Belagavi NewsBelgaum NewsKarnataka NewsPolitics

*ಯಾವ ಜಾತಿಗೂ ಅನ್ಯಾಯ ಆಗಬಾರದು ಎಂಬುದು ನಮ್ಮ ಉದ್ದೇಶ: ಸಿಎಂ ಸಿದ್ದರಾಮಯ್ಯ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಂವಿಧಾನ ಜಾರಿಯಾಗಿ 75 ವರ್ಷ ಆಯ್ತು. 75 ವರ್ಷಗಳಲ್ಲಿ ಬಡವರು ಬಡವರಾಗಿಯೇ ಉಳಿಯಬೇಕಾ..? ಎಲ್ಲರಿಗೂ ಸಮಾನತೆ ಬರಬೇಕು. ಇನ್ನೂ ಜಾತಿಗೆ ಅಂಟಿಕೊಂಡೇ ಇರಬೇಕಾ.‌? ಮುಸ್ಲಿಂರು, ಹಿಂದುಳಿದವರು ಸೇರಿ ಎಲ್ಲ ಜಾತಿಯವರಿಗೆ ಶಿಕ್ಷಣ ಸಿಗಬೇಕಾ ಬೇಡವಾ..? ಅವರಿಗೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಶಕ್ತಿ ತುಂಬಬೇಕೋ ಬೇಡವೋ ಎಂದು ಪ್ರಶ್ನಿಸುವ ಮೂಲಕ ಜಾತಿ ಗಣತಿ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡರು.

ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಯಾವ ಜಾತಿಗೂ ಅನ್ಯಾಯ ಆಗಬಾರದು ಎಂಬುದು ನಮ್ಮ ಉದ್ದೇಶ. ಲಿಂಗಾಯತ, ಬ್ರಾಹ್ಮಣ, ಒಕ್ಕಲಿಗ, ಜೈನರು ಸೇರಿ ಯಾರಿಗೂ ಅನ್ಯಾಯ ಆಗಬಾರದು. ಹಾಗಾಗಿ, ಇದು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಎಂದು ಸಮರ್ಥಿಸಿಕೊಂಡರು.

ಜಾತಿಗಣತಿ ವರದಿ ಜಾರಿ ವಿಚಾರಕ್ಕೆ ರಾಹುಲ್ ಗಾಂಧಿ ತಮಗೆ ಪತ್ರ ಬರೆದಿದ್ದಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ನನಗೆ ಯಾವ ಪತ್ರವನ್ನು ಬರೆದಿಲ್ಲ. ಆದರೆ, ಅವರ ಜೊತೆಗೆ ಚರ್ಚಿಸಿದ್ದೇನೆ. ಚರ್ಚೆ ಮಾಡಿ, ಅವರ ಒಪ್ಪಿಗೆಯನ್ನು ಪಡೆದುಕೊಂಡೇ ವರದಿ ಮಂಡಿಸಿದ್ದೇನೆ. ರಾಹುಲ್ ಗಾಂಧಿ ಒಪ್ಪಿಗೆ ಇಲ್ಲದೇ ಮಾಡಲು ಆಗುತ್ತದೆಯೇ..? ಎಂದು ಸ್ಪಷ್ಟಪಡಿಸಿದರು.

ಜಾತಿ ಗಣತಿ ಮೂಲ ಪ್ರತಿ ನಿಮ್ಮ ಮನೆಯಲ್ಲಿದೆ ಈಗ ಬಂದಿರುವುದು ಬೇರೆ ಎಂಬ ಆರ್.ಅಶೋಕ ಆರೋಪಕ್ಕೆ ಅಶೋಕ ಯಾವತ್ತು ಸತ್ಯ ಹೇಳಿದ್ದಾನೆ. ಬಿಜೆಪಿಯವರು ಸುಳ್ಳೆ ಹೇಳುವುದು. ಮೂಲ ಪ್ರತಿ ನಮ್ಮತ್ರ ಇರಲು ಹೇಗೆ ಸಾಧ್ಯವಾಗುತ್ತದೆ. ಮೊನ್ನೆ ಸಂಪುಟ ಸಭೆಯಲ್ಲಿ ಶೀಲ್ಡ್ ಕವರ್ ನಲ್ಲಿತ್ತು. ಅದನ್ನು ಎಲ್ಲ ಸಚಿವರ ಎದುರಿಗೆ ತೆರೆದಿದ್ದೇವೆ. ಅಶೋಕ ಮತ್ತು ಬಿಜೆಪಿಯವರು ಸುಳ್ಳನ್ನೆ ಸತ್ಯ ಮಾಡುವುದು. ಸತ್ಯವನ್ನೆ ಸುಳ್ಳು ಮಾಡುವುದು. ಅದು ಅವರ ಕಸಬು. ಇದನ್ನು ಅವರಿಗೆ ಆರ್ ಎಸ್ಎಸ್ ಹೇಳಿ ಕೊಟ್ಟಿದೆ ಎಂದು ತಿರುಗೇಟು ಕೊಟ್ಟರು.

Home add -Advt

ಜಾತಿ ಗಣತಿ ವರದಿ ಸಂಬಂಧ ಸಂಪುಟ ಸಭೆಯಲ್ಲಿ ಯಾರೂ ವಿರೋಧ ಮಾಡಿಲ್ಲ. ಅಲ್ಲದೇ ಜೋರಾಗಿಯೂ ಮಾತನಾಡಿಲ್ಲ. ನಿಮ್ಮ ಅಭಿಪ್ರಾಯ ಹೇಳುವಂತೆ ತಿಳಿಸಿದ್ದೇನೆ. ಅವರು ಅಭಿಪ್ರಾಯ ನೀಡಿದ ಬಳಿಕ ಸಂಪುಟ ಸಭೆಯಲ್ಲಿ ಮತ್ತೊಮ್ಮೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಮೊನ್ನೆ ಯಾವುದೇ ನಿರ್ಧಾರ ಆಗಿಲ್ಲ ಎಂದರು.

ಲಿಂಗಾಯತರು ಮತ್ತು ಒಕ್ಕಲಿಗರ ಜನಸಂಖ್ಯೆ ಕಡಿಮೆ ತೋರಿಸಿದಿರಿ ಎಂಬ ಮಾಧ್ಯಮಗಳ ಪ್ರಶ್ನೆಗೆ ಮೆರಿಟ್ ಮೇಲೆ ನಾನು ಮಾತನಾಡಲು ಹೋಗಲ್ಲ. ಮುಂದಿನ ಸಂಪುಟ ಸಭೆಯಲ್ಲಿ ಮಾತನಾಡುತ್ತೇನೆ. ಈಗ ಅಭಿಪ್ರಾಯ ಕೇಳಿದ್ದೇನೆ ಅಷ್ಟೇ. ಯಾರದ್ದೂ ವಿರೋಧ ಇಲ್ಲ. ಒಬ್ಬರಿಗೊಬ್ಬರು ಮಾತನಾಡಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

Related Articles

Back to top button