*ಎರಡು ಬೈಕ್ ಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ ಪಾಗಲ್ ಪ್ರೇಮಿ*

ಪ್ರಗತಿವಾಹಿನಿ ಸುದ್ದಿ: ಪಾಗಲ್ ಪ್ರೇಮಿಯೊಬ್ಬ ಎರಡು ಬೈಕ್ ಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
ಶಿವಮೊಗ್ಗದ ವೆಂಕಟೇಶ ನಗರದಲ್ಲಿ ಈ ಘಟನೆ ನಡೆದಿದೆ. ಮಂಡ್ಯ ಮೂಲದ ಮಣಿ ಬೈಕ್ ಗೆ ಬೆಂಕಿ ಹಚ್ಚಿರುವ ಆರೋಪಿ. ಮಣಿ ವೆಂಕಟೇಶ ನಗರದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಇಬ್ಬರೂ ಇನ್ ಸ್ಟಾಗ್ರಾಮ್ ಮೂಲಕ ಪರಿಚಯವಾಗಿ ಪರಸ್ಪರ ಪ್ರೀತಿಸುತ್ತಿದ್ದರು. ಮಂಡ್ಯದಿಂದ ಶಿವಮೊಗ್ಗಕ್ಕೆ ಬಂದು ಮಣಿ ನೆಲೆಸಿದ್ದ. ಆದರೆ ಮಣಿ ದುಶ್ಚಟಕ್ಕೆ ದಾಸನಾಗಿದ್ದರಿಂದ ಯುವತಿ ಆತನ್ನು ನಿರ್ಲಕ್ಷಿಸಿದ್ದಳು.
ಅಂಥೋಣಿದಾಸ್ ಎಂಬಾತನ ಜೊತೆ ಯುವತಿಗೆ ನಿಶ್ಚಿತಾರ್ಥವಾಗಿದೆ. ತಾನು ಪ್ರೀತಿಸಿದ ಯುವತಿ ಬೇರೊಬ್ಬನ ಯುವಕನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಕ್ಕೆ ಮಣಿ, ಅಂಥೋಣಿದಾಸ್ ಹಾಗೂ ಯುವತಿಯ ಸಹೋದರ ಇಬ್ಬರ ಬೈಕ್ ಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಕುರಿತು ಬೈಕ್ ಮಾಲೀಕ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಅನ್ವಯ ಪೊಲೀಸರು ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿ ಮಣಿಯನ್ನು ಬಂಧಿಸಿದ್ದಾರೆ.



