ದುಡಿಯುವ ಕೈಗಳಿಗೆ ಉದ್ಯೋಗ ನೀಡುವುದು ಬಹುದೊಡ್ಡ ಸಮಾಜ ಸೇವೆ: ನಿರ್ಮಲಾನಂದ ಶ್ರೀ

ಪ್ರಗತಿವಾಹಿನಿ ಸುದ್ದಿ, ಬಾಗಲಕೋಟ – ನಿರಾಣಿ ಉದ್ಯಮ ಸಮೂಹ ಸಂಸ್ಥೆ ಸ್ಥಗಿತಗೊಂಡ ಕೈಗಾರಿಕೆಗಳಿಗೆ ಪುನಶ್ಚೇತನ ನೀಡಿ ಪ್ರಾರಂಭಿಸುತ್ತಿರುವುದು ಅಭಿಮಾನದ ಸಂಗತಿ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಹೇಳಿದರು.
ಅವರು ಬಾಗಲಕೋಟೆಯ ತೇಜಸ್ ಅಂತರಾಷ್ಟ್ರೀಯ ವಸತಿ ಶಾಲೆಗೆ ಭೇಟಿ ನೀಡಿ ಅಲ್ಲಿ ನಡೆದ ಪಾಲಕರ ಸಭೆಯಲ್ಲಿ ಮಾತನಾಡಿ, ಮಂಡ್ಯ ಜಿಲ್ಲೆಯ ಪಾಂಡವಪುರದ ಸಕ್ಕರೆ ಕಾರ್ಖಾನೆಯನ್ನು ಪುನಃ ಪ್ರಾರಂಭಿಸಿರುವುದು ನಮಗೆ ಸಂತಸ ಉಂಟು ಮಾಡಿದೆ. ಅಲ್ಲಿ ನಮ್ಮ ಶಾಖಾ ಮಠವಿದೆ. ಸಾವಿರಾರು ಭಕ್ತರಿದ್ದಾರೆ. ಅವರೆಲ್ಲಾ ಈಗ ಉತ್ಸಾಹದಿಂದ ಕಬ್ಬು ಪೂರೈಸುತ್ತಿದ್ದಾರೆ. ರೈತರ ಮುಖದಲ್ಲಿ ಸಂತಸ ಮೂಡಿದೆ ಎಂದರು.
ಕೈಗಾರಿಕೆಗಳೊಂದಿಗೆ ಶಾಲಾ-ಕಾಲೇಜು ಸ್ಥಾಪನೆ, ಸಮಾಜ ಸೇವೆ ಮುಂತಾದ ಸಾಮಾಜಿಕ ಕೆಲಸಗಳಲ್ಲಿ ನಿರಾಣಿ ಪರಿವಾರ ಸಮರ್ಪಣಾ ಮನೊಭಾವದಿಂದ ತೊಡಗಿಕೊಂಡಿದೆ. ದುಡಿಯುವ ಕೈಗಳಿಗೆ ಉದ್ಯೋಗ ನೀಡುವುದು ಹಾಗೂ ಮಕ್ಕಳಿಗೆ ಶಿಕ್ಷಣ ನೀಡುವುದು ಇವೆರಡು ಜಗತ್ತಿನ ಅತಿದೊಡ್ಡ ಸಮಾಜ ಸೇವೆಗಳಾಗಿವೆ ಎಂದು ಶ್ರೀಗಳು ಹೇಳಿದರು.
ಶ್ರೀಗಳನ್ನು ನಿರಾಣಿ ಉದ್ಯಮ ಸಮೂಹದ ಪರವಾಗಿ ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಹಾಗೂ ಶೋಭಾ ನಿರಾಣಿ ಸತ್ಕರಿಸಿದರು. ಡಾ. ದ್ರಾಕ್ಷಾಯಣಿ ನಿರಾಣಿ, ಭರತ ಈಟ್ಟಿ, ಪವನ ನಿರಾಣಿ ಉಪಸ್ಥಿತರಿದ್ದರು.




