
ಪ್ರಗತಿವಾಹಿನಿ ಸುದ್ದಿ: ತಂದೆಯೊಬ್ಬ ತನ್ನ 17 ವರ್ಷದ ಮಗಳನ್ನು ಉಸಿರುಗಟ್ಟಿಸಿ ಕೊಂದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ನಿಂಬೆಮರದಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ತಾಯಿಯ ಕಡೆಯ ನೆಂಟರ ಹುಡುಗನನ್ನು ಯುವತಿ ಪ್ರೀತಿಸುತ್ತಿದ್ದದ್ದು, ಇದು ತಿಮ್ಮರಾಯಪ್ಪನ (48) ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ಪ್ರೇಮ ವಿಚಾರವಾಗಿ ಮನೆಯಲ್ಲಿ ಹಲವು ಬಾರಿ ದೊಡ್ಡ ಜಗಳಗಳಾಗಿದ್ದವು. ಕಳೆದ ಏಪ್ರಿಲ್ 16 ರಂದೇ ಮಗಳನ್ನು ಹತ್ಯೆಗೈದಿದ್ದ ಈತ, ಸಾಕ್ಷಿ ನಾಶಕ್ಕಾಗಿ ಜಮೀನಿನ ಬಳಿಯ ಸರ್ಕಾರಿ ಹಳ್ಳದಲ್ಲಿ ಶವವನ್ನು ಹೂತುಹಾಕಿದ್ದನು. ಇತ್ತ ಮಗಳು ನಾಪತ್ತೆಯಾಗಿದ್ದಾಳೆಂದು ತಾಯಿ ಕಳ್ಳಂಬೆಳ್ಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಅನುಮಾನದ ಮೇರೆಗೆ ತಂದೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಭೀಕರ ಕೊಲೆ ನಡೆದು ತಿಂಗಳೇ ಕಳೆದಿರುವುದು ಪತ್ತೆಯಾಗಿದೆ. ಸದ್ಯ ಆರೋಪಿಯನ್ನು ಸೆರೆಹಿಡಿಯಲಾಗಿದ್ದು, ಶಿರಾ ತಹಸೀಲ್ದಾರ್ ಸಮ್ಮುಖದಲ್ಲಿ ಹೂತಿದ್ದ ದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.



