೆ.

ಬುಧವಾರ ಸಂಜೆ ತಮ್ಮನ್ನು ಭೇಟಿ ಮಾಡಿದ ಮಾಧ್ಯಮಗಳ ಜೊತೆ ಮಾತನಾಡಿದ ಅವರು ರಮೇಶ ಜಾರಕಿಹೊಳಿ ಅವರ ಗೋಕಾಕ ಕ್ಷೇತ್ರ ಸೇರಿದಂತೆ ಅವರ ಉಸ್ತುವಾರಿಯ ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ ಸೋಲುತ್ತದೆ ಎನ್ನುವುದು ಗೊತ್ತಾಗಿ ಅವರು ಹತಾಶರಾಗಿದ್ದಾರೆ, ಅವರಿಗೆ ಹುಚ್ಚು ಹಿಡಿದಿದೆ ಎಂದು ಕಿಡಿಕಾರಿದರು.

ರಮೇಶ ಜಾರಕಿಹೊಳಿ ಉದ್ದಟತನದ ಮಾತುಗಳನ್ನಾಡಿದ್ದಾರೆ. ಅವರಿಗೆ ತಲೆ ಕೆಟ್ಟಿದೆ. ಅಥಣಿ, ಬೆಳಗಾವಿ ಗ್ರಾಮೀಣ, ಕಾಗವಾಡ ಮತ್ತು ಗೋಕಾಕದಲ್ಲಿ ಬಿಜೆಪಿ ಸೋಲುತ್ತದೆ ಎಂದು ಹತಾಶರಾಗಿದ್ದಾರೆ ಎಂದರು.

ರಾತ್ರಿ 12.30ಕ್ಕೆ ಫೋನ್ ಮಾಡಿ ಬ್ಲ್ಯಾಕ್ ಮಾಡಿದ್ದಾರೆ ಎಂದು ಡಿ.ಕೆ.ಶಿವಕುಮಾರ ಅವರ ಮೇಲೆ ಆರೋಪ ಮಾಡಿದ್ದಾರೆ. ಮಾನ ಮರ್ಯಾದೆ ಇದ್ದರೆ ಆರೋಪಕ್ಕೆ ಪೂರಕವಾಗಿ ಅವರು ಫೋನ್ ಕರೆಯ ಸ್ಕ್ರೀನ್ ಶಾಟ್, ಕಾಲ್ ರೆಕಾರ್ಡ್ ರಿಲೀಸ್ ಮಾಡಲಿ. ಯಾವುದೇ ಮೊಬೈಲ್ ಗೆ ಕಾಲ್ ಬಂದಿದ್ದರೂ ಅದರ ದಾಖಲೆ ನೀಡಲಿ. ಇಲ್ಲವಾದಲ್ಲಿ ಬಹಿರಂಗ ಕ್ಷಮೆ ಯಾಚಿಸಲಿ ಎಂದು ಸವಾಲು ಹಾಕಿದರು.

Home add -Advt

ಚಾಮುಂಡೇಶ್ವರಿ ದೇವಿ ಆಣೆ ಮಾಡಿ ಸಿಡಿ ಪ್ರಕರಣದಲ್ಲಿದ್ದವನುನಾನಲ್ಲ ಎಂದು ಹೇಳಿ ಕೆಲವು ದಿನಗಳ ನಂತರ ನಾನೇ ಎಂದು ಒಪ್ಪಿಕೊಂಡ ನೀವು ಯಾವ ನೈತಿಕತೆಯಿಂದ ಮಾಧ್ಯಮಗಳ ಮುಂದೆ ಮಾತನಾಡುತ್ತೀರಿ? ಮಾನ ಮರ್ಯಾದೆ ಇದ್ದರೆ ತಕ್ಷಣ ಪೋನ್ ನಂಬರ್ ರಿಲೀಸ್ ಮಾಡಿ, ಇಲ್ಲವೇ ಕ್ಷಮೆ ಕೇಳಿ. ನಾವು ಸಹನೆಯಿಂದ ಆರೋಪ, ಟೀಕೆಗಳಿಗೆ ಇಷ್ಟು ದಿನ ಉತ್ತರ ಕೊಟ್ಟಿರಲಿಲ್ಲ. ನಿಮ್ಮ ಉದ್ದಟತನವನ್ನು ಇನ್ನು ಸಹಿಸಲು ಸಾಧ್ಯವಿಲ್ಲ ಎಂದರು.

ಮಾತನಾಡಲು ನಮ್ಮ ಬಳಿಯೂ ಡಿಕ್ಷ್ನರಿ ಇದೆ. ನಾವು ಕಲಿತವರು, ಸೂಕ್ಷ್ಮತೆಯಿಂದ ಮಾತನಾಡುತ್ತೇವೆ. ಆದರೆ ಇಂತಹ ನಾಲಾಯಕರಿಗೆ ಇನ್ನು ಮುಂದೆ ಅವರದ್ದೇ ಭಾಷೆಯಲ್ಲಿ ಉತ್ತರ ಕೊಡುತ್ತೇವೆ. ಇವರ ಮಂಚದಾಟದಲ್ಲಿ ಕರ್ನಾಟಕ, ಬೆಳಗಾವಿ ಜಿಲ್ಲೆ ಮತ್ತು ಗೋಕಾಕ ಜನತೆಯ ಮರ್ಯಾದೆ ತೆಗೆದಿದ್ದಾರೆ. ಯಾವ ಮರ್ಯಾದೆ ಇಟ್ಟುಕೊಂಡು ಮಾಧ್ಯಮದ ಮುಂದೆ ಬರುತ್ತಾರೆ? ಇವರ ಕಾಮಪುರಾಣ ಎಲ್ಲರೂ ನೋಡಿದ್ದಾರೆ. ಅಂತದ್ದರಲ್ಲಿ ಯಾವ ಮುಖ ಇಟ್ಟುಕೊಂಡು ಬರುತ್ತಾರೆ ಎಂದು ಚನ್ನರಾಜ ಪ್ರಶ್ನಿಸಿದರು.

ಅವರು ಗೋಕಾಕದಲ್ಲಿ ಸೋಲುತ್ತಾರೆ. ಹಾಗಾಗಿ ಹತಾಶರಾಗಿದ್ದಾರೆ. ಬೆಳಗಾವಿ ಗ್ರಾಮೀಣದಲ್ಲಿ ಬಿಜೆಪಿ ಮತಗಳನ್ನು ಎಂಇಎಸ್ ಗೆ ಹಾಕಿಸಲು ಬಹಳ ಪ್ರಯತ್ನ ಮಾಡಿದ್ದಾರೆ. ಆದರೆ ಜನರು ಒಪ್ಪಲಿಲ್ಲ. ಇವರ ಕುತಂತ್ರವನ್ನು ಜನರು ಅರ್ಥ ಮಾಡಿಕೊಂಡಿದ್ದಾರೆ. ನಮ್ಮ ತಾಳ್ಮೆಗೆ ಮಿತಿ ಇದೆ. ಇನ್ನೂ ಅವರು ಉದ್ದಟತನ ಮುಂದುವರಿಸಿದರೆ ಅವರಿಗೆ ಅವರದೇ ಭಾಷೆಯಲ್ಲಿ ಉತ್ತರ ಕೊಡುತ್ತೇವೆ ಎಂದೂ ಎಚ್ಚರಿಸಿದರು.

https://pragati.taskdun.com/ramesh-jarakiholireactiond-k-shivakumarcd-case/

Related Articles

Back to top button