Kannada NewsKarnataka NewsLatest

*ಆತಂಕದ ಕಾಲದ ಜವಾಬ್ದಾರಿಗಳನ್ನು ಮಾಧ್ಯಮಗಳು ಮರೆಯಬಾರದು: ಕೆ.ವಿ.ಪಿ*

“ಜಾತ್ಯತೀತ” ಮತ್ತು “ಸಮಾಜವಾದ” ಮೌಲ್ಯಗಳು ಸಂವಿಧಾನದ ಪ್ರಾಣವಾಯು: ಕೆ.ವಿ.ಪ್ರಭಾಕರ್

ಪ್ರಗತಿವಾಹಿನಿ ಸುದ್ದಿ: “ಜಾತ್ಯತೀತ” ಮತ್ತು “ಸಮಾಜವಾದ” ಮೌಲ್ಯಗಳು ಸಂವಿಧಾನದ ಪ್ರಾಣವಾಯು. ಈ ಪ್ರಾಣವಾಯು ಹೋದರೆ ಪ್ರಜಾಪ್ರಭುತ್ವದ ಉಸಿರು ನಿಲ್ಲುತ್ತದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ನುಡಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ್ದ ಶ್ರೀ ಶಿವರಾತ್ರೀಶ್ವರ ಮಾಧ್ಯಮ ಪ್ರಶಸ್ತಿ ಪ್ರದಾನ ಮತ್ತ ವಿವಿಧ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಿಗೆ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Home add -Advt

ಹಸಿವಿನ ಸೂಚ್ಯಂಕ, ಮಾನವ ಸ್ವಾತಂತ್ರ್ಯ ಸೂಚ್ಯಂಕ, ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕ, ಮಾನವ ಅಭಿವೃದ್ಧಿ ಸೂಚ್ಯಂಕ ಸೇರಿ ಎಲ್ಲಾ ಜಾಗತಿಕ ಸೂಚ್ಯಂಕಗಳಲ್ಲಿ ದೇಶದ ಸ್ಥಾನ ಮತ್ತು ಮಾನ ಕೆಳಗಿಳಿಯುತ್ತಿರುವ ಹೊತ್ತಿನಲ್ಲಿ ನಮ್ಮ ಸಂವಿಧಾನದಿಂದ “ಜಾತ್ಯತೀತ” ಮತ್ತು “ಸಮಾಜವಾದಿ” ಎನ್ನುವ ಮೌಲ್ಯಗಳನ್ನು ತೆಗೆದುಹಾಕಬೇಕು ಎನ್ನುವ ಒತ್ತಡ ಮತ್ತು ಚರ್ಚೆಗಳು ನಮ್ಮ ರಾಜ್ಯದಲ್ಲಿ ಆರಂಭವಾಗಿರುವುದು ಬೇಸರದ ಸಂಗತಿ.

ಮೊದಲಿಗೆ ಈ ಮೌಲ್ಯಗಳನ್ನು ಕೇವಲ “ಪದಗಳು” ಎಂದು ಕರೆದು ಆ ಮೂಲಕ ಸಂವಿಧಾನದ ಹೃದಯ ಮತ್ತು ಶ್ವಾಸಕೋಶವನ್ನೇ ತೆಗೆದುಹಾಕುವ ಹುನ್ನಾರ ಮುಂದುವರೆದಿದೆ. ಈ ಹುನ್ನಾರವನ್ನು ಸೋಲಿಸುವ ಶಕ್ತಿ ಜನತೆಗೆ ಇದೆ. ಆದರೆ ಮಾಧ್ಯಮಗಳು ಈ ಸಂದರ್ಭದಲ್ಲಿ ಜನರ ಜೊತೆ ನಿಲ್ಲವ ಮೂಲಕ ಬದ್ಧತೆ ತೋರಿಸಬೇಕಿದೆ ಎಂದು ಕರೆ ನೀಡಿದರು.

