*ಇದು ಮಹಿಳಾ ಸಬಲೀಕರಣದ ಐತಿಹಾಸಿಕ ಹೆಜ್ಜೆ: ಮಹಿಳಾ ಮೀಸಲಾತಿ, ಕ್ಷೇತ್ರ ವಿಂಗಡಣೆ ಕುರಿತು ಪ್ರಧಾನಿ ಮೋದಿ ಮಾತು*

ಪ್ರಗತಿವಾಹಿನಿ ಸುದ್ದಿ: ಇಂದಿನಿಂದ ಮೂರು ದಿನಗಳ ಕಾಲ ಆರಂಭವಾಗಿರುವ ಸಂಸತ್ ವಿಶೇಷ ಅಧಿವೇಶನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಸಂವಿಧಾನ (131 ನೇ ತಿದ್ದುಪಡಿ) ಮಸೂದೆ, ಕೇಂದ್ರ ಪ್ರದೇಶಗಳ ಕಾನೂನುಗಳು (ತಿದ್ದುಪಡಿ) ಮಸೂದೆ ಮತ್ತು ಲೋಕಸಭಾ ಕ್ಷೇತ್ರ ಪುನರ್ವಿಂಗಡಣೆ ನಿರ್ಣಯ ಮಸೂದೆಯೊಂದಿಗೆ ಮಹಿಳಾ ಮೀಸಲಾತಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದೆ. 3 ಪ್ರಮುಖ ಮಸೂದೆಗಳ ಮೇಲೆ ನಾಳೆ ಸಂಜೆ 4 ಗಂಟೆಗೆ ಲೋಕಸಭೆಯಲ್ಲಿ ಮತದಾನ ನಡೆಯಲಿದೆ.
ಮೂರು ಮಸೂದೆ ಮಂಡನೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಸಂಸತ್ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಮೂರು ಮಸೂದೆಗಳನ್ನು ಪ್ರಧಾನಿ ಮೋದಿ ಸಮರ್ಥಿಸಿಕೊಂಡಿದ್ದಾರೆ. ಕ್ಷೇತ್ರ ಪುನರ್ವಿಂಗಡಣೆಯಿಂದ ರಾಜ್ಯಗಳಿಗೆ ಯಾವುದೇ ಅನ್ಯಾಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಮಹಿಳಾ ಮೀಸಲಾತಿ ಮಸೂದೆ ಮಹಿಳಾ ಸಬಲೀಕರಣದ ಐತಿಹಾಸಿಕ ಹೆಜ್ಜೆ ಎಂದು ಬಣ್ಣಿಸಿದ್ದಾರೆ. ಮಹಿಳಾ ಮೀಸಲಾತಿಗೆ ರಾಜಕೀಯದ ಬಣ್ಣ ಬಳಿಯುವ ಅಗತ್ಯವಿಲ್ಲ. ಈ ಕಾಯ್ದೆಯನ್ನು 25-30 ವರ್ಷಗಳ ಹಿಂದೆಯೇ ಜಾರಿಗೊಳಿಸಬೇಕಿತ್ತು ಎಂದಿದ್ದಾರೆ.
ಸೀಮಾ ನಿರ್ಣಯ ಮಸೂದೆ ಮತ್ತು ಮಹಿಳಾ ಕೋಟಾ ಮಸೂದೆಯ ಕುರಿತು ಮಾತನಾಡಿದ ಪ್ರಧಾನಿ ಮೋದಿ, ನಾನು ಒಂದು ಪಕ್ಷವನ್ನು ಹೊರತುಪಡಿಸಿ ಎಲ್ಲಾ ಪಕ್ಷಗಳನ್ನು ನಾನು ಭೇಟಿಯಾದೆ. ಯಾರೂ ಮಹಿಳಾ ಮೀಸಲಾತಿ ಮಸೂದೆಯನ್ನು ತಾತ್ವಿಕವಾಗಿ ವಿರೋಧಿಸಲಿಲ್ಲ. ಆದರೆ ಅದಾದ ನಂತರ ಒಂದು ರಾಜಕೀಯ ದೃಷ್ಟಿಕೋನವನ್ನು ಇಟ್ಟುಕೊಂಡು ಇದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಆದರೆ ನಾನು ಅಂತಹ ಜನರಿಗೆ ಸ್ನೇಹಿತನಂತೆ ಒಂದು ಸಲಹೆ ನೀಡಲು ಬಯಸುತ್ತೇನೆ. ನಾವೆಲ್ಲರೂ ಒಟ್ಟಿಗೆ ಇದನ್ನು ಜಾರಿಗೊಳಿಸಿದರೆ ದೇಶಕ್ಕೆ ಮಾಡಿದ ಸೇವೆಗಾಗಿ ಇತಿಹಾಸವು ನಮ್ಮನ್ನು ನೆನಪಿಸಿಕೊಳ್ಳುತ್ತದೆ ಎಂದು ಹೇಳಿದರು.
