*ಮೋದಿಯವರು ತಮ್ಮ ಪಕ್ಷದ ನಾಯಕರನ್ನೇ ರಕ್ಷಣೆ ಮಾಡಿಕೊಳ್ಳಲಿಲ್ಲ; ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಬರುವವರಿಗೆ ಸ್ವಾಗತ; ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಾವು ನಮ್ಮ ಪಕ್ಷವನ್ನು ಗೆಲ್ಲಿಸಿಕೊಳ್ಳಲು ಬೇಕಾದ ರಣತಂತ್ರಗಳನ್ನು ರೂಪಿಸಿಕೊಳ್ಳುತ್ತಿದ್ದೇವೆ. ಏನು ಮಾಡುತ್ತೇವೆ ಎಂದು ಹೇಳುವುದಿಲ್ಲ. ಆದರೆ ರಾಜ್ಯದ ಜನರಿಗೆ ನಾವು ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಸ್ಜಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಕರ್ನಾಟಕ ವಿಧಾನಸಭಾ ಕ್ಷೇತ್ರಗಳ ವೀಕ್ಷಕರ ಸಭೆ ನಂತರ ಮಾತನಾಡಿದ ಡಿ.ಕೆ. ಶಿವಕುಮಾರ್, ನಾವು ಕೊಟ್ಟಿರುವ ಗ್ಯಾರಂಟಿ ಯೋಜನೆಗಳು ನಮ್ಮ ಸರ್ಕಾರ ಬಂದ ತಕ್ಷಣವೇ ಜಾರಿಯಾಗಬೇಕು. ಪ್ರತಿ ಮನೆಯೊಡತಿಗೆ 2 ಸಾವಿರ, ನಿರುದ್ಯೋಗಿ ಯುವಕರಿಗೆ ನಿರುದ್ಯೋಗ ಭತ್ಯೆ, ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್, ಅನ್ನಭಾಗ್ಯ ಮೂಲಕ ಪ್ರತಿ ಬಡ ವ್ಯಕ್ತಿಗೆ 10 ಕೆ.ಜಿ ಅಕ್ಕಿ ತಲುಪಬೇಕು. ಇದರ ಜತೆಗೆ ಉತ್ತಮ ಆಡಳಿತ ನೀಡಬೇಕು. ಇದಕ್ಕಾಗಿ ಮತದಾರರನ್ನು ಯಾವ ರೀತಿ ಮನವೊಲಿಸಬೇಕು ಎಂದು ಯೋಜನೆ ರೂಪಿಸುತ್ತಿದ್ದೇವೆ ಎಂದರು.
ಬಿಜೆಪಿ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿರುವುದರ ಬಗ್ಗೆ ಕೇಳಿದ ಪ್ರಶ್ನೆಗೆ, ‘ಡಬಲ್ ಇಂಜಿನ್ ಸರ್ಕಾರ ಕರ್ನಾಟಕ ರಾಜ್ಯದಲ್ಲಿ ವಿಫಲವಾಗಿವೆ. ಇಲ್ಲಿನ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಲು ಬಿಜೆಪಿ ಸರ್ಕಾರಗಳಿಂದ ಸಾಧ್ಯವಾಗಿಲ್ಲ. ಮೋದಿ ಅವರಾಗಲಿ, ಅಮಿತ್ ಶಾ ಅವರಾಗಲಿ ರಾಜ್ಯಕ್ಕೆ ಬಂದು ಆಡಳಿತ ನಡೆಸುವುದಿಲ್ಲ. ಡಬಲ್ ಇಂಜಿನ್ ಸರ್ಕಾರ ಉತ್ತಮ ಆಡಳಿತ ನೀಡಲು ವಿಫಲವಾಗಿವೆ. ಕರ್ನಾಟಕ ರಾಜ್ಯದ ಜನ ವಿದ್ಯಾವಂತರು, ಪ್ರಗತಿಶೀಲರು. ರಾಜ್ಯ ಈ ಹಿಂದೆ ಹೊಂದಿದ್ದ ಘನತೆಯನ್ನು ನಾವು ಮತ್ತೆ ಪುನರ್ ಸ್ಥಾಪಿಸಬೇಕಿದೆ. ರಾಜ್ಯವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸಬೇಕು. ರಾಜ್ಯವನ್ನು ಭ್ರಷ್ಟಾಚಾರ ಮುಕ್ತಗೊಳಿಸಬೇಕು. ಬೆಲೆ ಏರಿಕೆಯಿಂದ ತತ್ತರಿಸಿರುವ ಜನರನ್ನು ಕಾಪಾಡಬೇಕು. ಹೀಗಾಗಿ ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಯಾರೆಲ್ಲಾ ಪಕ್ಷ ಸೇರುತ್ತಾರೋ ಎಲ್ಲರನ್ನು ಸ್ವಾಗತಿಸುತ್ತೇವೆ’ ಎಂದು ತಿಳಿಸಿದರು.
