
ಪ್ರಗತಿವಾಹಿನಿ ಸುದ್ದಿ: ರಾಜ್ಯ ಕಾಂಗ್ರೆಸ್ ಶಾಸಕರ ಅಸಮಾಧಾನ ಶಮನ ಮಾಡಲು ಆಗಮಿಸಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಒನ್ ಟು ಒನ್ ಶಾಸಕರ ಜೊತೆ ಸಭೆ ಮಾಡಿ ಅವರ ಬೇಡಿಕೆಗಳು ಅವರ ಮುಂದೆ ಇಡುತ್ತಿದ್ದಾರೆ.
ಇದೀಗ ಸಚಿವ ಸ್ಥಾನದ ಆಕಾಂಕ್ಷಿ ಆಗಿರುವ ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ, ಉಸ್ತುವಾರಿ ಸುರ್ಜೇವಾಲ ಅವರನ್ನು ಭೇಟಿಯಾಗಲಿದ್ದೇನೆ ಎಂದಿದ್ದು, ಭಾರಿ ಚರ್ಚೆಗೆ ಕಾರಣವಾಗಿದೆ.
ಹಾವೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ನಾಳೆ ಭೇಟೆಯಾಗುತ್ತಿದ್ದು ಚರ್ಚೆ ಮಾಡಿದ ನಂತರ ಎಲ್ಲಾ ತಿಳಿಯುತ್ತದೆ ಎಂದಿದ್ದಾರೆ. ಇನ್ನು ನನಗೆ ಸಚಿವ ಸ್ಥಾನ ಕೊಡುವ ಬಗ್ಗೆ ತೀರ್ಮಾನ ಮಾಡುವುದು ಹೈಕಮಾಂಡ್. ಅವರು ಏನು ಹೇಳುತ್ತಾರೋ ಹಾಗೆಯೇ ಆಗುತ್ತದೆ. ಹಿಂದಿನ ಬಾರಿ ಸಚಿವ ಸ್ಥಾನ ಕೊಡುವುದಾಗಿ ಹೇಳಿದ್ದರು, ನಾಳೆ ಭೇಟಿ ಆದಾಗ ಸಚಿವ ಸ್ಥಾನ ಕೇಳುತ್ತೇನೆ ಎಂದಿದ್ದಾರೆ.
ಎಲ್ಲಾ ಶಾಸಕರಿಗೂ ಸಚಿರಾಗಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ಸಚಿವ ಸ್ಥಾನ ಕೊಟ್ಟರೆ ಯಾರು ಬೇಡ ಅಂತಾರೆ? ಸಚಿವ ಸ್ಥಾನ ಕೇಳೊಕೆ ದುಡ್ಡು ಕೊಡಬೇಕಾ? ಎಂದು ಪ್ರಶ್ನೆ ಮಾಡಿದ್ದಾರೆ.
ಅವರನ್ನ ಭೇಟಿಯಾದಾಗ ನಮ್ಮ ಡಿಮ್ಯಾಂಡ್ ಹೇಳುತ್ತೇವೆ. ಸಚಿವ ಸ್ಥಾನವನ್ನು ನಮಗೆ ಕೊಡುವುದು ಬಿಡುವುದು ಅವರಿಗೆ ಬಿಟ್ಟದ್ದು. ಇನ್ನು ಈ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ. ನನಗೆ ನಾನು ಕೇಳಿದ ಅನುದಾನವನ್ನು ಅವರು ಕೊಟ್ಟಿದ್ದಾರೆ. ಹಾಗಾಗಿ ನಾಳೆ ಭೇಟಿ ಆದಮೇಲೆ ಎಲ್ಲವೂ ಗೊತ್ತಾಗಲಿದೆ ಎಂದಿದ್ದಾರೆ.