Latest

ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಗೆ ಸೇರ್ಪಡೆ

ಪ್ರಗತಿವಾಹಿನಿ ಸುದ್ದಿ; ಹಾನಗಲ್: ಹಾನಗಲ್ ಮತಕ್ಷೇತ್ರದ ತಿಳವಳ್ಳಿ ಗ್ರಾಮದಲ್ಲಿ ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿಯವರ ಸಮ್ಮುಖದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಗೆ ಸೇರ್ಪಡೆಯಾದರು.

ಸತೀಶ ಜಾರಕಿಹೊಳಿ ಅವರು ಕಾರ್ಯಕರ್ತರಿಗೆ ಪಕ್ಷದ ಶಾಲು ಹೊದಿಸಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಕಾರ್ಯಕರ್ತರು ಸತೀಶ ಅವರನ್ನು ಸನ್ಮಾನಿಸಿದರು.

ಹಾನಗಲ್ ನಲ್ಲಿ ಸೆಕೆಂಡ್ ಡೋಸ್ ಲಸಿಕೆ ಹಾಕೋಣ: 
ಮಸ್ಕಿಯಲ್ಲಿ ಈಗಾಗಲೇ ಫಸ್ಟ್ ಡೋಸ್ ಲಸಿಕೆ ಆಗಿದೆ. ಈಗ ಹಾನಗಲ್ ನಲ್ಲಿ ಸೆಕೆಂಡ್ ಡೋಸ್ ಲಸಿಕೆ ಯಶಸ್ವಿಯಾಗಿ ಹಾಕಬೇಕಿದೆ. ಎರಡು ಡೋಸ್ ಗಳನ್ನು ಪಡೆದರೇ ಕೊರೊನಾ ಬರುವುದಿಲ್ಲ ಎಂದು ಹೇಳುತ್ತಾರೆ. ಅದೇ ರೀತಿ ಈ ಉಪಚುನಾವಣೆಯನ್ನೂ  ಗೆಲ್ಲುವ ಮೂಲಕ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರದಂತೆ ತಡೆಯೋಣ ಎಂದು ಸತೀಶ ಜಾರಕಿಹೊಳಿ ಕರೆ ನೀಡಿದರು.

ಕಾಂಗ್ರೆಸ್ ಗೆಲುವು ಖಚಿತ:
ನಂತರ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಸತೀಶ, ಹಾನಗಲ್ ಮತಕ್ಷೇತ್ರದಲ್ಲಿ ಜನರು ಕಾಂಗ್ರೆಸ್ ಪಕ್ಷದ ಮೇಲೆ ಒಲವು ಹೊಂದಿದ್ದಾರೆ. ಹೀಗಾಗಿ, ಉಪಚುನಾವಣೆಯಲ್ಲಿ ಪಕ್ಷದ ಗೆಲುವು ಖಚಿತ ಎಂದು ಹೇಳಿದರು.

ಹಿಂದಿನ ಶಾಸಕರು ಕ್ಷೇತ್ರದ ಜನರ ಕೈಗೆ ಸಿಗುತ್ತಿರಲಿಲ್ಲ. ಆದರೆ, ಹಿಂದಿನ ಚುನಾವಣೆಯಲ್ಲಿ ಪರಾಜಿತರಾದರೂ ಕೂಡ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಅವರು ಕ್ಷೇತ್ರದಲ್ಲೇ ಇದ್ದಾರೆ.‌ ಜನರೊಂದಿಗೆ ಆತ್ಮೀಯತೆ ಇಟ್ಟುಕೊಂಡಿದ್ದಾರೆ. ಹೀಗಾಗಿ, ಜನರು ಮಾನೆ ಅವರಿಗೆ ಆಶೀರ್ವಾದ ಮಾಡಲಿದ್ದಾರೆ ಎಂದರು.

