

ಪ್ರಗತಿವಾಹಿನಿ ಸುದ್ದಿ: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ದುರಂತದಲ್ಲಿ 11 ಜನರು ಆರ್ ಸಿಬಿ ಅಭಿಮಾನಿಗಖು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಅವರ ಸ್ಥಾನಕ್ಕೂ ಕಂಟಕ ಬಂದಿದೆ.
ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಅವರನ್ನು ಹುದ್ದೆಯಿಂದ ಬಿಡುಗಡೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಸಿದೆ.
ಚಿನ್ನಸ್ವಾಮಿ ಸ್ಟೆಡಿಯಂನಲ್ಲಿ ಕಾಲ್ತುಳಿತ ಸಂಭವಿಸಿ 11 ಜನರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದ್ದು, ಕೆಲ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಇದೀಗ ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಅವರನ್ನು ಸೇವೆಯಿಂದ ತೆಗೆದುಹಾಕಿ ಕ್ರಮ ಕೈಗೊಳ್ಳಲಾಗಿದೆ.
ಆರ್ ಸಿಬಿ ಆಟಗಾರರಿಗೆ ವಿಧಾನಸೌಧದಲ್ಲಿ ಸನ್ಮಾನ ಮಾಡುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಒತ್ತಡ ಹೇರಿದ್ದೇ ಗೋವಿಂದರಾಜು ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೇ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕೂಡ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಪರೋಕ್ಷವಾಗಿ ಗೋವಿಂದರಾಜು ಅವರ ಹೆಸರು ಪ್ರಸ್ತಾಪ ಮಾಡಿ ವಾಗ್ದಾಳಿ ನಡೆಸಿದ್ದರು.
ಗೋವಿಂದರಾಜು ಅವರು ಪೊಲೀಸ್ ಆಯುಕ್ತರಿಗೆ ಕರೆ ಮಾಡಿ ವಿಧಾನಸೌಧದ ಕಾರ್ಯಕ್ರಮಕ್ಕೆ ಭದ್ರತೆ ನಿಡುವಂತೆ ಒತ್ತಡ ಹಾಕಿದ್ದರು. ಆದರೆ ಆಯುಕ್ತರು ಪೊಲೀಸರು ಬೆಳಿಗ್ಗೆವರೆಗೆ ನಿದ್ದೆಗೆಟ್ಟು ಕೆಲಸ ಮಾಡಿದ್ದಾರೆ. ಎರಡು ಮೂರು ಕಡೆ ಕಾರ್ಯಕ್ರಮ ಮಾಡಿದರೆ ಭದ್ರತೆ ನೀಡಲು ಕಷ್ಟವಾಗುತ್ತದೆ. ಒಂದು ಕಡೆ ಕಾರ್ಯಕ್ರಮ ಮಾಡಿದರೆ ಭದ್ರತೆ ನೀಡಲು ಸಾಧ್ಯ ಎಂದು ವಿಧಾನಸೌಧದ ಕಾರ್ಯಕ್ರಮಕ್ಕೆ ಭದ್ರತೆ ನೀಡಲು ಆಗಲ್ಲ ಎಂದಿದ್ದಾರೆ.
ಈ ವೇಳೆ ಗೋವಿಂದರಾಜು ಸಿಎಂ ಬಳಿ ಹೋಗಿ ಹೇಳುತ್ತಾರೆ. ಸಿಎಂ ಆಯುಕ್ತರನ್ನು ಕರೆಸಿ ನಾನು ಈ ರಾಜ್ಯದ ಸಿಎಂ ಆಗಿ ಆದೇಶ ಮಾಡುತ್ತಿದ್ದೇನೆ. ವಿಧಾನಸೌಧ ಕಾರ್ಯಕ್ರಮಕ್ಕೆ ಭದ್ರತೆ ನೀಡುವಂತೆ ತಾಕೀತು ಮಾಡಿದ್ದಾರೆ. ಅನಿವಾರ್ಯವಾಗಿ ಕಮಿಷ್ನರ್ ವಿಧಾನಸೌಧಕ್ಕೆ ಭದ್ರತೆ ಕಲ್ಪಿಸುತ್ತಾರೆ.
ಆದರೆ ಯಾರಿಗೂ ವಿಡಿಯೋ ಕಾನ್ಫರೆನ್ಸ್ ಮೂಲಕ ಸೂಚನೆ ನೀಡಿಲ್ಲ. ಕಾಟಾಚಾರಕ್ಕೆ ಸ್ಟೇಡಿಯಂ ಬಳಿ ಮೂರ್ನಾಲ್ಕು ತುಕಡಿಗಳನ್ನು ನಿಯೋಜಿಸಿದ್ದರು ಎಂದು ಗಂಭೀರ ಆರೋಪ ಮಾಡಿದ್ದರು. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಗೋವಿಂದರಾಜು ಅವರನ್ನು ಹುದ್ದೆಯಿಂದ ತೆಗೆಯಲಾಗಿದೆ.
