
ಪ್ರಗತಿವಾಹಿನಿ ಸುದ್ದಿ: 16 ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನ್ಯೂ ಟೌನ್ ಪೊಲೀಸರು ಜೀವದ ಹಂಗು ತೊರೆದು ಕೆರೆಯ ನೀರಿಗೆ ಧುಮುಕಿ ಸಾಹಸಮಯವಾಗಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ‘ದಿಲೀಪ ಅಲಿಯಾಸ್ ಕರಿಯಾ’ ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಕಳ್ಳತನ ಹಾಗೂ ಕೊಲೆ ಯತ್ನ ಸೇರಿದಂತೆ ಒಟ್ಟು 16 ಗಂಭೀರ ಪ್ರಕರಣಗಳು ದಾಖಲಾಗಿದ್ದವು. ನ್ಯಾಯಾಲಯದಿಂದ ಮೂರು ಬಾರಿ ಜಾಮೀನು ರಹಿತ ವಾರಂಟ್ ಜಾರಿಯಾಗಿದ್ದರೂ ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಾಗಿದ್ದ.
ತನ್ನನ್ನು ಬಂಧಿಸಲು ಪೊಲೀಸರು ದಾಳಿ ನಡೆಸುತ್ತಿರುವ ಸುಳಿವು ಸಿಗುತ್ತಿದ್ದಂತೆ, ಆರೋಪಿ ಕರಿಯಾ ತಪ್ಪಿಸಿಕೊಳ್ಳಲು ನೇರವಾಗಿ ಸಮೀಪದಲ್ಲಿದ್ದ ಕೆರೆಯ ನೀರಿಗೆ ಹಾರಿ ಅಡಗಿ ಕುಳಿತಿದ್ದ. ಆದರೆ ಈತನ ಸುಳಿವು ಪತ್ತೆಹಚ್ಚುವಲ್ಲಿ ಸಿ.ಹೆಚ್.ಸಿ. ಗಂಗಾಧರ ಹಾಗೂ ಹಾಲಪ್ಪ ಪ್ರಮುಖ ಪಾತ್ರ ವಹಿಸಿದರು.
ತಕ್ಷಣವೇ ಕಾರ್ಯಪ್ರವೃತ್ತರಾದ ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಯ ಪಿಎಸ್ಐಗಳಾದ ರಮೇಶ್ ಹಾಗೂ ಪ್ರಸನ್ನ ತಮ್ಮ ಜೀವದ ಹಂಗು ತೊರೆದು ನೀರಿಗೆ ಧುಮುಕಿ ಆರೋಪಿಯನ್ನು ಸಾಹಸಮಯವಾಗಿ ವಶಕ್ಕೆ ಪಡೆದಿದ್ದಾರೆ.




