*ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆಯಿಲ್ಲ ಎಂದ ಗೃಹ ಸಚಿವ*

ಪ್ರಗತಿವಾಹಿನಿ ಸುದ್ದಿ: ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಿಗೂಢವಾಗಿ ನಾಪತ್ತೆಯಾಗಿರುವ ವಿಚಾರವಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು, ಜ್ಞಾನೇಂದ್ರ ಕುಮಾರ್ ನಾಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಐಎಎಸ್ ಐಧಿಕಾರಿ ಜ್ಞಾನೇಂದ್ರ ಕುಮಾರ್ ಜೊತೆ ನಾನೇ ಖುದ್ದು ಮಾತನಾಡಿದ್ದೇನೆ. ಅವರು ನಾಪತ್ತೆಯಾಗಿಲ್ಲ. ಅವರ ತಂದೆಗೆ ಅನಾರೋಗ್ಯವಾಗಿದ್ದರಿಂದ ಅವರು ತಮ್ಮ ಊರಾದ ಉತ್ತರಪ್ರದೇಶಕ್ಕೆ ಹೋಗಿದ್ದಾರೆ. ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿಯಂತೆ ಅವರು ನಾಪತ್ತೆಯಾಗಿಲ್ಲ ಎಂದರು.
ತುರ್ತು ಕಾರಣಕ್ಕೆ ಅವರು ಊರಿಗೆ ಹೋಗಿದ್ದು, ಇನ್ನೆರಡು ದಿನದಲ್ಲಿ ವಾಪಸ್ ಬರುವುದಾಗಿ ಹೇಳಿದ್ದಾರೆ. ಸರ್ಕಾರಿ ಅಧಿಕಾರಿಯಾಗಿರುವುದರಿಂದ ಯಾವುದೇ ತನಿಖೆ ವಿಚಾರಣೆಗೂ ಸಿದ್ಧ ಎಂದು ತಿಳಿಸಿದ್ದಾರೆ ಎಂದರು.
ಈ ಹಿಂದೆ ಜ್ಞಾನೇಂದ್ರ ಕುಮಾರ್ ಕೆಪಿಎಸ್ ಸಿ ಯಲ್ಲಿ ಕಾರ್ಯನಿರ್ವಹಿಸಿದ್ದರು. ಈಗ ಕೆಪಿಎಸ್ ಸಿ ಹಗರಣ ಸಂಬಂಧ ಇಡಿ ದಾಳಿ, ತನಿಖೆಗಳು ನಡೆಯುತ್ತಿವೆ. ಇದೇ ಕಾರಣಕ್ಕೆ ಭಯಗೊಂಡು ನಾಪತ್ತೆಯಾಗಿದ್ದಾರೆ ಎಂದು ಸುದ್ದಿಯಾಗುತ್ತಿದೆ. ಆದರೆ ಅವರ ವಿರುದ್ಧ ಅಂತಹ ಯಾವುದೇ ಆರೋಪಗಳು ಇಲ್ಲ. ಯಾವುದೇ ಕೇಸ್ ಕೂಡ ಅವರ ಮೇಲಿಲ್ಲ. ಹಾಗೊಂದು ವೇಳೆ ವಿಚಾರಣೆಗಳಿದ್ದರೆ ತನಿಖೆಯಾಗಲಿಎಂದು ತಿಳಿಸಿದ್ದಾರೆ ಎಂದು ಹೇಳಿದರು.



