Politics

*ಮಾಹಾ ನಾಯಕ ಆಯ್ತು, ಈಗ ತಿಮಿಂಗಿಲದ ಸರದಿ: ಪೆನ್ ಡ್ರೈವ್ ಹಿಂದೆ ದೊಡ್ಡ ತಿಮಿಂಗಿಲವಿದೆ ಎಂದ ಹೆಚ್.ಡಿ.ಕೆ*

ಪ್ರಗತಿವಾಹಿನಿ ಸುದ್ದಿ: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಇದರ ಬೆನ್ನಲ್ಲೇ ಸಂತ್ರಸ್ತ ಮಹಿಳೆ ಕಿಡ್ನ್ಯಾಪ್ ಕೇಸ್ ನಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣಗೆ ಜಾಮೀನು ಸಿಕ್ಕಿದೆ. ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ, ರೇವಣ್ಣಗೆ ಜಾಮೀನು ಸಿಕ್ಕಿದೆ ಎಂದು ಕಾರ್ಯಕರ್ತರು ಸಂಭ್ರಮಿಸಬೇಡಿ, ಇದು ಸಂಭ್ರಮಿಸುವ ಸಮಯವಲ್ಲ. ರಾಜ್ಯದಲ್ಲಿ ಹೀನಾಯ ಘಟನೆ ನಡೆದಿದೆ. ಇದು ರಾಜ್ಯದ ಜನತೆ ತಲೆತಗ್ಗಿಸುವ ಘಟನೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಪೆನ್ ಡ್ರೈವ್ ಬಿಡುಗಡೆ ಆರೋಪಿಗಳನ್ನು ಎಸ್ ಐಟಿ ಈವರೆಗೆ ಬಂಧಿಸಿಲ್ಲ. ತನಿಖೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ? ಎಂದು ಪ್ರಶ್ನಿಸಿದ್ದಾರೆ.

ಪೆನ್ ಡ್ರೈವ್ ಹಿಂದೆ ದೊಡ್ಡ ತಿಮಿಂಗಿಲವಿದೆ. ಅದು ಸರ್ಕಾರದಲ್ಲಿಯೇ ಇದೆ. ಆ ತಿಮಿಂಗಿಲವನ್ನು ಹಿಡಿದರೆ ಎಲ್ಲವೂ ಗೊತ್ತಾಗಲಿದೆ. ಆ ದೊಡ್ಡ ತಿಮಿಂಗಿಲದ ಬಗ್ಗೆ ರಾಜ್ಯದ ಜನರಿಗೂ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಆ ತಿಮಿಂಗಿಲದ ಆಡಿಯೋ ಬಿಟ್ಟದ್ದಕ್ಕೇ ಕೇಸ್ ಹಾಕಿದ್ದಾರೆ. ಆ ಆಡಿಯೋ ಬಿಟ್ಟವ ಮೇಲೆಯೇ ಕೇಸ್ ಹಾಕಿ ಒಳಗೆ ಕೂರಿಸಿದ್ದಾರೆ. ಅವರು ದೆಹಲಿಗೆ ತೆರಳಿ ದಾಖಲೆ ಬಿಡುಗಡೆ ಮಾಡುತ್ತಿದ್ದರು. ಹಾಗಾಗಿ ಅವರನ್ನು ಹಿಡಿಯಲಾಗಿದೆ ಎಂದಿದ್ದಾರೆ. ಯಾವ ದಾಖಲೆ ಬಿಡುಗಡೆಗೆ ಹೊರಟಿದ್ದರು? ಅವರನ್ನು ಹಿಡಿದು ಇವರು ಯಾವ ದಾಖಲೆ ವಶಪಡಿಸಿಕೊಳ್ಳಲು ಹೊರಟಿದ್ದಾರೆ? ಪೆನ್ ಡ್ರೈವ್ ಪ್ರಕರಣದಲ್ಲಿ ಎಸ್ಐಟಿ ತನಿಖೆ ಯಾವ ದಿಕ್ಕಿನಲ್ಲಿ ಹೋಗುತ್ತಿದೆ ಎಂಬುದನ್ನು ನೋಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೋರಾಟಕ್ಕೆ ಇನ್ನೂ ಸಾಕಷ್ಟು ಸಮಯಗಳಿವೆ. ನನ್ನ ಬಳಿಯು ಎಲ್ಲಾ ದಾಖಲೆಗಳಿವೆ. ಸಮಯ ಬಂದಾಗ ಹೋರಾಟ ಮಾಡುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

Related Articles

Back to top button