Cancer Hospital 2
Bottom Add. 3

ಕುಖ್ಯಾತ ಹುಲಿ ಭೇಟೆಗಾರ ಚಿಕಾ ಖಾನಾಪುರ ಅರಣ್ಯಾಧಿಕಾರಿಗಳ ಬಲೆಗೆ

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಮಹತ್ವದ ಕಾರ್ಯಾಚರಣೆಯಲ್ಲಿ ಕುಖ್ಯಾತ ಹುಲಿ ಬೇಟೆಗಾರ ಚಿಕಾ ಅಲಿಯಾಸ್ ಕೃಷ್ಮಾ ಪಟ್ಲೆಪವಾರ್ ಎಂಬುವವನನ್ನು ಬೆಳಗಾವಿ ಅರಣ್ಯ ವಿಭಾಗದ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ಇದೇ ವರ್ಷ ಜುಲೈ ತಿಂಗಳಿನಲ್ಲಿ ಬೆಳಗಾವಿ ವಿಭಾಗದ ಖಾನಾಪುರ ತಾಲೂಕಿನ ಖಾನಾಪುರ ಪ್ರಾದೇಶಿಕ ಅರಣ್ಯ ವಲಯದ ಜಳಗಾ ಎಂಬಲ್ಲಿ ಶ್ರೀಗಂಧ ಮರಗಳ ಕಳ್ಳತನವಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಖಾನಾಪುರ ಉಪ ವಿಭಾಗದ ಅರಣ್ಯಾಧಿಕಾರಿಗಳು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು.

ಕೆಲ ದಿನಗಳ ಹಿಂದೆ ಆರೋಪಿಗಳು ಬೆಳಗಾವಿ ನಗರದ ಕಣಬರ್ಗಿ ಬಳಿಯ ಕಲಕಾಂಬ ಬಳಿ ಅಡಗಿದ್ದರೆಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಖಾನಾಪುರ ವಲಯದ ಅಧಿಕಾರಿ ಹಾಗೂ ಸಿಬ್ಬಂದಿಗಳ ತಂಡ ಟೆಂಟ್ ಒಂದರ ಮೇಲೆ ದಾಳಿ ನಡೆಸಿದಾಗ ಟೆಂಟಿನಲ್ಲಿ ಶ್ರೀಗಂಧ ತುಂಡುಗಳು ಹಾಗೂ ಹರಿತವಾದ ಆಯುಧಗಳನ್ನು ವಶಪಡಿಸಿಕೊಂಡಿತ್ತು ಹಾಗೂ ವ್ಯಕ್ತಿಯೋರ್ವನನ್ನು ಬಂಧಿಸಿದ್ದರು.

ಬಂಧಿತನು ಮೂಲತಃ ಮಧ್ಯಪ್ರದೇಶದವನೆಂದು ತಿಳಿದು ಅನುಮಾನಗೊಂಡು ತೀವ್ರ ವಿಚಾರಣೆ ನಡೆಸಿದ ಖಾನಾಪುರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಾ ಸಂತೋಷ್ ಚವ್ಹಾಣ್‌ ನೇತೃತ್ವದ ತಂಡ ಬಂಧಿತನು ಮಧ್ಯಪ್ರದೇಶದ ದಾಮೋ ಜಿಲ್ಲೆಯ ಸಗೋನಿ ಗ್ರಾಮದ ಚಿಕಾ ಅಲಿಯಾಸ್ ಕೃಷ್ಕಾ ಪಟ್ಲೆಪವಾರ್ ಎಂದೂ ಹಾಗೂ ಈತ ದೇಶದ ಕುಖ್ಯಾತ ಹುಲಿ ಬೇಟೆಗಾರ ಎಂಬುದು ಗೊತ್ತಾಗಿದೆ.

ಆರೋಪಿತನ ಮೇಲೆ ಈಗಾಗಲೇ ಮಹಾರಾಷ್ಟ್ರ ರಾಜ್ಯದ ಅಮರಾವತಿ ಜಿಲ್ಲೆಯ ಮೇಲಘಾಟ್ ಅರಣ್ಯದಲ್ಲಿ ಹುಲಿ, ಕರಡಿಗಳನ್ನು ಬೇಟೆಯಾಡಿರುವ ಪ್ರಕರಣಗಳಿವೆ ಹಾಗೂ ಕೆಲ ವರ್ಷಗಳ ಹಿಂದೆ ಮೃತಪಟ್ಟ ಕುಖ್ಯಾತ ಹುಲಿ ಬೇಟೆಗಾರ ಸಂಸಾ‌ ಚಂದ್ ತಂಡದ ಸದಸ್ಯನೆಂದು ಗೊತ್ತಾಗಿದೆ.

ಈ ಕಾರ್ಯಾಚರಣೆಯನ್ನು ಬೆಳಗಾವಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಚವ್ಹಾಣ್ ಮಾರ್ಗದರ್ಶನದಲ್ಲಿ ಬೆಳಗಾವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಂಕರ್‌ ಕಲ್ಲೋಳಿಕರ್ ನೇತೃತ್ವದಲ್ಲಿ, ಖಾನಾಪುರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್‌ ಚವ್ಹಾಣ್, ಖಾನಾಪುರ ಪ್ರಾದೇಶಿಕ ಅರಣ್ಯ ವಲಯದ ವಲಯ ಅರಣ್ಯಾಧಿಕಾರಿ ನಾಗರಾಜ್‌ ಬಾಲೇಹೊಸೂರ್ ಹಾಗೂ ಸಿಬ್ಬಂದಿಗಳ ನೇತೃತ್ವದ ತಂಡ ನಡೆಸಿದ್ದಾರೆ.

ಪ್ರಕರಣದ ಕುರಿತು ಮಹಾರಾಷ್ಟ್ರ ರಾಜ್ಯದ ಅರಣ್ಯ ಇಲಾಖೆ ಹಾಗೂ ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೋ ಜೊತೆಗೆ ಸಂವಹನ ಸಾಧಿಸಿ ವಿವರವಾದ ತನಿಖೆ ನಡೆಸುವಂತೆ ಹಾಗೂ ಶೀಘ್ರ ವರದಿ ಸಲ್ಲಿಸುವಂತೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಉಪ ಅರಣ್ಯ ಮಹಾ ನಿರೀಕ್ಷಕ ರಾಜೇಂದ್ರ ಗಾರವಾಡ ರವರು ಸಹ ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಸೂಚಿಸಿದ್ದು ಹಿರಿಯ ಅಧಿಕಾರಿಗಳ ಸೂಚನೆ ಹಾಗೂ ಮಾರ್ಗದರ್ಶನದ ಮೇರೆಗೆ ವಿಚಾರಣೆ ಪ್ರಗತಿಯಲ್ಲಿದೆ.

Bottom Add3
Bottom Ad 2

You cannot copy content of this page