ಅನುಶ್ರೀ ಪ್ರಕರಣದ ಹಿಂದಿನ ಮಾಜಿ ಸಿಎಂ ಯಾರೆಂದು ಬಹಿರಂಗಪಡಿಸಲಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ನಿರೂಪಕಿ ಅನುಶ್ರೀ ರಕ್ಷಣೆಗೆ ಮಾಜಿ ಸಿಎಂ ಒಬ್ಬರು ನಿಂತಿದ್ದಾರೆ ಎಂದು ಸುದ್ದಿಗಳು ಪ್ರಸಾರವಾಗುತ್ತಿದ್ದು, ಆ ಮಾಜಿ ಸಿಎಂ ಹೆಸರು ಬಹಿರಂಗಪಡಿಸಲಿ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ವಿಚಾರಣೆಗೆ ನೋಟಿಸ್ ನೀಡುತ್ತಿದ್ದಂತೆ ಅನುಶ್ರೀ ಮಾಜಿ ಸಿಎಂ ಒಬ್ಬರಿಗೆ ಕರೆ ಮಾಡಿದ್ದಾರೆ. ಆಕೆಯನ್ನು ಪ್ರಕರಣದಿಂದ ರಕ್ಷಿಸಲಾಗುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ರಾಜ್ಯದಲ್ಲಿ ನಾನೂ ಸೇರಿದಂತೆ 6 ಮಾಜಿ ಸಿಎಂ ಗಳಿದ್ದಾರೆ. ಇವರಲ್ಲಿ ಯಾವ ಮಾಜಿ ಸಿಎಂ ಎಂಬುದನ್ನು ಬಹಿರಂಗಪಡಿಸಲಿ ಎಂದಿದ್ದಾರೆ.
ಡ್ರಗ್ಸ್ ಪ್ರಕರಣದಲ್ಲಿ ಯಾವ ಮಾಜಿ ಸಿಎಂ ಒತ್ತಡ ಹಾಕುತ್ತಿದ್ದಾರೆ ಎಂಬ ಸತ್ಯಾಸತ್ಯತೆ ರಾಜ್ಯದ ಜನತೆಗೆ ಗೊತ್ತಾಗಲಿ. ಅನುಶ್ರೀ ಕಾಲ್ ಲಿಸ್ಟ್ ನಲ್ಲಿ ಮಾಜಿ ಸಿಎಂ ಒಬ್ಬರಿಗೆ ಕರೆ ಹೋಗಿದೆ ಎಂದು ಹೇಳಿದ ಅಧಿಕಾರಿಯಾದರು ಯಾರು? ಇದೆಲ್ಲವೂ ಮಾಧ್ಯಮಗಳೇ ಪ್ರಸಾರ ಮಾಡುತ್ತಿರುವ ಸುಳ್ಳು ಸುದ್ದಿಯೇ ಎಂಬುದು ಕೂಡ ತನಿಖೆಯಾಗಲಿ. ಒಂದು ವೇಳೆ ಮಾಧ್ಯಮದವರೇ ಹರಡುತ್ತಿರುವ ಕಪೋಲಕಲ್ಪಿತ ಸುದ್ದಿಯಾದರೆ ಅವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.