2024ರ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತ 127 ದೇಶಗಳ ಪೈಕಿ 105ನೇ ಸ್ಥಾನದಲ್ಲಿದೆ. ಜಾಗತಿಕ ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 180 ದೇಶಗಳ ಪೈಕಿ ಭಾರತ 151 ನೇ ಸ್ಥಾನದಲ್ಲಿದೆ. ಇವೆರಡೂ ಅತ್ಯಂತ ಗಂಭೀರವಾದ ಮತ್ತು ಆತಂಕಕಾರಿಯಾದ ಸ್ಥಿತಿ. ಇಂತಹ ಆತಂಕಕಾರಿಯಾದ ಸ್ಥಿತಿಯಲ್ಲಿ ಮಾಧ್ಯಮಗಳು ತಮ್ಮ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ಮರೆಯಬಾರದು ಎಂದು ನುಡಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದ ಹೊಸ್ತಿಲಲ್ಲಿ ದೇಶದ ಮೈತುಂಬ ಆಗಿದ್ದ ಗಾಯಗಳಿಗೆ ಮುಲಾಮು ಹಚ್ಚುವ ಮೂಲಕ ಗುಣಪಡಿಸುವ ಜವಾಬ್ದಾರಿಗಳನ್ನು ಅಂದಿನ ಪತ್ರಕರ್ತರು ಮತ್ತು ಪತ್ರಿಕೆಗಳು ನಿರ್ವಹಿಸಿದ್ದವು. ದೇಶವಿಭಜನೆಯ ಜೊತೆಗೆ ಬ್ರಿಟಿಷರು ನಮ್ಮ ದೇಶದ ಸಾಮಾಜಿಕ ಮತ್ತು ಸಾಂಸ್ಕೃತಿಕ ಬೆಸುಗೆಯನ್ನೇ ಹಾಳುಗೆಡವಿದ್ದರು. ಇವೆಲ್ಲವನ್ನೂ ಬಹಳ ಜವಾಬ್ದಾರಿಯಿಂದ ಮತ್ತೆ ಹೆಣೆದು, ದೇಶದ ಜನರನ್ನು ಮತ್ತೆ ಸಂವಿಧಾನದ ಆಶಯಗಳ ಅಡಿಯಲ್ಲಿ ಬೆಸೆದು ಸಂವಿಧಾನವನ್ನು ಆಳವಾಗಿ ಪ್ರತಿಷ್ಠಾಪಿಸಿದ ಕರ್ತವ್ಯವನ್ನು ಅವತ್ತಿನ ಪತ್ರಕರ್ತರು ಮತ್ತು ಪತ್ರಿಕೆಗಳ ಯಶಸ್ವಿಯಾಗಿ ನಿರ್ವಹಿಸಿದ್ದವು. ಅದಕ್ಕೇ ಪತ್ರಿಕೆಗಳನ್ನು ಪ್ರಜಾಪ್ರಭುತ್ವದ ಪ್ರಾಣವಾಯು ಎಂದು ಪತ್ರಕರ್ತರೂ ಆಗಿದ್ದ ಡಾ.ಬಾಬಾಸಾಹೇಬ ಅಂಬೇಡ್ಕರ್‌ ಅವರು ಹೇಳಿದ್ದರು.

ಇವತ್ತು ಈ ವೇದಿಕೆಯ ಮೇಲೆ ಮತ್ತು ವೇದಿಕೆಯ ಮುಂಭಾಗದಲ್ಲಿರುವ ನಮ್ಮೆಲ್ಲರನ್ನೂ ಸೇರಿಸಿದ್ದು ಅಂಬೇಡ್ಕರ್‌ ಅವರು ಹೇಳಿದ ಪ್ರಾಣವಾಯುವೇ. ಈಗ ಈ ಪ್ರಾಣವಾಯುಗೆ ಅಪಾಯ ಬಂದಿದೆ. ನಾಳಿದ್ದು ಜುಲೈ 1ಕ್ಕೆ ಪತ್ರಿಕಾ ದಿನಾಚರಣೆ ಇದೆ. ಈ ಹೊತ್ತಿನಲ್ಲಿ ನಾವೆಲ್ಲರೂ ನಮಗೆ ಅನ್ನ ಮತ್ತು ಅವಕಾಶಗಳನ್ನು ಒದಗಿಸಿದ ಪತ್ರಿಕಾ ವೃತ್ತಿ ಮತ್ತು ಇದರ ಘನತೆ ಹಾಗೂ ಜವಾಬ್ದಾರಿಗಳ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಿದೆ.

ಇವತ್ತು ನಮ್ಮ ಸಮಾಜದ ಮುಂದಿರುವ ಸಮಸ್ಯೆಗಳ ಪಟ್ಟಿಯನ್ನು ಮತ್ತು ನಮ್ಮ ಮಾಧ್ಯಮಗಳು ಮುಂದಿಡುತ್ತಿರುವ ಸಮಸ್ಯೆಗಳ ಪಟ್ಟಿಯನ್ನು ಅವಲೋಕಿಸಿದರೆ ನಮ್ಮ ಹಿಂದಿನವರು ಸಾಕಷ್ಟು ಕಷ್ಟಗಳನ್ನು ಅನುಭವಿಸಿ ಕಟ್ಟಿ ನಿಲ್ಲಿಸಿದ ಪತ್ರಿಕಾ ವೃತ್ತಿ ಎತ್ತ ಸಾಗುತ್ತಿದೆ ಎನ್ನುವುದು ಗೊತ್ತಾಗುತ್ತದೆ.

