
ಪ್ರಗತಿವಾಹಿನಿ ಸುದ್ದಿ: ಗ್ರೈಂಡರ್ನಿಂದ ವಿದ್ಯುತ್ ಪ್ರವಹಿಸಿ ನಾಲ್ಕು ವರ್ಷದ ಬಾಲಕಿ ಸಾವನ್ನಪ್ಪಿರುವ ಘೋರ ಘಟನೆ ನಡೆದಿದೆ.
ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಕಲಿಗೌಡನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಪುಟ್ಟಮ್ಮ ಹಾಗೂ ಆನಂದ್ ದಂಪತಿಯ ಪುತ್ರಿ ಅದ್ವಿತಾ ಮೃತ ದುರ್ದೈವಿ. ಮನೆಯಲ್ಲಿ ಆಟವಾಡುತ್ತಿದ್ದ ಅದ್ವಿತಾ ನೀರು ಕುಡಿಯಲು ಅಡುಗೆ ಮನೆಗೆ ತೆರಳಿದ್ದಳು. ಈ ವೇಳೆ ಅಡುಗೆ ಮನೆಯಲ್ಲಿ ಆನ್ ಆಗಿದ್ದ ಗ್ರೈಂಡರ್ ಅನ್ನು ಮುಟ್ಟಿದ್ದಾಳೆ. ಗ್ರೈಂಡರ್ ಅನ್ನು ಮುಟ್ಟಿದ ತಕ್ಷಣವೇ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಅದ್ವಿತಾಳನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ವೈದ್ಯರು ಈಗಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಮಗಳನ್ನು ಕಳೆದುಕೊಂಡಿರುವ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.




