Latest

*ಪ್ರೇಮಿ ಜೊತೆ ಆತ್ಮಹತ್ಯೆಗೆ ಶರಣಾದ ಅಪ್ರಾಪ್ತೆ*

ಪ್ರಗತಿವಾಹಿನಿ ಸುದ್ದಿ: ತಮ್ಮ ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರಿಂದ ಮನನೊಂದ ಅಪ್ರಾಪ್ತೆ ಜೊತೆ ಪ್ರೇಮಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಭೀರಪ್ಪನಹಳ್ಳಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ನೇಣಿಗೆ ಶರಣಾದ ಪ್ರೇಮಿಗಳನ್ನು ಚಿಂತಾಮಣಿ ತಾಲೂಕಿನ ಸೀತಾರಾಮಪುರ ಗ್ರಾಮದ 22 ವರ್ಷದ ನವೀನ್ ಮತ್ತು 15 ವರ್ಷದ ಅಪ್ರಾಪ್ತೆ ಎಂದು ತಿಳಿದುಬಂದಿದೆ. ಇಬ್ಬರು ಒಂದೇ ಸಮುದಾಯದವರಾಗಿದ್ದು ಪರಸ್ಪರ ಪ್ರೀತಿಸುತ್ತಿದ್ದರು. ಇವರ ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದರು. ಅಲ್ಲದೆ ಯುವಕನ ವಿರುದ್ಧ ಕಳೆದ ಮಾರ್ಚ್ 30ರಂದು ಶಿಡ್ಲಘಟ್ಟ ತಾಲೂಕಿನ ಬಟ್ಲಹಳ್ಳಿ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಿಸಿದ್ದರು. ಈ ವೇಳೆ ತಲೆಮರೆಸಿಕೊಂಡಿದ್ದ ನವೀನ್ ನನ್ನು ಬಟ್ಲಹಳ್ಳಿ ಪೊಲೀಸರು ಗೌನಿಪಲ್ಲಿ ಗ್ರಾಮದಲ್ಲಿ ಬಂಧಿಸಿದ್ದರು.

ಜೈಲಿನಿಂದ ಹೊರಬಂದಿದ್ದ ನವೀನ್ ಅಪ್ರಾಪ್ತೆಯನ್ನು ಭೇಟಿ ಮಾಡಿದ್ದನು. ಇವರಿಬ್ಬರು ಭೀರಪ್ಪನಹಳ್ಳಿ ಅರಣ್ಯ ಪ್ರದೇಶಕ್ಕೆ ತೆರಳಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button