Latest

ಸದನದ ಮೇಲೆ ಕಾನೂನು ಬಾಹಿರ ಹಿಡಿತ ಖಂಡನೀಯ- ಬಸವರಾಜ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಒಂದು ದೇಶ ಒಂದು ಚುನಾವಣೆ ವಿಚಾರವಾಗಿ ಚರ್ಚೆ ನಡೆಸದೆ ಸದನವನ್ನೇ ಕಾನೂನು ಬಾಹಿರವಾಗಿ ಕಾಂಗ್ರೆಸ್ ಪಕ್ಷ  ಹಿಡಿತಕ್ಕೆ ತೆಗೆದುಕೊಂಡಿದ್ದು ಖಂಡನೀಯ ಎಂದು  ಗೃಹ,  ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ್ ಬೊಮ್ಮಾಯಿ ಕಾಂಗ್ರೆಸ್ ಪಕ್ಷವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಗುರುವಾರ ಸಂಜೆ ವಿಧಾನಸಭೆ ಅಧಿವೇಶನ ಮುಂದೂಡಲ್ಪಟ್ಟ ನಂತರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು,  ಕಾಂಗ್ರೆಸ್ ಸದನದಲ್ಲಿ ಇಷ್ಟೊಂದು ಕನಿಷ್ಠವಾಗಿ ನಡೆದುಕೊಂಡಿರುವ ಉದಾಹರಣೆಗಳೇ ಇಲ್ಲ. ಇದು ನಿಜಕ್ಕೂ ವಿಷಾದನೀಯ ಎಂದರು.
ಒಂದು ದೇಶ ಒಂದು ಚುನಾವಣೆ ಕುರಿತು ಚರ್ಚೆಗೆ ಕಲಾಪ ಸಲಹಾ ಸಮಿತಿಯಲ್ಲಿ ಕಾಂಗ್ರೆಸ್ ಪಕ್ಷದವರೇ ಒಪ್ಪಿಕೊಂಡಿದ್ದರು.  ಕಳೆದ ಅಧಿವೇಶನದ ಬದಲು ಈ ಬಜೆಟ್ ಅಧಿವೇಶನದಲ್ಲಿ ಈ ಕುರಿತು ಚರ್ಚೆ ಮಾಡುವಂತೆ ಕಾಂಗ್ರೆಸ್ ನಾಯಕರು ಸಲಹೆ ನೀಡಿದ್ದರು. ಅವರ ಸಲಹೆ ಪ್ರಕಾರವೇ ಈ ಕುರಿತು ಚರ್ಚೆ ಮಾಡಲಾಗುತ್ತಿದೆ. ಆದರೆ ಈಗ ಕಾಂಗ್ರೆಸ್ ಪಕ್ಷ ಕುಂಟು ನೆಪ ಹೇಳಿ  ಚರ್ಚೆಗೆ ಅವಕಾಶ ನೀಡುತ್ತಿಲ್ಲ.  ಕರ್ನಾಟಕ ವಿಧಾನಮಂಡಲ ಇತಿಹಾಸದಲ್ಲಿಯೇ ಸ್ಪೀಕರ್ ಕೈಗೊಂಡ ನಿರ್ಧಾರದ ವಿರುದ್ಧ ಸುದೀರ್ಘ ಸಮಯದವರೆಗೆ ಧರಣಿ ಮಾಡಿದ್ದು ಖಂಡನೀಯ. ಶಾಸಕರ ದುರ್ವರ್ತನೆ   ವಿರುದ್ಧ ಅವರು ಕ್ರಮ‌ಕೈಗೊಂಡಿದ್ದಾರೆ. ಅದರ ವಿರುದ್ಧ ಧರಣಿ ಮಾಡುವ ಮೂಲಕ ಕಾಂಗ್ರೆಸ್ ಪಕ್ಷದ ಶಾಸಕರು ಇತರೆ ಪಕ್ಷಗಳ ಶಾಸಕರ ಹಕ್ಕುಗಳನ್ನು ‌ಮೊಟಕು ಗೊಳಿಸಿದ್ದಾರೆ. ಸದನದ ಅಮೂಲ್ಯ ಸಮಯವನ್ನು ಹಾಳು ಮಾಡಿದ್ದಾರೆ ಎಂದು ಬೊಮ್ಮಾಯಿ ಕಾಂಗ್ರೆಸ್ ನಾಯಕರ ವರ್ತನೆಯನ್ನು  ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.  