Kannada NewsKarnataka NewsNationalPolitics

 *ವೀರಶೈವ 10 ಸಾವಿರ ವರ್ಷಗಳ ಪ್ರಾಚೀನ ಧರ್ಮ: ಅಮೇರಿಕದ ಅಕ್ಕ ಸಮ್ಮೇಳನದಲ್ಲಿ ಸಾಹಿತಿ ಡಾ.ವೀರಭದ್ರಯ್ಯ ಪ್ರತಿಪಾದನೆ* 

ಪ್ರಗತಿವಾಹಿನಿ ಸುದ್ದಿ: ಹರಪ್ಪ- ಮೊಹೆಂಜೊದಾರೋ ಸಂಸ್ಕೃತಿಯ ಉತ್ಖನನದಲ್ಲಿ ಶಿವಲಿಂಗಗಳ ಜೊತೆಗೆ ಧಾರಣೆಗೆ ಅನುಕೂಲವಾದ ಚಿಕ್ಕ ಗಾತ್ರದ ಲಿಂಗಗಳೂ ದೊರೆತಿರುವುದರಿಂದ ಸಿಂಧೂಬಯಲಿನ ನಾಗರಿಕತೆಯಲ್ಲಿ ಶಿವನ ಆರಾಧಕರಾಗಿದ್ದವರೆಲ್ಲರೂ ಬಹುತೇಕ ವೀರಶೈವ-ಲಿಂಗಾಯತ ಧರ್ಮ-ಸಂಸ್ಕೃತಿಯನ್ನು ಪರಿಪಾಲನೆ ಮಾಡುವವರೇ ಆಗಿದ್ದು, ಈ ನಿಟ್ಟಿನಲ್ಲಿ ವೀರಶೈವ ಸುಮಾರು 10 ಸಾವಿರ ವರ್ಷಗಳ ಪ್ರಾಚೀನ ಧರ್ಮವಾಗಿದೆ ಎಂದು ಬಳ್ಳಾರಿಯ ಹಿರಿಯ ಸಾಹಿತಿ, ಸಂಶೋಧಕ ಡಾ. ಚಿಕ್ಕ್ಯಾಟೆಮಠದ ವೀರಭದ್ರಯ್ಯ ಪ್ರತಿಪಾದಿಸಿದರು.

ಅವರು ಅಮೇರಿಕದಲ್ಲಿ ನೆಲೆಸಿರುವ ಕನ್ನಡಿಗರಿಗಾಗಿ ವರ್ಜೀನಿಯಾ ರಾಜ್ಯದ ರಿಚ್ಮಂಡ್ ನಗರದಲ್ಲಿ ಅಲ್ಲಿಯ ಕಾವೇರಿ ಮತ್ತು ರಿಚ್ಮಂಡ್ ಕನ್ನಡ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 12ನೆಯ ಅಕ್ಕ ಸಮ್ಮೇಳನದ ಅಂಗವಾಗಿ ಜರುಗಿದ ಚಿಂತನಗೋಷ್ಠಿಯಲ್ಲಿ ಪ್ರಧಾನ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು. ವೀರಶೈವ-ಲಿಂಗಾಯತ ಧರ್ಮ, ಸಂಸ್ಕೃತಿ, ಪರಂಪರೆ ಬಹು ಪ್ರಾಚೀನವಾದುದು. ಇಲ್ಲಿ ಅರ್ಚನೆ, ಆರಾಧನೆ ಮತ್ತು ಅನುಷ್ಠಾನದ ಕೇಂದ್ರ ಬಿಂದು ‘ಇಷ್ಟಲಿಂಗ’ವೇ ಆಗಿದೆ. ಸಿಂಧೂಬಯಲಿನ ನಾಗರಿಕತೆಯ ಕಾಲಘಟ್ಟದಿಂದಲೂ ವೀರಶೈವ-ಲಿಂಗಾಯತ ಧರ್ಮ, ಸಂಸ್ಕೃತಿ, ಪರಂಪರೆಗೆ ಅನುಗುಣವಾದ ‘ಇಷ್ಟಲಿಂಗಾರ್ಚನೆ’ಯ ಆಚರಣೆ ಇತ್ತೆಂಬುದು ಸಂಶೋಧನೆಯಿಂದ ಸಾಬೀತಾಗಿದೆ ಎಂದರು.

ಶಾಸನಗಳಲ್ಲಿ ವೀರಶೈವ

ಭಾರತದೆಲ್ಲೆಡೆ ಮತ್ತು ವಿದೇಶಗಳಲ್ಲಿ ಲಭ್ಯವಾದ ಅನೇಕ ಶಾಶನಗಳಲ್ಲಿ ವೀರಶೈವ ಧರ್ಮದ ಉಲ್ಲೇಖಗಳಿವೆ. ಶಾಶನಗಳು ಸಂಶೋಧನೆಗೆ ಅತ್ಯಂತ ನಿಖರ ಆಕರಗಳಾಗಿದ್ದು, ಶಾಶನೋಕ್ತ ವೀರಶೈವವನ್ನು ಎಲ್ಲರೂ ಒಪ್ಪಿಕೊಳ್ಳಬೇಕಾಗುತ್ತದೆ. ಭಾರತದಲ್ಲಷ್ಟೇ ಅಲ್ಲದೇ ನೇಪಾಳ, ಭೂತಾನ್, ಶ್ರೀಲಂಕಾ, ಕಾಂಬೋಡಿಯಾ ಮುಂತಾದ ವಿದೇಶಗಳಲ್ಲಿಯೂ ಶಿವನ ಆರಾಧನೆ ಮತ್ತು ಲಿಂಗಾರ್ಚನೆ ಇರುವುದು ಸಂಶೋಧನೆಯಲ್ಲಿ ಗೋಚರವಾಗಿದೆ ಎಂದೂ ಅವರು ಹೇಳಿದರು.

