Latest

ಧಾರವಾಡದಲ್ಲಿ ಸೀಲ್ ಡೌನ್; ಸ್ಪಷ್ಟೀಕರಣ ನೀಡಿದ ಡಿಸಿ

ಪ್ರಗತಿವಾಹಿನಿ ಸುದ್ದಿ; ಧಾರವಾಡ: ಧಾರವಾಡದ ಎಸ್.ಡಿ.ಎಮ್. ಮಹಾವಿದ್ಯಾಲಯದ ವಿದ್ಯಾರ್ಥಿಗಳಲ್ಲಿ ಮತ್ತು ವೈದ್ಯರಲ್ಲಿ ಕೋವಿಡ್ ಪ್ರಕರಣಗಳು ಪತ್ತೆ ಆಗಿದ್ದರಿಂದ ಕಳೆದ ನ.25 ರಿಂದ ಎಸ್.ಡಿ.ಎಮ್. ಮಹಾವಿದ್ಯಾಲಯ ಬಂದ್ ಮಾಡಲಾಗಿದೆ ಮತ್ತು ಸೋಂಕಿತ ವಿದ್ಯಾರ್ಥಿಗಳು ಇರುವ ಎರಡು ವಸತಿ ನಿಲಯಗಳನ್ನು ಮಾತ್ರ ನಿಯಮಾನುಸಾರ ಸೀಲ್ ಡೌನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾಧಿಕಾರಿಗಳು, ಮಕ್ಕಳ, ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಎಸ್.ಡಿ.ಎಮ್.ಆಸ್ಪತ್ರೆಯ ಸಮೀಪದಲ್ಲಿರುವ ಅಂಗನವಾಡಿ, ಶಾಲೆ,ಕಾಲೇಜುಗಳಿಗೆ ಡಿ.1ರವರೆಗೆ ತರಗತಿಗಳನ್ನು ನಡೆಸದಂತೆ, ತೆರೆಯದಂತೆ ಸೂಚಿಸಲಾಗಿದೆ. ಆದರೆ ಜಿಲ್ಲಾಡಳಿತದಿಂದ ಯಾವುದೇ ಇತರ ಪ್ರದೇಶ ಅಥವಾ 500 ಮೀಟರ್ ವ್ಯಾಪ್ತಿಯಲ್ಲಿ ಸೀಲ್ ಡೌನ್ ಮಾಡಿದ ಕುರಿತು ಆದೇಶ ಹೊರಡಿಸಿಲ್ಲ ಎಂದರು.

ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಹಾಗೂ ಕೋವಿಡ್ ಹರಡದಂತೆ ತಡೆಯಲು ಎಸ್.ಡಿ.ಎಮ್.ಆಸ್ಪತ್ರೆಯ ಹೊರ ರೋಗಿಗಳ ಚಿಕಿತ್ಸಾ ವಿಭಾಗವನ್ನು ಮತ್ತು ಹೊಸ ರೋಗಿಗಳ ಅಡ್ಮಿಮಿಶನ್ ಮಾಡುವದನ್ನು ಕೆಲವು ದಿನಗಳ ಕಾಲ ನಿಲ್ಲಿಸಲಾಗಿದೆ. ಉಳಿದಂತೆ ಎಲ್ಲ ರೀತಿಯ ವಾಣಿಜ್ಯ ಚಟುವಟಿಕೆ, ಉದ್ಯಮಗಳನ್ನು ತೆರೆಯಲು ಅನುಮತಿಸಲಾಗಿದೆ.

ಹೆಗ್ಗಡೆ ಕಲಾಕ್ಷೇತ್ರದ ಆವರಣ ಮತ್ತು ಒಳಾಂಗಣದಲ್ಲಿ ಈಗಾಗಲೇ ಎರಡಮೂರು ಬಾರಿ ಸ್ಯಾನಿಟೈಜೆಶನ್ ಮಾಡಲಾಗಿದ್ದು, ಎಲ್ಲಾ ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ಮದುವೆ, ಸಭೆಗಳಿಗೆ ಅನುಮತಿ ನೀಡಲಾಗುತ್ತಿದೆ. ಹೆಗ್ಗಡೆ ಕಲಾಕ್ಷೇತ್ರದಲ್ಲಿನ ಕಾರ್ಯಕ್ರಮಗಳಿಗೆ ಆಗಮಿಸುವ ಆಗಮನ ಮತ್ತು ನಿರ್ಗಮನಕ್ಕೆ ಇರುವ ಸ್ಥಳವು ಪ್ರತ್ಯೇಕವಾಗಿರುತ್ತದೆ.

ಕಳೆದ ರವಿವಾರದಿಂದ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮಗಳು ನಡೆಯುತ್ತಿವೆ. ಕೇವಲ ನೂರು ಜನರಿಗೆ ಮಾತ್ರ ಅಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಪ್ರತಿಯೊಬ್ಬರಿಗೂ ಮಾಸ್ಕ್ ಧಾರಣೆ, ಸ್ಯಾನಿಟೈಜರ್ ಬಳಕೆ, ಸಾಮಾಜಿಕ ಅಂತರ ಪಾಲನೆ ಕಡ್ಡಾಯಗೊಳಿಸಲಾಗಿದೆ. ಮತ್ತು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆದಿರುವವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಈ ಕುರಿತು ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆಗಳು ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿವೆ. ಆದರೆ ಕೆಲವು ಮಾಧ್ಯಮಗಳಲ್ಲಿ ಈ ಕುರಿತು ತಪ್ಪು ಮಾಹಿತಿ ಇರುವ ಸಂದೇಶ ಪ್ರಕಟವಾಗುತ್ತಿದೆ. ಸಾರ್ವಜನಿಕರಲ್ಲಿ ಗೊಂದಲ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಲು ಮತ್ತು ಮಹಾಮಾರಿ ಕೋವಿಡ್ ನಿಯಂತ್ರಣಕ್ಕೆ ಪ್ರತಿಯೊಬ್ಬರು ಸಹಕರಿಸುವಂತೆ ಮಾಡಲು ಜಾಗೃತಿ ಮೂಡಿಸುವ ವರದಿಗಳನ್ನು ಪ್ರಕಟಿಸಲು ಮಾಧ್ಯಮ ಮಿತ್ರರಲ್ಲಿ ವಿನಂತಿಸಲಾಗಿದೆ.

ವಿದ್ಯಾರ್ಥಿಗಳಿರುವ ಎರಡು ವಸತಿ ನಿಲಯ ಹಾಗೂ ಎಸ್.ಡಿ.ಎಮ್. ಆಸ್ಪತ್ರೆಯನ್ನು ಹೊರತುಪಡಿಸಿ, ಉಳಿದ ಕಡೆಗೆ ಎಲ್ಲೂ ಕಂಟೊನ್ಮೆಂಟ್ ಜೋನ್ ಅಥವಾ ಸೀಲ್ ಡೌನ್ ಮಾಡಿಲ್ಲ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಲಸಿಕೆ ಪಡೆಯದವರಿಗೆ ಮಾತ್ರ ಸರ್ಕಾರಿ ಸೌಲಭ್ಯ ಎಂಬ ಶಿಫಾರಸ್ಸನ್ನು ಸರ್ಕಾರ ಒಪ್ಪಲು ಸಾಧ್ಯವಿಲ್ಲ – ಸುಧಾಕರ
ಇದೆಲ್ಲ ರಾಜಕೀಯದಲ್ಲಿ ಇದ್ದಿದ್ದೆ ಎಂದ ಡಿ.ಕೆ.ಶಿವಕುಮಾರ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button