ನಾವು ಭಾರತೀಯರು ರಾಷ್ಟ್ರಕ್ಕೆ ಹೊಸ ದಿಕ್ಕು ನೀಡಲು ಒಗ್ಗೂಡುತ್ತಿದ್ದೇವೆ. ನಮ್ಮ ಆಡಳಿತ ವ್ಯವಸ್ಥೆಯನ್ನು ಬಲಪಡಿಸಲು ನಾವು ಅರ್ಥಪೂರ್ಣ ಪ್ರಯತ್ನ ಮಾಡುತ್ತಿದ್ದೇವೆ. ನಮ್ಮ ಆಡಳಿತ ವ್ಯವಸ್ಥೆಯನ್ನು ಬಲಪಡಿಸಲು ನಾವು ಅರ್ಥಪೂರ್ಣ ಪ್ರಯತ್ನ ಮಾಡುತ್ತಿದ್ದೇವೆ. ಭಾರತ ಪ್ರಜಾಪ್ರಭುತ್ವದ ತಾಯಿ. ಈ ಅಭಿವೃದ್ಧಿಯ ಪ್ರಯಾಣದಲ್ಲಿ ಹೊಸ ಆಯಾಮವನ್ನು ಸೇರಿಸಲು ನಮಗೆ ಪವಿತ್ರವಾದ ಅವಕಾಶ ನೀಡಲಾಗಿದೆ. ರಾಷ್ಟ್ರ ನಿರ್ಮಾಣದ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ದೇಶದ ಅರ್ಧದಷ್ಟು ಜನಸಂಖ್ಯೆಯಾದ ಮಹಿಳೆಯರನ್ನು ಸೇರಿಸಿಕೊಳ್ಳುವ ಅವಕಾಶ ನಮಗೆ ಸಿಕ್ಕಿರುವುದು ನಮ್ಮ ಅದೃಷ್ಟ ಎಂದರು.
ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾದರೆ, ಇದು ಎಲ್ಲರಿಗೂ, ಇಡೀ ರಾಷ್ಟ್ರಕ್ಕೆ ಸಾಮೂಹಿಕ ಯಶಸ್ಸು. ಇದು ಯಾವುದೇ ಒಂದು ಪಕ್ಷಕ್ಕೆ ಸಿಕ್ಕ ವಿಜಯವಾಗಿರುವುದಿಲ್ಲ. ಹೀಗಾಗಿ ಈ ಮಸೂದೆಗೆ ರಾಜಕೀಯ ಬಣ್ಣ ನೀಡುವ ಅಗತ್ಯವಿಲ್ಲ ಎಂದರು.
ಕ್ಷೇತ್ರ ಪುನರ್ವಿಂಗಡಣೆಯಿಂದ ಯಾವುದೇ ರಾಜ್ಯಕ್ಕೂ ಅನ್ಯಾಯವಾಗುವುದ್ಲಿಲ್ಲ. ಇಲ್ಲಿ ಯವುದೇ ದೊಡ್ಡ ರಾಜ್ಯ. ಚಿಕ್ಕ ರಾಜ್ಯ ಎಂಬ ಬೇಧವಿಲ್ಲ, ಬಡವ, ಶ್ರೀಮಂತ ಎಂದು ಬಿಂಬಿಸುವುದಿಲ್ಲ. ಎಲ್ಲಾ ರಾಜ್ಯಗಳೂ ಒಗ್ಗಟ್ಟಿನಲ್ಲಿ ಮುನ್ನಡೆಯಬೇಕು. ಅದುವೇ ಸಬ್ ಕಾ ಸಾತ್ ಸಬ್ ಕಾ ವಿಕಾಸ್. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಒಟ್ಟಾಗಿ ಯೋಚಿಸಬೇಕು. ವಿಕಸಿತ ಭಾರತ ಎಂದರೆ ರೈಲ್ವೆ, ರಸ್ತೆಗಳು, ಮೂಲಭೂತ ಸೌಕರ್ಯ, ಆರ್ಥಿಕತೆ ಅಥವಾ ಪ್ರಗತಿಯ ವ್ಯಕ್ತಿಗಳು ಮಾತ್ರವಲ್ಲ ಎಂದು ನಾನು ನಂಬುತ್ತೇನೆ. ಈ ಬಿಲ್ ರಾಜಕಾರಣ ಮಾಡುವುದಕ್ಕಾಗಿ ಅಲ್ಲ. ಯಾವುದೇ ರಾಜ್ಯಕ್ಕೆ ಅನ್ಯಾಯ ಮಾಡುವುದಿಲ್ಲ ಎಂದು ಹೇಳಿದರು.

