ವಿದ್ಯಾರ್ಥಿ ವೇತನ ವಿತರಣೆ, ಪೌರಕಾರ್ಮಿಕರ ಸನ್ಮಾನದೊಂದಿಗೆ ವಿಭೂತಿಪುರ ಮಠ ಶ್ರೀಗಳ ಜನ್ಮದಿನ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು :
ನಗರವಾಸಿಗಳ ಜನಜೀವನದ ಭಾಗವಾಗಿರುವ ಸ್ವಚ್ಛ ಭಾರತದ ನೈಜ ಶಿಲ್ಪಿಗಳಾದ ಪೌರಕಾರ್ಮಿಕರ ಸೇವೆ ಅಪಾರ ಎಂದು ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಶ್ರೀಮಠದಲ್ಲಿ ಹಮ್ಮಿಕೊಂಡಿದ್ದ ತಮ್ಮ 43ನೇ ಜನ್ಮದಿನೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಶ್ರೀಗಳು, ಸ್ವಚ್ಛತೆ ಬಗ್ಗೆ ಇತ್ತೀಚೆಗೆ ದೇಶದ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡುತ್ತಿದೆ. ಆದರೆ ಆ ದಿನಗಳಿಂದಲೂ ಸ್ವಚ್ಛತೆಯನ್ನು ಕಾಯಕವನ್ನಾಗಿ ಮಾಡುತ್ತಿರುವ ಪೌರಕಾರ್ಮಿಕರ ಸೇವೆಗೆ ಸರಿಸಾಟಿಯೇ ಇಲ್ಲ. ಪೌರಕಾರ್ಮಿಕರ ಗೌರವ ಹೆಚ್ಚಿಸುವ ನಿಟ್ಟಿನಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ್ ಯೋಜನೆ ಅಭಿನಂದನೀಯ ಎಂದು ತಿಳಿಸಿದರು.

ಶ್ರೀಗಳ ಜನ್ಮದಿನದ ಅಂಗವಾಗಿ ಭಕ್ತರಿಂದ ಗುರುವಂದನೆ ಸ್ವೀಕರಿಸಿದ ಡಾ.ಮಹಾಂತಲಿಂಗ ಸ್ವಾಮಿಗಳು; ಸಾರ್ವಜನಿಕ ಬದುಕಿನಲ್ಲಿರುವ ಯಾವುದೇ ವ್ಯಕ್ತಿಯ ಜನ್ಮದಿನವು ಖಾಸಗಿಯಾಗಿರುವುದಿಲ್ಲ. ಅದು ಸಾರ್ವತ್ರಿಕ ಆಚರಣೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಶ್ರೀಮಠದ ಸದ್ಭಕ್ತರು ಅತ್ಯಾಭಿಮಾನದಿಂದ ತಮ್ಮ ಜನ್ಮದಿನೋತ್ಸವವನ್ನು ಪ್ರತಿವರ್ಷ ಸಾರ್ವತ್ರಿಕರಣಗೊಳಿಸಿ ಆಚರಿಸುತ್ತಿದ್ದಾರೆ.

ಸಮಾಜದಲ್ಲಿ ಸೇವೆ ಮಾಡುವವರು ಮಾತ್ರ ಸಾರ್ವಜನಿಕವಾಗಿ ಗೌರವಾಧರಗಳಿಗೆ ಅರ್ಹರಾಗುತ್ತಾನೆ. ತಮ್ಮ ಜನ್ಮದಿನೋತ್ಸವನ್ನು ಸಾರ್ವಜನಿಕವಾಗಿ ಆಚರಿಸಲ್ಪಡುತ್ತಿರುವುದರಿಂದ ಸಾರ್ವಜನಿಕರಿಗೆ ಉಪಯುಕ್ತವಾಗುವ ಸೇವಾ ಕಾರ್ಯಗಳು ನಡೆಯಬೇಕೆಂಬುದು ನಮ್ಮ ಹಂಬಲ ಎಂದರು. ಈ ಹಿನ್ನೆಲೆಯಲ್ಲಿ ತಮ್ಮ ಜನ್ಮದಿನೋತ್ಸವದ ಅಂಗವಾಗಿ ಸಮಾರಂಭದಲ್ಲಿ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ 150 ಬಿಬಿಎಂಪಿ ಪೌರಕಾರ್ಮಿಕರಿಗೆ ಗುರುರಕ್ಷೆ ಸನ್ಮಾನ ಮಾಡಿ ಕುಟುಂಬಕ್ಕೊಂದರಂತೆ ಪ್ರೆಶರ್ ಕುಕ್ಕರನ್ನು ನೀಡಿ ಗೌರವಿಸಲಾಯಿತು.
ಶ್ರೀಗಳ ಜನ್ಮದಿನದ ಅಂಗವಾಗಿ ಕ್ಷೇತ್ರನಾಥ ವೀರಭದ್ರ ಸ್ವಾಮಿಗೆ ಮಹಾರುದ್ರಾಭಿಷೇಕದೊಂದಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.