 ಲಿಂಗಾಂಗ ಸಾಮರಸ್ಯ

ವೀರಶೈವ-ಲಿಂಗಾಯತ ಧರ್ಮವು ಅಷ್ಟಾವರಣ, ಪಂಚಾಚಾರ ಮತ್ತು ಷಟ್‌ಸ್ಥಲ ತತ್ವಪ್ರಣೀತವಾದದ್ದು. ಇಲ್ಲಿ ಮೋಕ್ಷವನ್ನು ‘ಲಿಂಗಾಂಗ ಸಾಮರಸ್ಯ’ ಎಂದಿದ್ದಾರೆ. ಸಾಕ್ಷಾತ್ಕಾರ ಸಂಪಾದನೆ ಎಂದರೆ ಅದು ಅಂತಿಮವಾಗಿ ‘ಭಗವದ್ಬೆಳಗು’ ಕಾಣುವ ಹಂಬಲ. ವಿಶ್ವದಲ್ಲಿಯ ಎಲ್ಲಾ ಧರ್ಮಗಳ ಮೂಲ ಪ್ರತಿಪಾದನೆಯೂ ಕೂಡ ಇದೇ ಆಗಿದೆ. ಭಗವಂತನನ್ನು ಕಾಣಲೇಬೇಕೆಂಬ ಹಿರಿದಾದ ಹಂಬಲಕ್ಕೆ ಕ್ರಮಿಸುವ ಮಾರ್ಗಗಳು ಹತ್ತು ಹಲವು. ವೀರಶೈವ-ಲಿಂಗಾಯತರು ನಿತ್ಯವೂ ಇಷ್ಟಲಿಂಗದ ಅನುಸಂಧಾನದ ಮೂಲಕ ಶಿವಬೆಳಗನ್ನು ಕಾಣುತ್ತಾರೆ ಎಂದೂ ಡಾ.ವೀರಭದ್ರಯ್ಯ ಹೇಳಿದರು.

ರಾಜ್ಯದ ಮಾಜಿ ಸಚಿವೆ ರಾಣಿ ಸತೀಶ್ ಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿ, ವೀರಶೈವರು ಮತ್ತು ಲಿಂಗಾಯತರು ಬೇರೆ ಬೇರೆ ಎಂಬ ಭಿನ್ನಾಭಿಪ್ರಾಯಗಳನ್ನು ಹುಟ್ಟುಹಾಕಿ ಸಂಕೀರ್ಣತೆಯಲ್ಲಿ ಬದುಕುವ ಸ್ಥಿತಿ ಈಗ ನಿರ್ಮಾಣವಾಗಿದೆ. ಪ್ರಸ್ತುತ ವೀರಶೈವ-ಲಿಂಗಾಯತ ಧರ್ಮದ ಯುವಕ-ಯುವತಿಯರು ವ್ಯಾಪಕ ಗೊಂದಲಗಳಲ್ಲಿ ಸಿಲುಕಿದ್ದಾರೆ. 10 ಸಾವಿರ ವರ್ಷಗಳ ಚಾರಿತ್ರಿಕ ಘನತೆ ಇರುವ ಮತ್ತು ಸಂಶೋಧನೆಯ ಎಲ್ಲ ಆಯಾಮಗಳ ನೆಲೆ-ಮೂಲಗಳನ್ನು ಎಲ್ಲರೂ ಮುಕ್ತವಾಗಿ ಅವಲೋಕನ ಮಾಡುವ ಅಗತ್ಯವಿದೆ. ವೀರಶೈವ-ಲಿಂಗಾಯತರ ಅನೇಕ ಒಳ ಉಪಪಂಗಡಗಳನ್ನು ಮುನ್ನೆಲೆಗೆ ತಂದು ಮೀಸಲಾತಿ ಹೋರಾಟಗಳನ್ನೂ ಸಹ ನಡೆಸಲಾಗುತ್ತಿದೆ. ರಾಜಕಾರಣಿಗಳೂ ಸಹ ಧರ್ಮದ ವಿಚಾರಗಳಲ್ಲಿ ತಮಗೆ ಅನುಕೂಲವಾಗುವಂತೆ ವಿಭಜನೆಯ ಮಾತುಗಳನ್ನು ಎಂದೂ ಎಲ್ಲಿಯೂ ವ್ಯಕ್ತಪಡಿಸಬಾರದು. ಎಲ್ಲರೂ ಸೇರಿಕೊಂಡು ಸಾಮರಸ್ಯದ ನೆಲೆಯಲ್ಲಿ ಧರ್ಮದ ವಿಶಾಲ ವ್ಯಾಪ್ತಿಯನ್ನು ಅರ್ಥಮಾಡಿಕೊಳ್ಳಬೇಕು ಎಂದರು. ಅಮೇರಿಕದ ಕಾವೇರಿ ಮತ್ತು ರಿಚ್ಮಂಡ್ ಕನ್ನಡ ಸಂಘಟನೆಗಳ ಹಾಗೂ 12ನೆಯ ಅಕ್ಕ ಸಮ್ಮೇಳನ ಸಮಿತಿಯ ವಿವಿಧ ಪದಾಧಿಕಾರಿಗಳು ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button