*ಬೆಳಗಾವಿಯಲ್ಲಿ ಸ್ನೇಹಿತನ ಪತ್ನಿಯನ್ನೇ ಓಡಿಸಿಕೊಂಡು ಹೋದ ಯುವಕನ ಮನೆ ದ್ವಂಸ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ತಾಲೂಕಿನ ಭರಮ್ಯಾನಟ್ಟಿ ಗ್ರಾಮದಲ್ಲಿ ಹೇಯ ಕೃತ್ಯ ಬೆಳಕಿಗೆ ಬಂದಿದೆ. ವಿವಾಹಿತೆಯನ್ನು ಓಡಿಸಿಕೊಂಡು ಹೋದ ಯುವಕನ ಮನೆ ಸಂಪೂರ್ಣ ದ್ವಂಸ ಮಾಡಲಾಗಿದೆ.
ಬೆಳಗಾವಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿನಿಧಿಸುವ ಯಮಕನಮರಡಿ ಕ್ಷೇತ್ರದಲ್ಲಿಯೇ ಈ ಹೇಯ ಕೃತ್ಯ ನಡೆದಿದೆ.
ಮಗ ಮಾಡಿದ ತಪ್ಪಿಗೆ ವಿವಾಹಿತೆಯ ಪೋಷಕರು, ಪತಿಯ ಪೋಷಕರು ಸೇರಿ ಮಾರಕಾಸ್ತ್ರ ಸಮೇತ 50ಕ್ಕೂ ಅಧಿಕ ಜನರಿಂದ ಯುವಕನ ಮನೆ ಮೇಲೆ ದಾಳಿ ಮಾಡಲಾಗಿದೆ. ತಲವಾರ, ಜಂಬೆ, ಕುಡಗೋಲು, ಬಡಿಗೆ ಸಮೇತ ಆಗಮಿಸಿರುವ ದುಷ್ಕರ್ಮಿಗಳ ಅಟ್ಟಹಾಸ ಮೇರೆದು ಮನೆಯಲ್ಲಿದ್ದ ಯುವಕನ ಕುಟುಂಬಸ್ಥರ ಹತ್ಯೆಗೆ ಯತ್ನಿಸಿದ್ದಾರೆ.
ದಾಳಿ ವೇಳೆ ಮನೆಯ ಹಂಚುಗಳು ಪುಡಿ ಪುಡಿಯಾಗಿದೆ. ಟ್ರಜುರಿ, ಟಿವಿ ದ್ವಂಸ ಮಾಡಲಾಗಿದೆ. ಈ ದಾಳಿಯಲ್ಲಿ ಯಲ್ಲಪ್ಪನ ಪೋಷಕರು ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ದಾಳಿ ನಂತರ ಮನೆಯಲ್ಲಿದ್ದ ಚಿನ್ನಾಭರಣ, ಹಣ, 25 ಕುರಿ ಜೊತೆಗೆ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಬಸಪ್ಪ ನಾಯಕ, ಬಸಪ್ಪ ಪತ್ನಿ ನಾಗವ್ವ ಹಾಗೂ ಯಲ್ಲಪ್ಪ ನಾಯಕ ಆತ್ಮೀಯ ಸ್ನೇಹಿತರು. ಬೆಳಗಾವಿ ಉದ್ಯಮಭಾಗದಲ್ಲಿ ಒಂದೇ ಕಂಪನಿಯಲ್ಲಿ ಮೂವರು ಕೆಲಸ ಮಾಡುತ್ತಿದ್ದರು. ಈ ವೇಳೆ ಸಲುಗೆ ಬೆಳೆದು ನಾಗವ್ವ ಜೊತೆಗೆ ಯಲ್ಲಪ್ಪ ನಾಯಕ ಓಡಿ ಹೋಗಿದ್ದಾನೆ.
ಯಲ್ಲಪ್ಪನ ಮನೆಯ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದರಿಂದ ಅವರ ವಿರುದ್ಧ ಕಠಿಣ ಕ್ರಮಕ್ಕಾಗಿ ಸಂತ್ರಸ್ತ ಕುಟುಂಬ ಬೆಳಗಾವಿ ಪೊಲೀಸ್ ಕಮೀಷ್ನರ್ ಮೊರೆ ಹೋಗಿದೆ. ಆರೋಪಿಗಳ ಮೇಲೆ ದೂರು ದಾಖಲಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.



