
ಪ್ರಗತಿವಾಹಿನಿ ಸುದ್ದಿ: ತೆಂಗಿನಕಾಯಿ ತಲೆ ಮೇಲೆ ಬಿದ್ದು, ಒಂದೂವರೆ ವರ್ಷದ ಮಗು ಸಾವನ್ನಪ್ಪಿರುವ ದಾರುಣ ಘಟನೆ ಉಡುಪಿಯಲ್ಲಿ ನಡೆದಿದೆ.
ಒಂದೂವರೆ ವರ್ಷದ ದಕ್ಷ ಮೃತ ಮಗು. ಬ್ರಹ್ಮಾವರ ತಾಲೂಕು ಚಾಂತಾರು ಹೆರಂಜಾಲು ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಪ್ರಶಾಂತ್ ಮತ್ತು ಸುಚಿತ್ರಾ ದಂಪತಿ ಎರಡನೇ ಪುತ್ರ ದಕ್ಷ. ಮಗುವನ್ನು ಮಡಿಲಲ್ಲಿ ಮಲಗಿಸಿಕೊಂಡು ತಾಯಿ ತೆಂಗಿನಮರದ ಕೆಳಗೆ ಕುಳಿತಿದ್ದರು. ಈ ವೇಳೆ, ಅಚಾನಕ್ ಆಗಿ ತೆಂಗಿನಕಾಯಿ ಮರದಿಂದ ಬಿದ್ದಿದೆ. ಮಗುವಿನತಲೆ ಮೇಲೆ ತೆಂಗಿನ ಕಾಯಿ ಬಿದ್ದು ಮಗು ತೀವ್ರವಾಗಿ ಗಾಯಗೊಂಡಿತ್ತು.
ಸ್ಥಳೀಯರ ನೆರವಿನಿಂದ ಮಗುವನ್ನು ಕೂಡಲೇ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ,ಚಿಕಿತ್ಸೆ ಫಲಿಸದೇ ಮಗು ಮೃತಪಟ್ಟಿದೆ. ಕಂದಮ್ಮನ ಅಕಾಲಿಕ ಮರಣಕ್ಕೆ ಇಡೀ ಗ್ರಾಮದ ಜನತೆ ಕಂಬನಿ ಮಿಡಿದಿದ್ದಾರೆ.



