*ಪ್ರಧಾನಿ ಮೋದಿ ಒಬ್ಬ ನಟ ಭಯಂಕರ: ದೇವೇಗೌಡರು, ಸುಮಲತಾಗೆ ಟಿಕೆಟ್ ನೀಡದೇ ಬಿಜೆಪಿ ನಾಯಕರು ಅನ್ಯಾಯ ಮಾಡಿದ್ದಾರೆ: ಕಾಂಗ್ರೆಸ್ ಶಾಸಕ ಗಣಿಗ ರವಿ ಕಿಡಿ*

ಪ್ರಗತಿವಾಹಿನಿ ಸುದ್ದಿ: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರಿಗೆ ರಾಜ್ಯಸಭಾ ಚುನಾವಣೆಗೆ ಎನ್ ಡಿಎ ಟಿಕೆಟ್ ನೀಡದಿರುವುದು, ಮಾಜಿ ಸಂಸದೆ ಸುಮಲತಾ ಅಂಬರೀಷ್ ಅವರನ್ನೂ ಕಡೆಗಣಿಸಿರುವ ವಿಚಾರವಾಗಿ ಕಾಂಗ್ರೆಸ್ ಶಾಸಕ ಗಣಿಗ ರವಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರವಿಕುಮಾರ್, ಬಿಜೆಪಿಯವರು ಒಕ್ಕಲಿಗರಿಗೆ ನಿರಂತರ ಅನ್ಯಾಯ ಮಾಡುತ್ತಿದ್ದಾರೆ. ಇನ್ನೂ ಬೇಸರದ ಸಂಗತಿ ಎಂದರೆ ಬಿಜೆಪಿಯವರು ದೇವೇಗೌಡರನ್ನು ಹಾಗೂ ಸುಮಲತಾ ಅವರನ್ನು ಈ ರೀತಿ ನಡೆಸಿಕೊಳ್ಳಬಾರದಿತ್ತು. ದೇವೇಗೌಡರಿಗೆ ಟಿಕೆಟ್ ಕೊಡುತ್ತಾರೆಂಬ ನಿರೀಕ್ಷೆ ಇತ್ತು. ದೇವೇಗೌಡರು ಹಿರಿಯರು, ಸಂಭಾವಿತರು, 70 ವರ್ಷಗಳ ಕಾಲ ರಾಜಕಾರಣ ಮಾಡಿದವರು, ಮಾಜಿ ಪ್ರಧಾನಿ, ಅಂತಹ ದೇವೆಗೌಡರಿಗೆ ರಾಜ್ಯಸಭೆ ಟಿಕೆಟ್ ನ್ನು ಬಿಜೆಪಿಯವರು ತಪ್ಪಿಸುತ್ತಾರೆ ಎಂದರೆ ಅವರಿಗೆ ದೇವರು ಒಳ್ಳೆಯದು ಮಾಡುತ್ತಾನಾ? ಎಂದು ಪ್ರಶ್ನಿಸಿದರು.
ಪ್ರಧಾನಿ ಮೋದಿಯವರು ಹೋದಲೆಲ್ಲ ದೇವೇಗೌಡರಿಗೆ ತಾವು ವಿಶೇಷ ಗೌರವ ನೀಡುತ್ತೇವೆ ಎಂಬ ರೀತಿ ಬಿಂಬಿಸಿಕೊಳ್ಳುತ್ತಾರೆ. ಅದು ಕೇವಲ ಫೋಟೊ, ವಿಡಿಯೋಗಾಗಿ ಮಾಡುವ ಡ್ರಾಮ. ಜೆಡಿಎಸ್ ಗ್ರೌಂಡ್ ಕಿತ್ತುಕೊಳ್ಳಲು ಬಿಜೆಪಿ ನಾಯಕರು ಇಂತದ್ದೊಂದು ತಂತ್ರ ಹೆಣೆದಿದ್ದಾರೆ. ಪ್ರಧಾನಿ ಮೋದಿ ಒಬ್ಬ ನಟ ಭಯಂಕರ. ಜೆಡಿಎಸ್ ನವರು ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ರಾಅಜಕೀಯವಾಗಿ ಸರ್ವನಾಶವಾಗುತ್ತದೆ ಎಂದು ಹೇಳಿದರು.
ಇನ್ನು ಮಂಡ್ಯವನ್ನು ಬಿಜೆಪಿಯವರು ಮುಗಿಸಿಯೇ ಬಿಟ್ಟಿದ್ದಾರೆ. ಅಂಬರೀಷ್ ಕುಟುಂಬ ಎಂದರೇನು? ಸುಮಲತಾ ಅವರು ಬಿಜೆಪಿ ಸೇರಿದರು. ಬಿಜೆಪಿಗಾಗಿ ತ್ಯಾಗ ಮಾಡಿದ್ದಾರೆ. ಆದರೂ ಅವರಿಗೆ ಬಿಜೆಪಿಯವರು ಒಂದು ಟಿಕೆಟ್ ಕೊಡಲ್ಲ, ಗೌರವಯುತವಾಗಿ ನಡೆಸಿಕೊಳ್ಳುತ್ತಿಲ್ಲ. ಅಂಬರೀಶ್ ಅವರು ಮಂಡ್ಯದ ಆಸ್ತಿ. ಅವರ ಪತ್ನಿ ಸುಮಲತಾ ಬಿಜೆಪಿಗೆ ಹೋಗಿದ್ದಾರೆ ಅಂದ ಮೇಲೆ ಅವರನ್ನು ಎಷ್ಟು ಗೌರವಯುತವಾಗಿ ನಡೆಸಿಕೊಳ್ಳಬೇಕಿತ್ತು. ಅಂಬರೀಷ್ ಅಣ್ಣನ ಕುಟುಂಬವನ್ನು ಈ ರೀತಿ ನಡು ನೀರಿನಲ್ಲಿ ಬಿಜೆಪಿಯವರು ಕೈಬಿಟ್ಟಿದ್ದಾರೆ ಎಂದು ಬೇಸರವಾಯಿತು ಎಂದಿದ್ದಾರೆ.



