
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ನರೇಗಾ ಯೋಜನೆ ಹಾಗೂ ಇಟ್ಟಿಗೆ ಬಟ್ಟಿಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರು ಪಡುತ್ತಿರುವ ಕಷ್ಟ ಮತ್ತು ಅವರ ಕೌಟುಂಬಿಕ ಸಮಸ್ಯೆಗಳನ್ನು ಕಂಡು, ಕೇಳಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅಕ್ಷರಶಃ ಕಣ್ಣೀರಾದರು.

ದೇಸೂರ್ ಪ್ರದೇಶದಲ್ಲಿ ಈ ಮೊದಲು 3 ಅಡಿ ಭೂಮಿಯನ್ನು ಅಗೆಯಲು ನಿರ್ಧರಿಸಲಾಗಿತ್ತು. ಈ ಪ್ರದೇಶದಲ್ಲಿ ಭೂಮಿ ಬಹಳ ಗಟ್ಟಿಯಾಗಿರುವದರಿಂದ ಈಗ ಅದನ್ನು 2 ಅಡಿಗೆ ಸೀಮಿತಗೊಳಿಸುವುದು ಸೇರಿದಂತೆ ಹಲವಾರು ಸಮಸ್ಯೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ ಲಕ್ಷ್ಮಿ ಹೆಬ್ಬಾಳಕರ್, ಅವುಗಳಿಗೆ ಪರಿಹಾರ ಒದಗಿಸುವಂತೆ ಸೂಚಿಸಿದರು.
ನಂತರ ಇಟ್ಟಿಗೆಗಳ ಬಟ್ಟಿಗೆ ತೆರಳಿ ಅಲ್ಲಿಯೂ ಮಹಿಳೆಯರು ಪಡುವಪಾಡನ್ನು ಹತ್ತಿರದಿಂದ ನೋಡಿದರು. ಈ ಮಹಿಳೆಯರಿಗೆ ಸರಕಾರದಿಂದ ಸಿಗಬಹುದಾದ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಶಾಸಕರು ಬಂದು ತಮ್ಮ ಕಷ್ಟಗಳನ್ನು ಆಲಿಸಿದ್ದಕ್ಕೆ ಕಾರ್ಮಿಕ ಮಹಿಳೆಯರು ಖುಷಿಯಾಗಿ, ಧನ್ಯವಾದ ಸಲ್ಲಿಸಿದರು. ಇದೇ ವೇಳೆ ಲಕ್ಷ್ಮಿ ಹೆಬ್ಬಾಳಕರ್ ಗಿಡವೊಂದನ್ನು ನೆಟ್ಟು ಪರಿಸರದ ಮಹತ್ವ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸ್ನೇಹಾ ಕುಂಬಾರ, ಸಂತೋಷ ಮರಗಾಳಿ, ಸತೀಶ್ ಚವ್ಹಾಣ, ಗಣಪತ್ ಪಾಟೀಲ, ಸಂಕೇತ ಪಾಟೀಲ, ವಿದ್ಯಾ ಮನವಾಡಕರ್, ನಿಖಿತಾ ಸುತಾರ, ಕವಿತಾ ಗುರವ, ಭರಮಾ ಸುತಾರ, ಶೋಭಾ ನಂದ್ಯಾಳಿ ಮುಂತಾದವರು ಉಪಸ್ಥಿತರಿದ್ದರು.