*ಕೇಂದ್ರ ಬಸ್ ನಿಲ್ದಾಣದಲ್ಲಿ ಚಿನ್ನಾಭರಣ ಕಳ್ಳತನ: ಆರೋಪಿಗಳು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದಲ್ಲಿ 11 ಲಕ್ಷಕ್ಕೂ ಅಧಿಕ ಮೊತ್ತದ ಚಿನ್ನದ ಸರ ಕದ್ದಿದ್ದ ಕಳ್ಳರನ್ನು ಬೆಳಗಾವಿಯ ಮಾರ್ಕೆಟ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಚಿನ್ನಾಭರಣ ಕಳ್ಳತನವಾಗಿರುವ ದಾಖಲಾದ ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಆರತಿ @ ಪರಿದಾ ಶಿವಾ ಚೌಗುಲೆ (26), ಸರಸ್ವತಿ ಸಂತೋಷ ರೋಖಡೆ (45), ಶಿವಾ ರಾಮು ಚೌಗುಲೆ ಎಂಬ ಮೂವರನ್ನು ಬಂಧಿಸಿದ್ದಾರೆ.
ಆರೋಪಿಗಳ ವಿಚಾರಣೆ ಮಾಡುವಾಗ 2024 ರ ಅವಧಿಯಲ್ಲಿ ಕೇಂದ್ರ ಬಸ್ ನಿಲ್ದಾಣದಲ್ಲಿ ನಾಲ್ಕು ಬಾರಿ ಆಭರಣ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.
ಆರೋಪಿಗಳು ಕಳ್ಳತನ ಮಾಡಿದ ಚಿನ್ನಾಭರಣಗಳನ್ನು ಮೆಲ್ಟ್ (ಕರಗಿಸಿ) ಮಾಡಿ ಬೆಳಗಾವಿಯ ರಾಮಲಿಂಗಖಿಂಡ ಗಲ್ಲಿಯಲ್ಲಿರುವ ಹೆಚ್.ಡಿ.ಬಿ ಫೈನಾನ್ಸ್ ನಲ್ಲಿ ಅಡವಿಟ್ಟು ಹಣ ಪಡೆದಿದ್ದಾರೆ.
ಬಂಗಾರದ ಆಭರಣಗಳನ್ನು ಅಡವಿಟ್ಟ ಹೆಚ್.ಡಿ.ಬಿ ಫೈನಾನ್ಸ್ ಗುರುತಿಸಿ ತೋರಿಸಿದ್ದು, ಪಂಚರ ಹಾಗೂ ಅಕ್ಕಸಾಲಿಗರ ಸಮ್ಮುಖದಲ್ಲಿ ಒಟ್ಟು 11,25,000 ರೂ ಬೆಲೆಯ 76 ಗ್ರಾಂ ತೂಕದ ಬಂಗಾರದ ಆಭರಣ ಆಭರಣಗಳನ್ನು ವಶಪಡಿಸಿಕೊಂಡು ಇಬ್ಬರ ಮೇಲೆ ಕಾನೂನು ಕ್ರಮ ಜರುಗಿಸಲಾಗಿದೆ. ಪರಾರಿಯಾಗಿರುವ ಇನ್ನೊಬ್ಬ ಆರೋಪಿಗಾಗಿ ಪತ್ತೆ ಕಾರ್ಯ ಮುಂದುವರೆದಿದೆ.