ಮೊದಲೇ ಹೇಳಿದಂತೆ ಎಲ್ಲಾ ಸೂಚ್ಯಂಕಗಳಲ್ಲಿ ದೇಶದ ಸ್ಥಾನ ಮಾನ ಕುಸಿಯುತ್ತಿದೆ, ದೇಶವನ್ನು ನಿರ್ಮಿಸಬೇಕಾದ ಯುವಕರ ಆತ್ಮಹತ್ಯೆಗಳು ಹೆಚ್ಚುತ್ತಿವೆ, ಮೊದಲ ಬಾರಿಗೆ ದೇಶದಲ್ಲಿ ಸಣ್ಣ ಉದ್ಯಮಿಗಳ ಆತ್ಮಹತ್ಯೆಗಳು ರೈತರ ಆತ್ಮಹತ್ಯೆಗಳಷ್ಟೇ ಸುದ್ದಿಯಾಗುತ್ತಿವೆ. ಶಿಕ್ಷಣ ಮತ್ತು ಆರೋಗ್ಯ ಕೈಗೆಟುಕದ ದುಬಾರಿ ಸಂಗತಿ ಆಗುತ್ತಿದೆ. ಬಡತನ ವಿಪರೀತವಾಗಿ ಹೆಚ್ಚಾಗುತ್ತಾ, ಮಧ್ಯಮ ವರ್ಗವೂ ಅತ್ಯಂತ ವೇಗವಾಗಿ ಬಡತನದ ರೇಖೆಗಿಂತ ಕೆಳಗೆ ಇಳಿಯುತ್ತಿದೆ, ಬೆಲೆಏರಿಕೆ, ನಿರುದ್ಯೋಗ, ಭ್ರಷ್ಟಾಚಾರ, ಹಸಿವು, ಶೋಷಣೆ, ಲಿಂಗತಾರತಮ್ಯ, ಮಹಿಳೆಯರು-ಮಕ್ಕಳ ಹಕ್ಕುಗಳ ದಮನ, ದೇಶದ ಒಕ್ಕೂಟ ವ್ಯವಸ್ಥೆಯ ಮೇಲೆ ನಡೆಯುತ್ತಿರುವ ದಾಳಿ, ದೇಶದ ಸಂಪತ್ತಿನ ಅಸಮಾನ ಹಂಚಿಕೆ, ಜಾತಿ ದೌರ್ಜನ್ಯಗಳು…ಹೀಗೆ ಸಾಮಾಜಿಕ ಸಮಸ್ಯೆಗಳ ಪಟ್ಟಿ ದೊಡ್ಡದಾಗಿ ಬೆಳೆಯುತ್ತಿದೆ.

ಆದರೆ ಮಾಧ್ಯಮಗಳು ಜನರ ಮುಂದೆ ಇಡುತ್ತಿರುವ ಸಂಗತಿಗಳ ಪಟ್ಟಿ ಬೇರೆ ಇದೆ. ಅಂಬಾನಿ ಪುತ್ರನ ಮದುವೆಯನ್ನೇ ದೇಶದ ಅಮೃತ ಕಾಲ ಎಂದು ಬಿಂಬಿಸಲಾಗುತ್ತಿದ್ದ ಹೊತ್ತಿನಲ್ಲೇ ದೇಶದ 67 ಲಕ್ಷ ಮಕ್ಕಳಿಗೆ ಒಪ್ಪೊತ್ತಿನ ಊಟಕ್ಕೂ ಗತಿ ಇಲ್ಲ ಎನ್ನುವ ವರದಿ ಬಂದಿತ್ತು. ಭಾರತದ ಮಕ್ಕಳ ಅಪೌಷ್ಠಿಕತೆಯ ಪ್ರಮಾಣ ಶೇ18.7ರಷ್ಟಿದ್ದರೆ ಇದರಲ್ಲಿ ಗಂಭೀರ ಸ್ವರೂಪದ ತೀವ್ರ ಅಪೌಷ್ಠಿಕತೆಯ ಪ್ರಮಾಣ ಶೇ16.6ರಷ್ಟಿದೆ. ಹಾಗೆಯೇ 5ವರ್ಷದೊಳಗಿನ ಮಕ್ಕಳು ಅಪೌಷ್ಠಿಕತೆಯಿಂದ ಮರಣ ಹೊಂದುವ ಪ್ರಮಾಣ ಶೇ3.1 ರಷ್ಟಿದೆ ಎಂದು ಅಧ್ಯಯನಗಳು ಹೇಳಿವೆ.