ಬಿಜೆಪಿ ಅಭಿವೃದ್ಧಿ ಮಂತ್ರ ಹಾಗೂ ನರೇಂದ್ರ ಮೋದಿ ಅವರ ಇಮೇಜ್ ಮೇಲೆ ಚುನಾವಣೆ ಮಾಡುತ್ತಿದೆ, ಕಾಂಗ್ರೆಸ್ ಗ್ಯಾರಂಟಿ ಯೋಜನೆ ಅಸ್ತ್ರ ಪ್ರಯೋಗಿಸುತ್ತಿದೆ. ಉಳಿದಂತೆ ನಿಮ್ಮ ಅಸ್ತ್ರಗಳೇನು ಎಂದು ಕೇಳಿದ ಪ್ರಶ್ನೆಗೆ, ‘ಬಿಜೆಪಿ ಸರ್ಕಾರ ತಾನು ಕೊಟ್ಟ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಮೋದಿ ಅವರು ತಮ್ಮ ಪಕ್ಷದ ನಾಯಕರುಗಳನ್ನೇ ರಕ್ಷಣೆ ಮಾಡಿಕೊಳ್ಳಲಿಲ್ಲ. ಕರ್ನಾಟಕದಲ್ಲಿ ಅವರ ಮ್ಯಾಜಿಕ್ ನಡೆಯುವುದಿಲ್ಲ’ ಎಂದರು.
ರಾಜ್ಯಕ್ಕೆ ಮೋದಿ ಅವರು ಪ್ರಚಾರ ಮಾಡಲಿದ್ದು, ಮೋದಿ ಸುನಾಮಿ ಬರಲಿದೆ ಎಂಬ ಜೆ.ಪಿ ನಡ್ಡಾ ಅವರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ, ‘ರಾಜ್ಯ ಚುನಾವಣೆ ಮುಗಿಯುವವರೆಗೂ ಮೋದಿ ಅವರು ಇಲ್ಲೇ ಬಂದು ಇರಲಿ. ಇಲ್ಲಿನ ಹವಾಮಾನ, ಆತಿಥ್ಯ, ಸಂಸ್ಕೃತಿ ಎಲ್ಲವೂ ಉತ್ತಮವಾಗಿವೆ’ ಎಂದು ಟಾಂಗ್ ನೀಡಿದರು.
ಕನಕಪುರವನ್ನು ಬಿಜೆಪಿ ಕ್ಷೇತ್ರವನ್ನಾಗಿ ಮಾಡುತ್ತೇವೆ ಎಂಬ ಆರ್.ಅಶೋಕ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, ‘ಅವರಿಗೆ ನಾನು ಶುಭಾಷಯ ಕೋರುತ್ತೇನೆ. ಕನಕಪುರದಲ್ಲಿ ನಾನು ಅಭ್ಯರ್ಥಿ ಎನ್ನುವುದಕ್ಕಿಂತ, ಕ್ಷೇತ್ರದ ಪ್ರತಿ ಮನೆಯ ಮತದಾರ ಅಭ್ಯರ್ಥಿಯಾಗಿದ್ದಾರೆ. ಅವರೇ ಈ ಚುನಾವಣೆಯನ್ನು ನಡೆಸಲಿದ್ದಾರೆ’ ಎಂದರು.