
ಪ್ರಗತಿವಾಹಿನಿ ಸುದ್ದಿ; ರಾಯಚೂರು: ನಿವೃತ್ತ ಎ ಎಸ್ ಐ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿರುವ ರಾಯಚೂರು ಮಾರ್ಕೆಟ್ ಯಾರ್ಡ್ ಪೊಲೀಸರು ಹಂತಕನ ಕರಾಳಮುಖ ಕಂಡು ಶಾಕ್ ಆಗಿದ್ದಾರೆ.
ಎ ಎಸ್ ಐ ಬಸವರಾಜಪ್ಪ ಹತ್ಯೆ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಮಗನೆ ತಂದೆಯ ಹಂತಕ ಎಂಬುದು ಗೊತ್ತಾಗಿದೆ. ಮದುವೆ ಮಾಡಿಸಿಲ್ಲ ಎಂಬ ಕಾರಣಕ್ಕೆ ಮಗ 38 ವರ್ಷದ ಜಗದೀಶ್, ನಿವೃತ್ತ ಎ ಎಸ್ ಐ ಆಗಿದ್ದ ತಂದೆಯನ್ನೇ ಹತ್ಯೆ ಮಾಡಿದ್ದಾನೆ.
ಫೆಬ್ರವರಿ 9 ರ ರಾತ್ರಿ ನಿವೃತ್ತ ಪೊಲೀಸ್ ಅಧಿಕಾರಿ ಬಸವರಾಜಪ್ಪ(75) ಹತ್ಯೆಯಾಗಿತ್ತು. ರಾಯಚೂರು ನಗರದ ಗೋಶಾಲೆ ಹಿಂಭಾಗ ಕೊಲೆ ಮಾಡಿ ಆರೋಪಿ ಪರಾರಿಯಾಗಿದ್ದ. ನಿವೃತ್ತ ಎಎಸ್ ಐ ಬಸವರಾಜಪ್ಪಗೆ ಐದು ಜನ ಮಕ್ಕಳಿದ್ದರು. ಮೂರು ಹೆಣ್ಮಕ್ಕಳಿಗೆ ಮದುವೆ ಮಾಡಿಸಿದ್ದು, ಹಿರಿಯ ಮಗ ಶಿವರಾಜ್ (40) ಹಾಗೂ ಕಿರಿಯ ಮಗ ಜಗದೀಶ್ (38) ಇಬ್ಬರಿಗೂ ಮದುವೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಿರಿ ಮಗ ಜಗದೀಶ್ ಮಾನಸಿಕವಾಗಿ ಕುಂದಿದ್ದ. ಅಲ್ಲದೇ ಮದ್ಯ ವ್ಯಸನಿಯೂ ಆಗಿದ್ದ. ಮಗನ ಕಾಟಕ್ಕೆ ಬೇಸತ್ತು ಬಸವರಾಜಪ್ಪ ಹಾಗೂ ಕುಟುಂಬ ಮನೆ ತೊರೆದಿದ್ದರು.
ಮತ್ತೆ ಫೋನ್ ಮಾಡಿ ಮನೆಗೆ ಕರೆಸಿಕೊಂಡ ಮಗ ಜಗದೀಶ್, ಮತ್ತದೆ ಮದುವೆ ಮಾಡುವಂತೆ ಒತ್ತಾಯಿಸಿದ್ದ, ಅಲ್ಲದೇ ತನ್ನ ಕುಡಿತದ ಚಟಕ್ಕೆ ಹಣ ನೀಡುವಂತೆಯೂ ತಾಕೀತು ಮಾಡಿದ್ದ. ತಂದೆ-ಮಗನ ನಡುವೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಮಗ ಜಗದೀಶ್ ಸಿಮೆಂಟ್ ಇಟ್ಟಿಗೆಯಿಂದ ತಂದೆಯ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ ಪೊಲೀಸರು, ಮಗನ ಅವತಾರ ಕಂಡು ಅವಾಕ್ಕಾಗಿದ್ದಾರೆ.
ಯುವತಿಗೆ ಸಹಾಯ ಮಾಡುವುದಾಗಿ ನಂಬಿಸಿ ಮಾರಾಟಕ್ಕೆ ಯತ್ನ