*ನಶಿಸಿಹೋಗುತ್ತಿರುವ ಕುಟುಂಬ ಸಂಬಂಧಗಳನ್ನು ಪುನರ್ ಸ್ಥಾಪಿಸಲು ಅಪ್ಪಚೆಟ್ಟೋಳಂಡ ಹಾಕಿ ಉತ್ಸವ ಸಹಕಾರಿ: ಸಿಎಂ ಬೊಮ್ಮಾಯಿ*

ಪ್ರಗತಿವಾಹಿನಿ ಸುದ್ದಿ; ಕೊಡಗು ( ಮಡಿಕೇರಿ): ನಶಿಸಿಹೋಗುತ್ತಿರುವ ಕುಟುಂಬ ಸಂಬಂಧಗಳನ್ನು ಪುನರ್ ಸ್ಥಾಪಿಸಲು ಅಪ್ಪಚೆಟ್ಟೋಳಂಡ ಹಾಕಿ ಉತ್ಸವ ಸಹಕಾರಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಅವರು ಇಂದು ಅಪ್ಪಚೆಟ್ಟೋಳಂಡ 2022-23ನೇ ಸಾಲಿನ ಕೊಡವ ಹಾಕಿ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತೀಯ ಪರಂಪರೆ
ಇಂದೊಂದು ವಿಶೇಷ ಕ್ರೀಡಾಕೂಟ. ಕೊಡಗಿನ ಕುಟುಂಬಗಳು ಸೇರಿ ಈ ಕ್ರೀಡಾಕೂಟ ಆಯೋಜಿಸಿರುವುದು ಅದ್ಭುತ ಕಲ್ಪನೆ. ಕೊಡಗಿನ ಕುಟುಂಬ ಗಳು ಅತ್ಯಂತ ಒಳ್ಳೆಯ ಸಂಬಂಧವಲ್ಲ ಕುಟುಂಬಗಳು. ಕೊಡಗಿನ ಸಂಸ್ಕೃತಿ, ಆಚಾರ ವಿಚಾರ ಎಲ್ಲರನ್ನೂ ಒಂದು ಮಾಡುತ್ತದೆ. ನಿಮ್ಮ ಉಡುಗೆ, ಆಹಾರ ಎಲ್ಲವೂ ವಿಶೇಷ. ಹಾಕಿ ನಿಮ್ಮ ಪ್ರೀತಿಯ ಪಂದ್ಯ. 23 ವರ್ಷಗಳಿಂದ ನಡೆಸಿಕೊಂಡು ಬಂದಿರುವುದು ಶ್ಲಾಘನೀಯ. ಕುಟುಂಬಗಳು ಹಾಗೂ ಸಂಬಂಧಗಳು ಒಂದಾಗಬೇಕು. ಇದು ನಮ್ಮ ಭಾರತೀಯ ಪರಂಪರೆ. ಇಡೀ ಜಗತ್ತಿನಲ್ಲಿ ಈ ರೀತಿಯ ಕ್ರೀಡೆ ಎಲ್ಲಿಯೂ ಇಲ್ಲ.
ಕೊಡಗಿನಲ್ಲಿ ಹಾಕಿಗೆ 1.00 ಕೋಟಿ ರೂ. ಅನುದಾನವನ್ನು ನೀಡಲಾಗಿದೆ. ಮಾಜಿ ಮುಖ್ಯಮಂತ್ರಿ ಎಸ್.ಆರ್ ಬೊಮ್ಮಾಯಿ ಅವರು ಈ ಕ್ರೀಡಾಂಗಣಕ್ಕೆ ಅನುದಾನ ಒದಗಿಸಿದ್ದರು ಎಂದು ಸ್ಮರಿಸಿದರು.
ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕ್ರಮ
ಕೊಡವರು ದೈಹಿಕ ಶಕ್ತಿ ಇರುವವರು ಭಾರತ ದೇಶವನ್ನು ಕಾಯುವ ಸ್ಫೂರ್ತಿವುಳ್ಳ ವರು ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕೂಡಲೇ ಕ್ರಮ ವಹಿಸಲಾಗುವುದು ಎಂದರು.
ಸಚಿವ ಎಸ್.ಟಿ. ಸೋಮಶೇಖರ್, ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್, ಎಂ.ಎಲ್.ಸಿ, ಪ್ರತಾಪ್ ಸಿಂಹ ನಾಯಕ್, ಕೊಡವ ಹಾಕಿ ಅಕಾಡೆಮಿ ನಿರ್ದೇಶಕ ಚೈಯಂಡ ಸತ್ಯ, ಮನು ಮುತ್ತಪ್ಪ, ಪದ್ಮಶ್ರೀ ರಾಣಿ ಮಾಚಯ್ಯ, ಎಂ.ಪಿ ಗಣೇಶ್ ಅರ್ಜುನ ಪ್ರಶಸ್ತಿ ವಿಜೇತ ಸುಬ್ಬಯ್ಯ ಅವರು ಉಪಸ್ಥಿತರಿದ್ದರು.