ಸೋಲು-ಗೆಲುವು ಸಹಜ.‌ಆದರೆ, ಜನಪ್ರತಿನಿಧಿಗಳಾದವರಿಗೆ ಸೇವಾ ಮನೋಭಾವ ಇರಬೇಕು. ಸೇವಾ‌ ಮನೋಭಾವ ಇದ್ದರೆ ಮಾತ್ರ ರಾಜಕಾರಣದಲ್ಲಿ ಗಟ್ಟಿಯಾಗಿ ಉಳಿಯಲು ಸಾಧ್ಯವಾಗುತ್ತದೆ. ಶ್ರೀನಿವಾಸ ಮಾನೆ ಅವರಿಗೆ ಸೇವಾ ಮನೋಭಾವವಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹರ್ಡೀಕರ್ ಪ್ರತಿಮೆಗೆ ಮಾಲಾರ್ಪಣೆ:

ಇದೇ ಸಂದರ್ಭದಲ್ಲಿ ಗ್ರಾಮದಲ್ಲಿರುವ ರಾಷ್ಟ್ರೀಯ ಸೇವಾದಳ ಸಂಸ್ಥಾಪಕ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಡಾ‌.ನಾ.ಸು. ಹರ್ಡೀಕರ್ ಪ್ರತಿಮೆಗೆ ಸತೀಶ ಜಾರಕಿಹೊಳಿ ಅವರು ಮಾಲಾರ್ಪಣೆ ಮಾಡಿ, ನಮನ ಸಲ್ಲಿಸಿದರು.

ಡಾ.ನಾ.ಸು. ಹರ್ಡೀಕರ್ ಅವರು ಸೇವಾದಳವನ್ನು ಸ್ಥಾಪಿಸುವ ಮೂಲಕ ಯುವಕರಲ್ಲಿ ದೇಶಭಕ್ತಿಯನ್ನು ಜಾಗೃತಗೊಳಿಸಿದರು. ಸ್ವಾತಂತ್ರ್ಯ ಹೋರಾಟಕ್ಕೆ ಹರ್ಡೀಕರ್ ಅವರ ಕೊಡುಗೆ ಅಪಾರ ಎಂದು ಸತೀಶ ಜಾರಕಿಹೊಳಿ ಸ್ಮರಿಸಿದರು.

ವಿವಿಧೆಡೆ ಭರ್ಜರಿ ಪ್ರಚಾರ; ಸೆಲ್ಫೀಗೆ ಮುಗಿಬಿದ್ದ ಅಭಿಮಾನಿಗಳು:
ಅಕ್ಕಿಆಲೂರ ಹಾಗೂ ಆಡೂರ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಸತೀಶ ಜಾರಕಿಹೊಳಿಯವರು ಭರ್ಜರಿ ಪ್ರಚಾರ ನಡೆಸಿ, ಮತಯಾಚನೆ ಮಾಡಿದರು. ಜನರು ಸತೀಶ ಅವರಿಗೆ ಜೈಕಾರ ಕೂಗಿ, ಪ್ರಚಾರಕ್ಕೆ ಬೆಂಬಲ ವ್ಯಕ್ತಪಡಿಸಿದರು‌. ನೂರಾರು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಾಲ್ಗೊಂಡಿದ್ದರು.

ಪ್ರಚಾರದ ಸಂದರ್ಭದಲ್ಲಿ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಸತೀಶ ಅವರೊಂದಿಗೆ ಸೆಲ್ಫೀ ತೆಗೆಸಿಕೊಳ್ಳಲು ಮುಗಿಬಿದ್ದರು. ಮಾಜಿ ಸಚಿವ ರುದ್ರಪ್ಪ ಲಮಾಣಿ, ಕಾಂಗ್ರೆಸ್ ರಾಜ್ಯ ಎಸ್ಟಿ  ಘಟಕದ ಅಧ್ಯಕ್ಷ ಪಾಲಯ್ಯ, ಮುಖಂಡ ಪ್ರಕಾಶ ಹಾದಿಮನಿ, ಮುಖಂಡರಾದ ಮನೋಹರ ತಹಶೀಲ್ದಾರ್, ಪ್ರಕಾಶಗೌಡ ಪಾಟೀಲ್, ರುಕ್ಮಿಣಿ ಸಾಹುಕಾರ್, ಪುಟ್ಟಪ್ಪ ನೆರೆಗಲ್, ಆರ್.ಎಸ್. ಪಾಟೀಲ್, ಸುಭಾಸ ತಳವಾರ  ಸೇರಿ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಪ್ರಚಾರದಲ್ಲಿ ಭಾಗವಹಿಸಿದ್ದರು.
ದೇವಾಲಯಗಳ ಆಧ್ಯಾತ್ಮಿಕ ವಾತಾವರಣ ಇನ್ನಷ್ಟು ಸುಧಾರಣೆಗೆ ಕ್ರಮ: ಸಚಿವೆ ಶಶಿಕಲಾ ಜೊಲ್ಲೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button