Kannada NewsKarnataka NewsLatest

ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ; ತಹಸೀಲ್ದಾರ್ ಅಮಾನತು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವನಹಳ್ಳಿ ತಹಸೀಲ್ದಾರ್ ಶಿವರಾಜ್‌ ಅವರನ್ನು ಅಮಾನತುಗೊಳಿಸಲಾಗಿದೆ. 

ಲೋಕಾಯುಕ್ತರ ಶಿಫಾರಸ್ಸಿನಂತೆ ಶಿವರಾಜ್‌ ಅವರನ್ನು ಅಮಾನತುಗೊಳಿಸಿ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಶಿವರಾಜ್ ಅವರು ಆದಾಯಕ್ಕಿಂತಲೂ ಶೇ. 225ರಷ್ಟು ಅಧಿಕ ಆಸ್ತಿ ಹೊಂದಿರುವುದು ಲೋಕಾಯುಕ್ತ ಪ್ರಾಥಮಿಕ ತನಿಖೆಯಲ್ಲಿ ಧೃಡಪಟ್ಟಿರುವ ಹಿನ್ನೆಲೆಯಲ್ಲಿ ಈ ಅಮಾನತು ಆದೇಶ ಹೊರಡಿಸಲಾಗಿದೆ.

Home add -Advt

ಲೋಕಾಯುಕ್ತ ಪೊಲೀಸರು ಕಳೆದ ಆ.17ರಂದು ಶಿವರಾಜ್‌ ಹಾಗೂ ಅವರ ಸ್ನೇಹಿತರು, ಸಂಬಂಧಿಗಳಿಗೆ ಸೇರಿದ ನಿವಾಸ ಹಾಗೂ ಕಚೇರಿಗಳು ಸೇರಿದಂತೆ 12ಕ್ಕೂ ಹೆಚ್ಚು ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆಯಡಿ ಆ. 30ರಂದು ಲೋಕಾಯುಕ್ತದಲ್ಲಿ ದೂರು ದಾಖಲಿಸಿಕೊಳ್ಳಲಾಗಿತ್ತು. 

ಶಿವರಾಜ್ ಅವರನ್ನು ಸರಕಾರ ಜುಲೈ 28ರಂದು ದೇವನಹಳ್ಳಿ ತಹಸೀಲ್ದಾರ್ ಹುದ್ದೆಯಿಂದ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಶಿವರಾಜ್ ಅವರು ಕರ್ನಾಟಕ ಆಡಳಿತ ನ್ಯಾಯಮಂಡಳಿ (KAT)ಯಿಂದ ತಡೆಯಾಜ್ಞೆ ತಂದಿದ್ದರು.

ದೇವರಾಜ ಅವರು ತಹಸೀಲ್ದಾರ್‌ ಹುದ್ದೆಯಲ್ಲಿ ಮುಂದುವರಿಯುವುದರಿಂದ ಪ್ರಕರಣದ ಮೇಲೆ ಪರಿಣಾಮವಾಗುವ, ಸಾಕ್ಷ್ಯಾಧಾರ ನಾಶದ ಸಂಭವಗಳು ಇರುವುದರಿಂದ ಅವರನ್ನು ಅಮಾನತುಗೊಳಿಸಲು ಲೋಕಾಯುಕ್ತರು ಸರಕಾರಕ್ಕೆ ಕೋರಿದ್ದರು.

ಶಿವರಾಜ್ ಅವರು ನಿವೃತ್ತಿ ಅಂಚಿನಲ್ಲಿದ್ದು, ಅದಕ್ಕೂ ಮುನ್ನವೇ ಇದೀಗ ಸೇವೆಯಿಂದ ಅಮಾನತುಗೊಂಡಿದ್ದಾರೆ.

Related Articles

Back to top button