Karnataka NewsLatestPolitics

*ಕಾಂಗ್ರೆಸ್‌ ಮೀಸಲಾತಿ ವಿರೋಧಿ; ಜಾತಿ ಗಣತಿ ರಾಜಕೀಯ ನಾಟಕವಷ್ಟೇ: ಪ್ರಹ್ಲಾದ್ ಜೋಶಿ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ: ಕಾಂಗ್ರೆಸ್‌ ಒಂದು ರಾಷ್ಟ್ರೀಯ ಪಕ್ಷವಾಗಿ ಯಾವತ್ತೂ ಸಾಮಾಜಿಕ ಬದ್ಧತೆ ತೋರಿಲ್ಲ. ಈಗಲೂ ಮೀಸಲಾತಿ-ಜಾತಿ ಗಣತಿ ಎನ್ನುತ್ತ ರಾಜಕೀಯ ಡ್ರಾಮಾ ಮಾಡುತ್ತಿದೆ ಅಷ್ಟೇ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ ನಡೆಸಿದರು.

ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ ಇಂದು ಮಾದ್ಯಮದವರೊಂದಿಗೆ ಮಾತನಾಡುತ್ತ, ಪಂಡಿತ್‌ ನೆಹರು ಕಾಲದಿಂದಲೂ ಕಾಂಗ್ರೆಸ್‌ ಮೀಸಲಾತಿ ವಿರೋಧಿ ಆಗಿಯೇ ನಡೆದುಕೊಂಡಿದೆ. ಮೀಸಲಾತಿ ವಿರೋಧಿಸಿ ನೆಹರು ಪತ್ರವನ್ನೇ ಬರೆದಿದ್ದರು. ಇನ್ನು, ರಾಜೀವ್‌ ಗಾಂಧಿ ಸಹ ಮೀಸಲಾತಿ ವಿರುದ್ಧ ಸಂಸತ್‌ನಲ್ಲಿ ಸುದೀರ್ಘ ಭಾಷಣ ಬಿಗಿದಿದ್ದರು ಎಂದು ನೆನಪಿಸಿದರು.

Home add -Advt

ಈಗ ಕಾಂಗ್ರೆಸ್‌ ಮೀಸಲಾತಿ ವಿಚಾರದಲ್ಲಿ ಜನರ ಕಣ್ಣಿಗೆ ಮಣ್ಣೆರೆಚಲು ನೋಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸರ್ಕಾರದ ಆಡಳಿತ ವೈಫಲ್ಯವನ್ನು ಮರೆಮಾಚಲು ʼಜಾತಿ ಗಣತಿʼ ವಿಷಯ ಹರಿಬಿಡುತ್ತಿದ್ದಾರೆ ಎಂದು ಜೋಶಿ ಟೀಕಿಸಿದರು.

ಇತಿಹಾಸದಲ್ಲಿ ಯಾವತ್ತೂ ಕಾಂಗ್ರೆಸ್ ಮುಖಂಡರು ಮೀಸಲಾತಿ ಪರ ನಿಂತಿದ್ದಿಲ್ಲ. ಸಂವಿಧಾನದಲ್ಲಿ ಅಂಬೇಡ್ಕರ್‌ ಮೀಸಲಾತಿ ಕಲ್ಪಿಸಿದರೆ, ಕಾಂಗ್ರೆಸ್‌ ಅಧಿನಾಯಕರು ಸಂಸತ್ ನಲ್ಲಿ ಮೀಸಲಾತಿ ವಿರೋಧಿಸಿ ಉದ್ದುದ್ದ ಭಾಷಣ ಮಾಡಿದರು. ಈಗ ಜಾತಿ ಗಣತಿ, ಮೀಸಲಾತಿ ಎನ್ನುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ ಎಂದು ಲೇವಡಿ ಮಾಡಿದ ಸಚಿವರು, ಇದೊಂದು ರಾಜಕೀಯ ನಾಟಕವಾಗಿದೆ ಎಂದು ಟೀಕಿಸಿದರು.

ವಿಮಾನ ದುರಂತದ ಸಮಗ್ರ ತನಿಖೆ:
ವಿಮಾನ ದುರಂತ ದುರದೃಷ್ಟಕರ ಅವಘಡ. ಈ ದುರ್ಘಟನೆಯಲ್ಲಿ ಅನೇಕರ ಸಾವು ಸಂಭವಿಸಿರುವುದು ತೀವ್ರ ದುಃಖ ತರಿಸಿದೆ. ವಿಮಾನ ದುರಂತ ಬಗ್ಗೆ ಕೇಂದ್ರ ಸರ್ಕಾರ ಹಾಗೂ ಡಿಜಿಸಿಎ ಸಮಗ್ರ ತನಿಖೆ ನಡೆಸಲಿದೆ. ಭವಿಷ್ಯದಲ್ಲಿ ಇಂಥ ಅವಘಡಗಳು ಘಟಿಸದಂತೆ ಸರ್ಕಾರ ಮುನ್ನೆಚ್ಚರಿಕೆ ತೆಗೆದುಕೊಳ್ಳಲಿದೆ ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.

ವಿಮಾನ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಭಗವಂತ ದುಃಖ ಸಹಿಸಿಕೊಳ್ಳುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆ. ಕೇಂದ್ರ ಸರ್ಕಾರ, ವಿಮಾ ಕಂಪನಿ ಮತ್ತು ವಿಮಾನ ಸಂಸ್ಥೆಗಳಿಂದ ಸಮರ್ಪಕ ಪರಿಹಾರ ನೀಡಲಾಗುತ್ತದೆ. ಅಲ್ಲದೇ, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಹೇಳಿದರು.

Related Articles

Back to top button