Kannada NewsKarnataka NewsNationalPolitics

*ಅಪಘಾತ ಗಾಯಾಳುವನ್ನು ತಮ್ಮ ಕಾರಿನಲ್ಲೇ ಆಸ್ಪತ್ರೆಗೆ ದಾಖಲಿಸಿದ ಸಚಿವ ಸಂತೋಷ್‌ ಲಾಡ್‌*

ಪ್ರಗತಿವಾಹಿನಿ ಸುದ್ದಿ: ಬಾಗಲಕೋಟೆ ಜಿಲ್ಲೆಯ‌ ಮುಧೋಳ ತಾಲ್ಲೂಕಿನ ಲೋಕಾಪುರದಲ್ಲಿ ನಡೆದ ಅಪಘಾತದ ಗಾಯಾಳುವನ್ನು ಕಾರ್ಮಿಕ ಸಚಿವ ಸಂತೋಷ್ ಲಾಡ್‌ ಅವರು ತಮ್ಮದೇ ಕಾರಿನಲ್ಲಿ ಕರೆದೊಯ್ದು ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ. 

ಬಾಗಲಕೋಟೆ ಜಿಲ್ಲೆ‌ ಮುಧೋಳ ತಾಲ್ಲೂಕಿನ ಲೋಕಾಪುರದಲ್ಲಿ ಟ್ರ್ಯಾಕ್ಟರ್ ಹಿಂಬದಿ ಹೊರಟಿದ್ದ ಬೈಕ್ ಸವಾರ ಆಯತಪ್ಪಿ ಬಿದ್ದು ಗಾಯಗೊಂಡಿದ್ದರು. ಈ ವೇಳೆ ಜಮಖಂಡಿಯಿಂದ ಅದೇ ಮಾರ್ಗವಾಗಿ ಬರುತ್ತಿದ್ದ ಸಚಿವ ಸಂತೋಷ ಲಾಡ್ ಅವರು, ಬೈಕ್ ಸವಾರ ಬಿದ್ದಿರೋದನ್ನು ಕಂಡು ಕಾರು ನಿಲ್ಲಿಸಿದರು. ಬಳಿಕ ತಮ್ಮ ಕಾರಲ್ಲೇ ಗಾಯಾಳು ಬೈಕ್ ಸವಾರನನ್ನು ಲೋಕಾಪುರ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು. 

Home add -Advt

ಗಾಯಾಳು ಬೈಕ್ ಸವಾರ ಸತೀಶ್ ವೆಂಕಪ್ಪ ಮಾದರ ಅವರಿಗೆ ಮೊಳಕಾಲಿಗೆ ತೀವ್ರ ಗಾಯವಾಗಿ ನೋವಾಗಿತ್ತು. ಲೋಕಾಪುರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ಆಂಬುಲೆನ್ಸ್ ನಲ್ಲಿ ಕಳುಹಿಸಲು ಕ್ರಮ ಕೈಗೊಂಡರು. 

ಲೋಕಾಪುರ ಆಸ್ಪತ್ರೆ ಸಿಬ್ಬಂದಿ ಗಾಯಾಳುವಿಗೆ ತುರ್ತು ಚಿಕಿತ್ಸೆಗೆ ಕೊಡಿಸುವಲ್ಲಿ ಮುತುವರ್ಜಿ ವಹಿಸಿದ್ದನ್ನು ಗಮನಿಸಿದ ಸಚಿವ ಲಾಡ್‌ ಅವರು, “ನಿಮ್ಮ ಸೇವೆಗೆ ಸೆಲ್ಯೂಟ್” ಎಂದು ಪ್ರಶಂಸೆ ವ್ಯಕ್ತಪಡಿಸಿದರು. 

ಗಾಯಾಳುವಿಗೆ ಅಗತ್ಯ ಚಿಕಿತ್ಸೆ ಕೊಡಿಸಿದ್ದೇ ಅಲ್ಲದೇ ಧೈರ್ಯ ಹೇಳಿದ ಸಚಿವ ಲಾಡ್‌ ಅವರು, ಇನ್ನು ಮುಂದೆ ಎಚ್ಚರಿಕೆ ವಹಿಸಬೇಕು ಎಂದು ಬುದ್ಧಿ ಹೇಳಿದರು. 

ಸಚಿವರ ಈ ಮಾನವೀಯತೆ ಮತ್ತು ಸಮಯಪ್ರಜ್ಞೆಗೆ ಜನರು ಹಾಗೂ ಗಾಯಾಳುವಿನ ಸಂಬಂಧಿಕರು ಕೃತಜ್ಞತೆ ತಿಳಿಸಿದ್ದಾರೆ.

Related Articles

Back to top button