
ಪ್ರಗತಿವಾಹಿನಿ ಸುದ್ದಿ: ಮಹಿಳೆಯೊಬ್ಬರು ತನ್ನ 7 ತಿಂಗಳ ಹಸುಗೂಸಿನ ಮುಂದೆಯೇ ಆತ್ಮಹತ್ಯೆಗೆ ಶರಣಾಗಿರುವ ಘೋರ ಘಟನೆ ಬೆಂಗಳೂರಿನ ಪರಪ್ಪನ ಅಗ್ರಹಾರದ ರಾಯಸಂದ್ರ ಮನೆಯಲ್ಲಿ ನಡೆದಿದೆ.
ಸಾನಿಕಾ ಗೌಡ ಮಗುವಿನ ಮುಂದೆ ಆತ್ಮಹತ್ಯೆಗೆ ಶರಣಾದ ಮಹಿಳೆ. ಒಂದುವರೆ ವರ್ಷದ ಹಿಂದಷ್ಟೇ ಸಾನಿಕಾ ಶರಣ್ ಗೌಡ್ ಎಂಬಾತನನ್ನು ವಿವಾಹವಾಗಿದ್ದರು. ಬರ ಬರುತ್ತಾ ಪತಿ ಮಹಾಶಯ ಶರಣ್ ಗೆ ಬೇರೊಂದು ಮಹಿಳೆಯೊಂದಿಗೆ ಅಕ್ರಮ ಸಂಬಂಧವಿರುವುದು ಗೊತ್ತಾಗಿದೆ. ಇದೇ ಕಾರಣಕ್ಕೆ ಪತಿ-ಪತ್ನಿ ನಡುವೆ ಆಗಾಗ ಜಗಳವಾಗುತ್ತಿತ್ತು.
ಈ ನಡುವೆ ಸಾನಿಕಾ ಗರ್ಭಿಣಿಯಾಗಿ ಬಾಣಂತನಕ್ಕೆಂದು ತವರಿಗೆ ಬಂದಿದ್ದಳು. ಅತ್ತ ಪತಿಯ ಅಕ್ರಮ ಸಂಬಂಧ ಮುಂದುವರೆದಿದೆ. ಸಾನಿಕಾ ಮಗುವಿಗೆ ಜನ್ಮ ನೀಡಿ ಏಳು ತಿಂಗಳಾಗಿದ್ದರೂ ಪತಿ ಮಹಾಶಯ ಹೆಂಡತಿ-ಮಗುವನ್ನು ಮನೆಗೆ ಕರೆದೊಯ್ಯುವ ಯೋಚನೆ ಮಾಡಿಲ್ಲ. ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಸಾನಿಕಾ ಮನನೊಂದು ಮಗುವಿನ ಮುಂದೆಯೇ ತವರಿನಲ್ಲಿ ನೇಣಿಗೆ ಕೊರಳೊಡ್ಡಿದ್ದಾರೆ.
ಸಾವಿಗೂ ಮುನ್ನ ಸಾನಿಕಾ, ಪತಿ ಶರಣ್ ಗೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದರು. ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನ ಅಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

