Belagavi NewsBelgaum NewsElection NewsKannada NewsKarnataka NewsPolitics

ಕೇಂದ್ರ ಸರ್ಕಾರದ ಮಲತಾಯಿ ಧೋರಣೆಗೂ ಬಗ್ಗಿಲ್ಲ ನಮ್ಮ ಸರ್ಕಾರ : ಲಕ್ಷ್ಮೀ ಹೆಬ್ಬಾಳಕರ್* 

* *ಬರದ ನಡುವೆಯೂ ಜನರ ಆಶೋತ್ತರಗಳಿಗೆ ಸ್ಪಂದನೆ* 

ಪ್ರಗತಿವಾಹಿನಿ ಸುದ್ದಿ, *ಬೆಳಗಾವಿ* : ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ನಡುವೆಯೂ ಕರ್ನಾಟಕ ಸರ್ಕಾರ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿದೆ‌. ಬಡ ಜನರಿಗೆ ನೀಡುವ ಅಕ್ಕಿಯಲ್ಲೂ ಪ್ರಧಾನಿ ಮೋದಿ ರಾಜಕೀಯ ಮಾಡಿದರು. ಇದಕ್ಕೆ ಬಗ್ಗದ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅಕ್ಕಿ ಬದಲಿಗೆ ಹಣ ನೀಡುವ ಮೂಲಕ ಜನರಿಗೆ ನೆರವಾಗುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. 

ಬೆಳಗಾವಿ ಉತ್ತರ ಕ್ಷೇತ್ರದ ಕಂಜರಗಲ್ಲಿ, ಬೆಳಗಾವಿ ದಕ್ಷಿಣ ಕ್ಷೇತ್ರದ ಚನ್ನಮ್ಮ ನಗರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳ್ಕರ್ ಪರ ಪ್ರಚಾರ ನಡೆಸಿದ ಸಚಿವರು, ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು. 

2014ರಲ್ಲಿ‌ ಅಧಿಕಾರಕ್ಕೆ ಬರುವುದಕ್ಕೂ ಮುಂಚೆ ರೈತರಿಗೆ ನೂರೆಂಟು ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಜನರ ಸಮಸ್ಯೆಗಳನ್ನು ಈಡೇರಿಸಲು ಸಂಪೂರ್ಣ ವಿಫಲರಾಗಿದ್ದಾರೆ. ರೈತರ ಆದಾಯ ದುಪ್ಪಟ್ಟು ಮಾಡಲಾಗುವುದು, ‌ಗೊಬ್ಬರದ ಮೇಲೆ‌ ಇಳಿಸಲಾಗುವುದು ಎಂದು ಭರವಸೆ ನೀಡಲಾಗಿತ್ತು. ಆದರೆ, ಒಂದೇ ಒಂದು ಭರವಸೆಯನ್ನೂ ಈಡೇರಿಸಲು ಸಾಧ್ಯವಾಗದೇ ಜನರನ್ನು ವಂಚಿಸುತ್ತಿದ್ದಾರೆ ಎಂದು‌ ಸಚಿವರು‌ ಹೇಳಿದರು. 

ಜನರ ಮನಸ್ಸನ್ನು ಪ್ರೀತಿಯಿಂದ ಗೆಲ್ಲಬೇಕು. ನಾಯಕ ಎನಿಸಿಕೊಂಡವರು ಎಲ್ಲರನ್ನೂ ಪ್ರೀತಿಯಿಂದ ಕಾಣಬೇಕು. ಬದಲಿಗೆ ಧಮ್ಕಿ ಹಾಕಿಕೊಂಡು ರಾಜಕೀಯ ಮಾಡಬಾರದು. ಜನರ ಪ್ರೀತಿಗೆ ಪಾತ್ರರಾಗಿದ್ದಕ್ಕೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರಿಂದ ಎರಡನೇ ಬಾರಿಗೆ 56 ಸಾವಿರ ಮತಗಳ ಅಂತರದಿಂದ ಆಯ್ಕೆ‌ಆದೆ. ನನ್ನ ಹಾಗೆಯೇ ನನ್ನ ಮಗ ಕೂಡ ಜನರ‌ ಆಶೋತ್ತರಗಳಿಗೆ ಸ್ಪಂದಿಸಲಿದ್ದಾನೆ ಎಂದು ಸಚಿವರು ಹೇಳಿದರು. 

