Karnataka NewsLatestPolitics

*ಚುನಾವಣೆಗೆ ಮೊದಲು ‘ಗೃಹಲಕ್ಷ್ಮಿ’, ಚುನಾವಣೆ ಬಳಿಕ ‘ಅನರ್ಹ ಲಕ್ಷ್ಮಿ’: ಇದೇ ಕಾಂಗ್ರೆಸ್‌ನ ಗ್ಯಾರಂಟಿಗಳ ನಿಜವಾದ ಮುಖ: ಆರ್.ಅಶೋಕ್ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ: ಗೃಹಲಕ್ಷ್ಮೀ ಯೋಜನೆಯಲ್ಲಿ 17 ಜಿಲ್ಲೆಗಳಲ್ಲಿ ಅನರ್ಹ 1.1ಲಕ್ಷ ಜನರನ್ನು ಗೃಹಲಲಕ್ಷ್ಮೀ ಯೋಜನೆಯಿಂದ ಹೊರಗಿಡಲಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್.ಅಶೊಕ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Home add -Advt

ಚುನಾವಣೆಗೆ ಮೊದಲು ‘ಗೃಹಲಕ್ಷ್ಮಿ’, ಚುನಾವಣೆ ಬಳಿಕ ‘ಅನರ್ಹ ಲಕ್ಷ್ಮಿ’ – ಇದೇ ಕಾಂಗ್ರೆಸ್‌ನ ಗ್ಯಾರಂಟಿಗಳ ನಿಜವಾದ ಮುಖ! ಎಂದು ಆರ್.ಅಶೋಕ್ ಟೀಕಿಸಿದ್ದಾರೆ.

ಪ್ರತಿ ಮನೆಯ ಯಜಮಾನಿಗೆ ₹2,000 ಎಂದು ಮತ ಪಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್, ಈಗ 17 ಜಿಲ್ಲೆಗಳಲ್ಲಿ 1.1 ಲಕ್ಷಕ್ಕೂ ಹೆಚ್ಚು ಮಹಿಳೆಯರನ್ನು ಗೃಹಲಕ್ಷ್ಮಿ ಯೋಜನೆಯಿಂದ ಹೊರದಬ್ಬಲು ಹೊರಟಿದೆ ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರ.

ಚುನಾವಣೆಗೆ ಮೊದಲು “ಕಂಡೀಷನ್ ಅಪ್ಲೈ ಇಲ್ಲ” ಎಂಬಂತೆ ಪ್ರಚಾರ ಮಾಡಿದ ಕಾಂಗ್ರೆಸ್, ಈಗ ಒಂದೊಂದೇ ನೆಪ ಹುಡುಕಿ ತಾಯಂದಿರ ಹೆಸರನ್ನು ಪಟ್ಟಿಯಿಂದ ಕಿತ್ತೆಸೆಯುತ್ತಿದೆ. 17 ಜಿಲ್ಲೆಗಳಲ್ಲಿ 1,12,092 ಮಹಿಳೆಯರನ್ನು ಅನರ್ಹರೆಂದು ಗುರುತಿಸಿರುವುದು ಕಾಂಗ್ರೆಸ್‌ನ ಅಸಲಿ ಮುಖವನ್ನು ಬಯಲು ಮಾಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದಕ್ಕಿಂತ ದೊಡ್ಡ ದುರಂತ ಎಂದರೆ, ಈ ಬಗ್ಗೆ ಪ್ರಶ್ನಿಸಿದಾಗ ಮುಖ್ಯಮಂತ್ರಿಗಳ ಉತ್ತರ – “ನನಗೆ ಗೊತ್ತಿಲ್ಲ.” ರಾಜ್ಯದ 1.1 ಲಕ್ಷ ಮಹಿಳೆಯರ ಬದುಕಿನ ಪ್ರಶ್ನೆ ಮುಖ್ಯಮಂತ್ರಿಗಳಿಗೆ ಗೊತ್ತಿಲ್ಲ ಎಂದರೆ, ರಾಜ್ಯವನ್ನು ನಡೆಸುತ್ತಿರುವವರು ಯಾರು? ಎಂದು ಪ್ರಶ್ನಿಸಿದ್ದಾರೆ.

  • ಚುನಾವಣೆಗೂ ಮೊದಲು ಪ್ರತಿ ಮನೆಯ ಯಜಮಾನಿಗೂ ₹2,000 ಎಂದು ಭರವಸೆ.
  • ಚುನಾವಣೆ ಬಳಿಕ ಅನರ್ಹರ ಪಟ್ಟಿ.
  • ಈಗ ಬಯೋಮೆಟ್ರಿಕ್ ಹೆಸರಲ್ಲಿ ಹೊಸ ಕಿರುಕುಳ.

ಇದೇನಾ ಕಾಂಗ್ರೆಸ್‌ನ ಮಹಿಳಾ ಸಬಲೀಕರಣ? ವೋಟ್ ಬ್ಯಾಂಕ್‌ಗಾಗಿ ಮಹಿಳೆಯರನ್ನು ಬಳಸಿಕೊಂಡು, ಅಧಿಕಾರ ಸಿಕ್ಕ ಬಳಿಕ ಅವರ ಹಕ್ಕುಗಳನ್ನು ಕಸಿದುಕೊಳ್ಳುವ ಕಾಂಗ್ರೆಸ್‌ನ ಈ ದ್ವಂದ್ವ ನೀತಿಯನ್ನು ಕರ್ನಾಟಕದ ಜನತೆ ಗಮನಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

“ಗ್ಯಾರಂಟಿ” ಎಂದು ಮತ ಪಡೆದು, “ಅನರ್ಹ” ಎಂದು ಹಕ್ಕು ಕಸಿಯುವ ಕಾಂಗ್ರೆಸ್ ಸರ್ಕಾರ ರಾಜ್ಯದ ತಾಯಂದಿರಿಗೆ ಉತ್ತರ ಕೊಡಲೇಬೇಕು. ತಕ್ಷಣವೇ ಈ ಅನ್ಯಾಯವನ್ನು ನಿಲ್ಲಿಸಿ, ಅರ್ಹ ಫಲಾನುಭವಿಗಳಿಗೆ ಯಾವುದೇ ಗೊಂದಲವಿಲ್ಲದೆ ಯೋಜನೆಯ ಹಣ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ತಾಯಂದಿರ ಶಾಪಕ್ಕೆ ಈ ಸರ್ಕಾರ ಸುಟ್ಟು ಭಸ್ಮವಾಗುವುದು ಗ್ಯಾರಂಟಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


Related Articles

Back to top button