
ವಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
ಪ್ರಗತಿವಾಹಿನಿ ಸುದ್ದಿ: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಹಿನ್ನಡೆಯಾದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಮಹಿಳೆಯರ ಕ್ಷಮೆಯಾಚಿಸಿದ್ದಾರೆ.
ಮಹಿಳಾ ಮೀಸಲಾತಿ ಮಸೂದೆ ಸೀಲಿನ ಬಳಿಕ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ನಾನು ಮಹಿಳೆಯರು, ತಾಯಂದಿರ ಜೊತೆ ಮಾತನಾಡಲು ಬಂದಿದ್ದೇನೆ. ದೇಶದ ಮಹಿಳೆಯರ ಹಿತ ಕಾಯಲು ಮಹಿಳಾ ಮೀಸಲಾತಿ ಬಿಲ್ ತರಲಾಗಿತ್ತು. ಆದರೆ ವಿಪಕ್ಷಗಳು ಮಸೂದೆಯನ್ನು ಸಂಸತ್ತಿನಲ್ಲಿ ಸೋಲಿಸಿದವು, ಮಹಿಳಾ ಬಿಲ್ ತಡೆದು ವಿಪಕ್ಷಗಳು ಪಾಪ ಮಾಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಸೂದೆಯನ್ನು ಸೋಲಿಸಿ ವ್ಪಕ್ಷಗಳು ಸಂಭ್ರಮಿಸುತ್ತಿದ್ದವು. ಇದು ಮಹಿಳೆಯರ ಸ್ವಾಭೀಮಾನಕ್ಕೆ ನೀಡಿದ ಪೆಟ್ಟು. ಕಾಂಗ್ರೆಸ್, ಟಿಎಂಸಿ, ಡಿಎಂಕೆ ಸೇರಿದಂತೆ ವಿಪಕ್ಷಗಳು ಬಿಲ್ ಪಾಸ್ ಮಾಡಲು ಅಡ್ಡಿಪಡಿಸಿ ತಪ್ಪು ಮಾಡಿವೆ ಎಂದರು.
40 ವರ್ಷಗಳಿಂದ ಮಹಿಳೆಯರ ಹಕ್ಕುಗಳನ್ನು ಕಸಿಯಲು ಯತ್ನಿಸಿದರು. ಆದರೆ ನಾವು ಮಹಿಳೆಯರ ಸಬಲೀಕರಣಕ್ಕಾಗಿ ಮಸೂದೆಯನ್ನು ತಂದಿದ್ದೆವು. ಈ ನಾರಿ ಶಕ್ತಿ ತಿದ್ದುಪಡಿ ಮಸೂದೆ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಎಲ್ಲರಿಗೂ ಶಕ್ತಿ ಕೊಡುತ್ತಿತ್ತು. ಆದರೆ ನಮ್ಮ ಪ್ರಾಮಾಣಿಕ ಪ್ರಯತ್ನವನ್ನು ವಿಪಕಷಗಳು ಹತ್ಯೆ ಮಾಡಿವೆ. ಕಾಂಗ್ರೆಸ್, ಟಿಎಂಸಿ, ಡಿಎಂಕೆಯಂತಹ ಪಕ್ಷಗಳು ಭ್ರೂಣ ಹತ್ಯೆ ಮಾಡಿವೆ. ಮಹಿಳಾ ಮೀಸಲಾತಿ ಬಿಲ್ ಸೋಲಿಸಿ ವಿಪಕ್ಷಗಳು ಮಹಿಳೆಯರಿಗೆ ಅಪಮಾನ ಮಾಡಿವೆ. ಮಹಿಳೆಯರಿಗೆ ಮಾಡಿದ ಅಪಮಾನಕ್ಕೆ ವಿಪಕ್ಷಗಳು ತಕ್ಕ ಪಾಠ ಕಲಿಯಲಿದ್ದಾರೆ. ಇದರ ಪರಿಣಾಮವನ್ನು ಶೀಘ್ರವೇ ಅನುಭವಿಸಲಿದ್ದಾರೆ ಎಂದು ಕಿಡಿಕಾರಿದರು.
ಸುಧಾರಣೆಯಾಗುವುದನ್ನು ಕಾಂಗ್ರೆಸ್ ಯಾವತ್ತೂ ವಿರೋಧಿಸುತ್ತಾ ಬಂದಿದೆ.ಕಾಂಗ್ರೆಸ್ ಜಿಎಸ್ ಟಿ, ಆರ್ಟಿಕಲ್ 370 ರದ್ದತಿಯಲ್ಲೂ ವಿರೋಧಿಸಿತ್ತು. ಕಾಂಗ್ರೆಸ್ ಯಾವಾಗಲೂ ನೆಗೆಟಿವ್ ರಾಜಕಾರಣದ ದಾರಿಯಲ್ಲಿರುತ್ತದೆ ಕಾಂಗ್ರೆಸ್ ನ ಈ ನೀತಿಯಿಂದಲೇ ಭಾರತ ಅಭಿವೃದ್ಧಿಯಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.
ಮಹಿಳಾ ಮೀಸಲಾತಿ ಮಸೂದೆ ಹಿನ್ನಡೆಯಿಂದಾಗಿ ದೇಶದ ಮಹಿಳೆಯರು ಇಂದು ದುಃಖದಲ್ಲಿದ್ದಾರೆ. ವಿಪಕ್ಷಗಳಿಗೆ ಮಹಿಳೆಯರ ಮೀಸಲಾತಿ ಬೇಕಾಗಿಲ್ಲ. ಕಾಂಗ್ರೆಸ್ ಹಾಗೂ ವಿಪಕ್ಷಗಳಿಗೆ ಒಡೆದು ಆಳುವುದು ಬೇಕು. ಕಾಂಗ್ರೆಸ್ ನ ಒಡೆದು ಆಳುವ ನೀತಿ ಹೊಸದೇನಲ್ಲ. ದೇಶ ಅಭಿವೃದ್ಧಿಯಾಗುವ ಯಾವುದೇ ಕೆಲಸವನ್ನು ಕಾಂಗ್ರೆಸ್ ಸಹಿಸಲ್ಲ. ದೇಶದ ಮಹಿಳೆಯರು ಯಾವತ್ತೂ ಕಾಂಗ್ರೆಸ್ ಹಾಗೂ ವಿಪಕ್ಷಗಳ ಈ ನಡೆಯನ್ನು ಕ್ಷಮಿಸುವುದಿಲ್ಲ ಎಂದು ಗುಡುಗಿದರು.