ಧರಣಿ ಮಾಡುವ ಮೂಲಕ ಕಾಂಗ್ರೆಸ್ ಶಾಸಕರು ಸದನವನ್ನು ಕಾನೂನುಬಾಹಿರವಾಗಿ ತಮ್ಮ ಹಿಡಿತದಲ್ಲಿ ತೆಗೆದುಕೊಂಡಿದ್ದು ಸಂಸದೀಯ ವ್ಯವಸ್ಥೆಯಲ್ಲಿ ಖಂಡನೀಯ. ಇದು ಎಲ್ಲರ ವಿರೋಧಕ್ಕೆ ಕಾರಣವಾಗಿದೆ ಎಂದರು.
2016ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಒಂದು ದೇಶ ಒಂದು ಚುನಾವಣೆ ಯನ್ನು ಬೆಂಬಲಿಸಿದ್ದರು.  ಇದರಿಂದ ಚುನಾವಣೆ ವೆಚ್ಚ ಕಡಿಮೆಯಾಗುತ್ತದೆ ಎಂದು ಪ್ರತಿಪಾದಿಸಿದ್ದರು.  ಆದರೆ ಈಗ ಸಿದ್ದರಾಮಯ್ಯ ತದ್ವಿರುದ್ದವಾಗಿ ವರ್ತಿಸುತ್ತಿರುವುದು ಸೋಜಿಗವೆನಿಸುತ್ತಿದೆ ಎಂದರು.
 ಶಾಸಕ ಸಂಗಮೇಶ್ ಅವರಿಗೆ ಸ್ಪೀಕರ್ ಗೆ ನೋಟಿಸ್ ನೀಡಿದ್ದರು. ಈ ಕುರಿತು ಇಂದು ಮುಂಜಾನೆ ೧೦.೩೦ ಕ್ಕೆ  ತಮ್ಮ ಕೊಠಡಿಗೆ ಬರುವಂತೆ ಸ್ಪೀಕರ್ ಕಾಗೇರಿ ಸೂಚನೆ ನೀಡಿದ್ದರು. ಆದರೆ ಸಂಗಮೇಶ್ ಸಭೆಗೆ ಹಾಜರಾಗಲಿಲ್ಲ.  ನಂತರ  ಸದನದಲ್ಲಿ ದುರ್ವರ್ತನೆ ತೋರಿದರು. ಇದು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳುವುದಿಲ್ಲ. ಆದರೆ ಕಾಂಗ್ರೆಸ್ ಪಕ್ಷ ಇದನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ ಎಂದರು.
ಕಾಂಗ್ರೆಸ್ ಪಕ್ಷ ವೈಚಾರಿಕ ವಾಗಿ ದಿವಾಳಿಯಾಗಿದೆ. ಪ್ರತಿಪಕ್ಷ ವಾಗಿ ಸಮರ್ಥವಾಗಿ ಕೆಲಸ ಮಾಡುವಲ್ಲಿ ವಿಫಲವಾಗಿದೆ. ಕಾಂಗ್ರೆಸ್ ದೇಶದೆಲ್ಲೆಡೆ ಚುನಾವಣೆಗಳಲ್ಲಿ ಸೋಲು ಕಾಣುತ್ತಿದೆ.
-ಬಸವರಾಜ ಬೊಮ್ಮಾಯಿ, ಗೃಹ, ಕಾನೂನು ಮತ್ತು ಸಂಸದೀಯ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button