
ಪ್ರಗತಿವಾಹಿನಿ ಸುದ್ದಿ: ಹರಿಹರ ವೀರಶೈವ ಪಂಚಮಸಾಲಿ ಪೀಠದಿಂದ ಉಚ್ಛಾಟನೆಗೊಂಡಿರುವ ವಚನಾನಂದ ಶ್ರೀ ವಿರುದ್ಧ ಸಾಲು ಸಾಲು ಗಂಭೀರ ಆರೋಪಗಳು ಕೇಳಿಬಂದಿವೆ.
ಪಂಚಮಸಾಲಿ ಸಮಾಜ ಟ್ರಸ್ಟ್ನ ಸದಸ್ಯ ಎಚ್.ಎಸ್. ನಾಗರಾಜ್ ಎಂಬುವವರು ಸುದ್ದಿಗೋಷ್ಠಿ ನಡೆಸಿ ವಚನಾನಂದ ಶ್ರೀಗಳು ರಾಜ್ಯದ ಹಿರಿಯ ಮತ್ತು ಪ್ರಮುಖ ರಾಜಕೀಯ ನಾಯಕರೊಂದಿಗೆ ನಡೆಸಿದ ದೂರವಾಣಿ ಸಂಭಾಷಣೆಗಳನ್ನು ರೆಕಾರ್ಡ್ ಮಾಡಿಕೊಳ್ಳುತ್ತಿದ್ದಾರೆ. ಈ ರೆಕಾರ್ಡಿಂಗ್ಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವ ಅಭ್ಯಾಸ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಶ್ರೀಗಳ ಈ ನಡೆ ರಾಜ್ಯದಲ್ಲಿ ಅಧಿಕಾರದಲ್ಲಿರುವ ನಾಯಕರಿಗೆ ತೀವ್ರ ಅಪಾಯಕಾರಿ ಎಂದು ನಾಗರಾಜ್ ಎಚ್ಚರಿಸಿದ್ದು, ಯಾವುದೇ ನಾಯಕರು ಶ್ರೀಗಳೊಂದಿಗೆ ಫೋನ್ನಲ್ಲಿ ಮಾತನಾಡದಂತೆ ತಿಳಿಸಿದ್ದಾರೆ.
ಮತ್ತೊಂದೆಡೆ ಪಂಚಮಸಾಲಿ ಟ್ರಸ್ಟ್ ಸದಸ್ಯ ಚಂದ್ರಶೇಖರ್ ಪೂಜಾರ್, ವಚನಾನಂದ ಶ್ರೀಗಳು ಪ್ರತಿದಿನ ವಸತಿ ನಿಲಯದ ವಿದ್ಯಾರ್ಥಿಗಳಿಂದ ಬಲವಂತವಾಗಿ ಮಸಾಜ್ ಮಾಡಿಸಿಕೊಳ್ಳುತ್ತಿದ್ದರು. ಇದರಿಂದ ಬೇಸತ್ತ ವಿದ್ಯಾರ್ಥಿಗಳು ಹಲವರು ವಸತಿ ನಿಲಯ ತೊರೆದಿದ್ದಾರೆ. 60 ವಿದ್ಯಾರ್ಥಿಗಳ ಪೈಕಿ ಹಲವರು ವಸತಿ ನಿಲಯ ತೊರೆದಿದ್ದು, ಈಗ ಕೇವಲ 5 ವಿದ್ಯಾರ್ಥಿಗಳು ಇದ್ದಾರೆ ಎಂದಿದ್ದಾರೆ.
ಸ್ವಾಮೀಜಿ ನಡೆ ಗೊತ್ತಾಗಿ ಪೋಷಕರು ದೂರು ನೀಡಲು ಮುಂದಾಗಿದ್ದರು. ನಾವು ತಡೆದಿದ್ದೇವೆ. ಸ್ವಾಮೀಜಿ ಅವರಿಗೆ ಬುದ್ಧಿ ಹೇಳಲು ಹೋಗಿದ್ದಕ್ಕೆ ಟ್ರಸ್ಟ್ ವ್ರುದ್ಧವೇ ತಿರುಗಿ ಬಿದ್ದು, ಲೆಕ್ಕ ಕೊಡಿ ಹೋರಾಟ ಆರಂಭಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.