ಸನ್ನಿ ಡಿಯೋಲ್‌ ಬಂಗಲೆ ಬಗ್ಗೆ ನಡೆಯುವ ಚರ್ಚೆಗಳು, ಲವ್‌ ಜಿಹಾದ್‌, ಹಿಜಾಬ್‌, ಕ್ರಿಕೆಟ್‌ ಐಪಿಎಲ್‌ ಗೆ ಸಿಗುತ್ತಿರುವ ಸಮಯ ಮತ್ತು ಮಹತ್ವ ನಮ್ಮ ಈ ಹೊತ್ತಿನ ಬದುಕಿನ ಸಮಸ್ಯೆಗಳ ಬಗ್ಗೆ ಸಿಗುತ್ತಿಲ್ಲ. ಈ ಸಾಮಾಜಿಕ ಸಮಸ್ಯೆಗಳ ಪರಿಹಾರ ಮಾಧ್ಯಮಗಳ ಕೈಯಲ್ಲಿ ಇಲ್ಲ ಎನ್ನುವುದು ಸತ್ಯ..

ಆದರೆ, ಈ ಸಮಸ್ಯೆಗಳ ಬಗ್ಗೆ ಚರ್ಚಿಸುವ ಮತ್ತು ಅಧಿಕಾರಸ್ಥರ ಗಮನ ಸೆಳೆಯುವ ಅವಕಾಶಗಳಂತೂ ಮಾಧ್ಯಮ ಲೋಕದ ಮುಂದೆ ಇದ್ದೇ ಇದೆ. ಈ ವಿಚಾರದಲ್ಲಿ ಮೈಸೂರಿನ ಪತ್ರಕರ್ತರು ಬಹಳ ಆರೋಗ್ಯಕರವಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ ಎನ್ನುವುದು ಸಮಾಧಾನದ ಸಂಗತಿ. ಆದರೆ, ಒಟ್ಟು ನಮ್ಮ ಮಾಧ್ಯಮ ಲೋಕದ ಆಸಕ್ತಿ ಮತ್ತು ವರ್ತನೆಗಳನ್ನು ಗಮನಿಸಿದಾಗ ನಿರಾಸೆ ಮೂಡುತ್ತದೆ.

ಇಂಥಾ ನಿರಾಶಾದಾಯಕ ಪರಿಸ್ಥಿತಿಯಲ್ಲಿ ನಮ್ಮ ಮಾಧ್ಯಮಗಳ ಜವಾಬ್ದಾರಿ ಹೆಚ್ಚಿದೆ. ಸುಳ್ಳು ಸುದ್ದಿ, ಊಹಾ ಪತ್ರಿಕೋದ್ಯಮದಿಂದ ನಮ್ಮನ್ನು ನಾವು ಬಿಡಿಸಿಕೊಂಡು ನಮ್ಮ ಹಿಂದಿನವರು ಹಾಕಿಕೊಟ್ಟ ವೃತ್ತಿಪರ ಮಾರ್ಗದಲ್ಲಿ ಗಟ್ಟಿಯಾದ ಹೆಜ್ಜೆಗಳನ್ನು ಇಡಬೇಕಿದೆ.

ಇವತ್ತಿನ ಊಹಾ ಪತ್ರಿಕೋದ್ಯಮ ಮತ್ತು ಸುಳ್ಳಿನ ಆಕರ್ಷಣೆಯಿಂದ ಹೊರಗೆ ಬಂದು ಪಾರಂಪರಿಕ ವಸ್ತುನಿಷ್ಠ, ಜನಮುಖಿ, ಸಮಾಜಮುಖಿ ವೃತ್ತಿಪರತೆಯನ್ನು ಗಟ್ಟಿಗೊಳಿಸುವ ಹೊಣೆಗಾರಿಕೆ ಈಗಿನ ಮತ್ತು ಮುಂದಿನ ಪತ್ರಕರ್ತರ ಮೇಲಿದೆ ಎಂದರು.

ಮುಖ್ಯಮಂತ್ರಿಗಳಿಗೆ ಧನ್ಯವಾದ ಅರ್ಪಿಸಿದ ಕೆವಿಪಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 1 ರಂದು ಪತ್ರಕರ್ತರ ಆರೋಗ್ಯ ಸಂಜೀವಿನಿ ಮತ್ತು ಬಸ್ ಪಾಸ್ ವ್ಯವಸ್ಥೆಗೆ ಚಾಲನೆ ನೀಡುತ್ತಿರುವ ಹಿನ್ನೆಲೆಯಲ್ಲಿ ಇಡೀ ಪತ್ರಕರ್ತ ಸಮೂಹದ ಪರವಾಗಿ ಕೆ.ವಿ.ಪ್ರಭಾಕರ್ ಅವರು ಮುಖ್ಯಮಂತ್ರಿಗಳಿಗೆ ಧನ್ಯವಾದ ಸಲ್ಲಿಸಿದರು.

Related Articles

Back to top button