
ಪ್ರಗತಿವಾಹಿನಿ ಸುದ್ದಿ: ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರೂರು ಗುಡ್ಡ ಕುಸಿತ ದುರಂತದ ಬೆನ್ನಲ್ಲೇ ಕೇರಳದ ವಯನಾಡಿನಲ್ಲಿ ಸರಣಿ ಭೂ ಕುಸಿತ ಸಂಭವಿಸಿದ್ದು, 19 ಜನರು ಸಾವನ್ನಪ್ಪಿದ್ದಾರೆ.
ಇಂದು ಮುಂಜಾನೆ ಈ ದುರಂತ ಸಂಭವಿಸಿದೆ. ನಸುಕಿನ ಜಾವ 2 ಗಂಟೆಸುಮಾರಿಗೆ ಮೊದಲ ಭೂ ಕುಸಿತ ಸಂಭವಿಸಿದೆ. ಬಳಿಕ ಬೆಳಗಿನ ಜಾವ 4:10ರ ಸುಮಾರಿಗೆ ಮತ್ತೊಂದು ಭೂ ಕುಸಿತ ಸಂಭವಿಸಿದೆ.
ವಯನಾಡಿನ ಮೆಪ್ಪಾಡಿ, ಮುಂಡಕೈ, ಚೂರಲ್ ಮಲ ಗ್ರಾಮಗಳಲ್ಲಿ ಸಾಲು ಸಾಲು ಭೂ ಕುಸಿತ ಸಂಭವಿಸಿದೆ. 19 ಜನರು ಸಾವನ್ನಪ್ಪಿದ್ದು, ಈವರೆಗೆ 16 ಜನರು ಮಣ್ಣಿನ ಅವಶೇಷಗಳ ಅಡಿಯಿಂದ ರಕ್ಷಿಸಲಾಗಿದೆ. 400ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ.
ನೀರಿನ ರಭಸಕ್ಕೆ ಗ್ರಾಮಗಳಲ್ಲಿ ಮನೆ, ಕಟ್ಟಡ, ಶಾಲೆ, ಅಂಗಡಿಗಳು ಕೊಚ್ಚಿ ಹೋಗಿವೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್, ಮೂರು ಕಡೆ ಸಂಭವಿಸಿದ ಸಾಲು ಸಾಲು ಭೂ ಕುಸಿತದಲ್ಲಿ ಈವರೆಗೆ 19 ಜನ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಮೆಪ್ಪಾಡಿಯಲ್ಲಿಯೇ 16 ಜನ ಮೃತಪಟ್ಟಿದ್ದಾರೆ. ಉಳಿದೆಡೆ ಹಲವರು ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.
ಭೂ ಕುಸಿತ ಪ್ರದೇಶದಲ್ಲಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಎನ್ ಡಿ ಆರ್ ಎಫ್ ತಂಡದಿಂದ ರಕ್ಷಣಾ ಕಾರ್ಯಾಚರಣೆ ಚುರುಕುಗೊಂಡಿದೆ. ಭೂ ಕುಸಿತದಲ್ಲಿ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