
ಪ್ರಗತಿವಾಹಿನಿ ಸುದ್ದಿ: ಕಾರವಾರ: ಕದಂಬ ನೌಕಾನೆಲೆಯ ಸಿಬ್ಬಂದಿಯೊಬ್ಬರು ಏಕಾಏಕಿ ನಾಪತ್ತೆಯಾಗಿದ್ದು, ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ಕದಂಬ ನೌಕಾನೆಲೆಯಲ್ಲಿ ಸೇಲರ್ ಆಗಿ ಕರ್ತವ್ಯ ನಿರ್ವಹಿಸುತಿದ್ದ ದಿನೇಶ್ ಕುಮಾರ್ (28) ಕಾಣೆಯಾದವರು. ಆಂದ್ರಪ್ರದೇಶದ ಅನಂತಪುರದ ಕುಂಟಿಮಡ್ಡಿ ಗ್ರಾಮದ ದಿನೇಶ್ ಕುಮಾರ್ ಅ.27 ರಂದು ಕದಂಬ ನೌಕಾನೆಲೆಯಲ್ಲಿ ಕರ್ತವ್ಯ ನಿರ್ವಹಿಸುತಿದ್ದ ವೇಳೆ ಮಧ್ಯಾಹ್ನ 2 ಗಂಟೆ ವೇಳೆಗೆ ಅವರು ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿಂದಿನಿಂದಲೂ ಪಾಕಿಸ್ತಾನದ ಬೇಹುಗಾರಿಕಾ ತಂಡ ಹನಿಟ್ರ್ಯಾಪ್ ಮಾಡಿ ನೌಕಾ ಸಿಬ್ಬಂದಿ ಹಾಗೂ ಅಧಿಕಾರಿಗಳಿಂದ ಕದಂಬ ನೌಕಾನೆಲೆಯ ಮಾಹಿತಿಯನ್ನು ಪಡೆಯುತ್ತಿದ್ದರು. ಈ ಸಂಬಂಧ ಕಳೆದ ಎರಡು ವರ್ಷದಲ್ಲಿ ಇದೇ ನೌಕಾನೆಲೆಯ ನಾಲ್ಕು ಸಿಬ್ಬಂದಿಯನ್ನು ನೌಕಾದಳದ ಗುಪ್ತಚರ ಇಲಾಖೆ ಬಂಧಿಸಿತ್ತು. ಇದೀಗ ನೌಕೆಯಲ್ಲಿ ಕಾರ್ಯನಿರ್ವಹಿಸುವ ಸೇಲರ್ ಕದಂಬ ನೌಕಾ ನೆಲೆಯಿಂದ ನಾಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ನಾಪತ್ತೆಯಾಗಿರುವ ಸಿಬ್ಬಂದಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.



