*ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟ ನಾಗೇಂದ್ರ ಅಧಿಕೃತವಾಗಿ ರಾಜೀನಾಮೆ ಘೋಷಣೆ*

ಪ್ರಗತಿವಾಹಿನಿ ಸುದ್ದಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಆರೋಪ ಬೆನ್ನಲ್ಲೇ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ನಾಗೇಂದ್ರ, ವಾಲ್ಮೀಕಿ ಹಗರಣದಲ್ಲಿ ನಾನು ಭಾಗಿಯಾಗಿಲ್ಲ. ನಾನು ಯಾವುದೇ ಅಕ್ರಮ ಮಾಡಿಲ್ಲ. ಆದರೆ ವಿಪಕ್ಷಗಳು ಒಬ್ಬ ಆದಿವಾಸಿ ಮಂತ್ರಿಯಾಗಬಾರದು ಎಂಬ ಕಾರಣಕ್ಕೆ ಕುತಂತ್ರ ರಾಜಕಾರಣ ಮಾಡುತ್ತಿದ್ದಾರೆ. ಇಂತಹ ಮನುವಾದಿಗಳಿಗೆ ಒಳ್ಳೆಯದಾಗಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಾಲ್ಮೀಕಿ ನಿಗಮದಲ್ಲಿ ಹಗರಣವಾಗಿಲ್ಲ ಆದರೂ ಮನುವಾದಿಗಳಾಗಿರುವ ವಿಪಕ್ಷದವರು ಹಗರಣವಾಗಿದೆ ಎಂದು ಸುಳ್ಳು ಹೇಳಿ ರಾಜ್ಯದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಪದೇ ಪದೇ ಸುಳ್ಳು ಹೇಳಿ ಸುಳ್ಳನ್ನು ನಿಜ ಮಾಡಲು ಹೊರಟಿದ್ದಾರೆ. ನಾನು ಯಾವ ತಪ್ಪು ಮಾಡಿಲ್ಲ ಎಂಬುದನ್ನು ಜಗಜ್ಜಾಹೀರು ಮಾಡುತ್ತೇನೆ ಇದು ವಿಪಕ್ಷಗಳಿಗೆ ನಾನು ಹಾಕುತ್ತಿರುವ ಸವಾಲು. ನಿಗಮದಲ್ಲಿ ಆಗಿರದ ಹಗರಣವನ್ನು ಆಗಿದೆ ಎಂದು ಹೇಳಿ ವಿಪಕ್ಷಗಳು ಮುಗ್ದ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ. ಅವರಿಗೊಂದು ನ್ಯಾಯ, ನನಗೊಂದು ನ್ಯಾಯವೇ? ಎಂದು ಭಾವುಕರಾಗಿ ಕಣ್ಣೀರಿಟ್ಟರು.
ನಾನು ಈ ಹಿಂದೆ ಕೂಡ ಮನುವಾದಿಗಳ ಕುತಂತ್ರದಿಂದ ಜೈಲಿಗೆ ಹೋದೆ. ಬಳಿಕ ಜಾಮೀನು ಪಡೆದು ಹೊರಬಂದೆ. ಈ ಹಿಂದೆ ಕೂಡ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ನಾನು ಸಂವಿಧಾನಕ್ಕೆ ತಲೆ ಬಾಗುತ್ತೇನೆ. ನನ್ನಿಂದ ಯಾವುದೇ ಹಗರಣವಾಗಿಲ್ಲ ವಾಲ್ಮೀಕಿ ನಿಗಮದ ಹಣವನ್ನು ನಾನು ಒಂದು ರೂಪಾಯಿ ದುರಪಯೊಗ ಮಾಡಿಲ್ಲ ಎಂದರು.
ನನ್ನಿಂದ ಪಕ್ಷಕ್ಕೆ ಮುಜುಗರವಾಗಬಾರದು, ಸಿಎಂ ಡಿ.ಕೆ.ಶಿವಕುಮಾರ್ ಅವರ ಸರ್ಕಾರಕ್ಕೆ ಹಿನ್ನಡೆಯಾಗಬಾರದು ಎಂಬ ಕಾರಣಕ್ಕೆ ಸ್ವ ಇಚ್ಛೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದರು.