ಕಾಂಗ್ರೆಸ್ ಪಕ್ಷದವರು ನಿಜವಾದ ದೇಶ ಭಕ್ತರು. ದೇಶಕ್ಕಾಗಿ ಇಬ್ಬರು ಪ್ರಧಾನಿಗಳಾದ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಪ್ರಾಣ ತ್ಯಾಗ ಮಾಡಿದ್ದಾರೆ. ಬಿಜೆಪಿಯವರಿಂದ ದೇಶಭಕ್ತಿ ಪಾಠವನ್ನು ಯಾರೂ ಕಲಿಯುವ ಅವಶ್ಯಕತೆ ಇಲ್ಲ. ಎಲೆಕ್ಟೋರಲ್ ಬಾಂಡ್ ಹಗರಣ ಇತಿಹಾಸದಲ್ಲೇ ಕಂಡು‌ ಕೇಳರಿಯದ ಹಗರಣವಾಗಿದೆ. ಇಂಥ ಸರಕಾರವನ್ನ ಕಿತ್ತೋಗೆಯಬೇಕು  ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕರೆ ನೀಡಿದರು.

 *ಯಾರಿಗೂ ಹೆದರುವ ಅವಶ್ಯಕತೆ ಇಲ್ಲ* 

ಕಾಂಗ್ರೆಸ್ ಸಭೆ ಸಮಾರಂಭಗಳಿಗೆ ಆಗಮಿಸುವ ಕಾರ್ಯಕರ್ತರನ್ನು ಬೆದರಿಸುವ ಕೆಲಸ‌ ಆಗುತ್ತಿದೆ. ಕೆಲವೊಂದು ಏರಿಯಾಗಳಲ್ಲಿ ಜನರಿಗೆ ಬೆದರಿಕೆ ಹಾಕಲಾಗುತ್ತಿದೆ. ನಾವು ಯಾವುದೇ ಬೆದರಿಕೆಗಳಿಗೆ ಅಂಜುವುದಿಲ್ಲ ಎಂದು ಸಚಿವರು ಎಚ್ಚರಿಕೆ ನೀಡಿದರು.

ಈ ವೇಳೆ ಮಾಜಿ ಶಾಸಕ ಫಿರೋಜ್ ಸೇಠ್, ಶಾಸಕ ರಾಜು ಸೇಠ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್, ಮಾಜಿ ಶಾಸಕ ರಮೇಶ್ ಕುಡಚಿ, ಸ್ವಾತಂತ್ರ್ಯ ಹೋರಾಟಗಾರ ರಾಜೇಂದ್ರ ಕಲಘಟಗಿ, ನಗರ ಪಾಲಿಕೆಯ ಮಾಜಿ ಸದಸ್ಯರಾದ ರಾಜೇಂದ್ರ ಹುಲಬತ್ತೆ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಧ್ಯಕ್ಷರಾದ ಕಿರಣ್ ಪಾಟೀಲ್, ಸರಳಾ ಸಾತ್ಪುತೆ, ಶೀತಲ್ ದಳವಿ, ವಿಶಾಲ್ ಕುಡ್ತೆ, ರಾಮ್ ಮಾನೆ,  ಮುಜಮೀಲ ಡೋಣಿ, ಅಪ್ರೋಸ್ ಮುಲ್ಲಾ, ಕಲೀಂ ಮುಲ್ಲಾ, ಸೊಯೆಲ್ ಸಂಗೋಳ್ಳಿ, ರೇಷ್ಮಾ ಬೈರಕದಾರ, ಅನ್ವರ್ ಪಠಾಣ್, ನಾಸೀರ್ ಪಠಾಣ್, ಸಹೀದಾ ಖಾನ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button